ಕರ್ನಾಟಕ ರಾಜಕಾರಣದಲ್ಲಿ ಆರ್ಎಸ್ಎಸ್ ನೊಂದಣಿ ವಿಚಾರ ಮತ್ತೊಮ್ಮೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಹೌದು ‘ಆರ್ಎಸ್ಎಸ್ ಕಡ್ಡಾಯವಾಗಿ ನೊಂದಣಿಯಾಗಬೇಕು ಎಂದು ಸವಾಲು ಹಾಕಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಭರ್ಜರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ಯಾವುದೋ ಸಣ್ಣಪುಟ್ಟ ಪುಸ್ತಕಗಳನ್ನು ಓದಿ ಮಾತನಾಡುವ ಬದಲು ಪ್ರಿಯಾಂಕ್ ಖರ್ಗೆ ಅವರು ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ಓದಲಿ ಎಂದು ಸಲಹೆ ನೀಡಿದ್ದಾರೆ. ಸಂಘಟನೆಗಳು ಕಡ್ಡಾಯವಾಗಿ ನೊಂದಣಿಯಾಗಬೇಕು ಎಂದು ಸಂವಿಧಾನದ ಯಾವ ವಿಭಾಗದಲ್ಲಿದೆ ಎಂಬುದನ್ನು ಖರ್ಗೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಆರ್ಎಸ್ಎಸ್ ಇವತ್ತು ನಿನ್ನೆಯ ಸಂಘಟನೆಯಲ್ಲ, ಅದು ಬ್ರಿಟಿಷರ ಕಾಲದಲ್ಲೇ ಸ್ಥಾಪನೆಯಾದ ಸಂಸ್ಥೆ. ಅಂದು ಅಷ್ಟು ಬಲಿಷ್ಠವಾಗಿದ್ದ ಬ್ರಿಟಿಷ್ ಸರ್ಕಾರಕ್ಕಾಗಲಿ ಅಥವಾ ದೇಶದ ಹಿಂದಿನ ಪ್ರಭಾವಿ ಪ್ರಧಾನಿಗಳಿಗಾಗಲಿ ಆರ್ಎಸ್ಎಸ್ ಅನ್ನು ತಡೆಯಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಅಶೋಕ್ ಈ ವೇಳೆ ನೆನಪಿಸಿದರು.
ಇದೇ ವೇಳೆ ಪ್ರಿಯಾಂಕ್ ಖರ್ಗೆ ಅವರಿಗೆ ಕೆಲವು ನೇರ ಪ್ರಶ್ನೆಗಳನ್ನು ಎಸೆದಿರುವ ಅಶೋಕ್, “ಬೆಂಗಳೂರಿನಲ್ಲಿ ಅದೆಷ್ಟೋ ಕ್ಲಬ್ಗಳು ಮತ್ತು ಚರ್ಚ್ಗಳಿವೆ, ಅವೆಲ್ಲವೂ ನೊಂದಣಿಯಾಗಿವೆಯೇ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಿದ ಅಹಿಂದ ಸಂಘಟನೆಗೆ ನೊಂದಣಿ ಇದೆಯೇ? ಹಾಗೆಯೇ ಮೊಹರಂ ಮೆರವಣಿಗೆ ಮಾಡುವವರಿಗೂ ನೊಂದಣಿ ಕಡ್ಡಾಯವೇ?” ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರು ಕೇವಲ ಪ್ರಚಾರಕ್ಕಾಗಿ ಮತ್ತು ಜನರನ್ನು ದಾರಿ ತಪ್ಪಿಸಲು ಇಂತಹ ಅಪ್ರಸ್ತುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಆರ್ ಅಶೋಕ್, ಸಂಘಟನೆಯ ಇತಿಹಾಸದ ಅರಿವಿಲ್ಲದೆ ಮಾತನಾಡುವುದು ಹಾಸ್ಯಾಸ್ಪದ ಎಂದಿದ್ದಾರೆ. ಹೌದು ‘ಸದ್ಯ ಈ ನೊಂದಣಿ ವಿವಾದ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ ಅಂತಾನೆ ಹೇಳಬಹುದು.
