Bellary News: ಕಾಂಗ್ರೆಸ್ ವಿರುದ್ಧ ಬಿಜೆಪಿ ಕೈಗ“ಂಡಿದ್ದ ಬೆಂಗಳೂರಿಂದ ಬಳ್ಳಾರಿವರೆಗಿನ ಬಳ್ಳಾರಿ ಚಲೋ ಪಾದಯಾತ್ರೆ ನಿನ್ನೆ ಅಂತ್ಯವಾಗಿದೆ. ಈ ವೇಳೆ ಬಳ್ಳಾರಿಯಲ್ಲಿ ಸಮರೋಪ ಸಮಾರಂಭ ಕಾರ್ಯಕ್ರಮ ಮಾಡಲಾಯಿತು.
ಈ ವೇಳೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಳ್ಳಾರಿ ಚಲೋ’ ಜನಾಂದೋಲನ ಪಾದಯಾತ್ರೆಗೆ ಅಭೂತಪೂರ್ವ ಜನಸಮರ್ಥನೆಯ ಸಮಾರೋಪ; ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತ ಕೊನೆಗೊಳಿಸುವ ನಮ್ಮ ಹೋರಾಟಕ್ಕೆ ದಿಕ್ಸೂಚಿ ಲಿಂಗಸುಗೂರಿನಿಂದ ಆರಂಭಗೊಂಡು ಒಂಬತ್ತು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿದ ಪಕ್ಷದ ನಮ್ಮ ಐತಿಹಾಸಿಕ ‘ಬಳ್ಳಾರಿ ಚಲೋ’ ಪಾದಯಾತ್ರೆ ಇಂದು ಬಳ್ಳಾರಿಯಲ್ಲಿ ಅಭೂತಪೂರ್ವ, ಬೃಹತ್ ಜನಸಮಾವೇಶದೊಂದಿಗೆ ವಿಜಯದುಂದುಭಿ ಮೊಳಗಿಸಿದೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸುವ ಮೂಲಕ ನಮ್ಮ ಪಕ್ಷದ ಐತಿಹಾಸಿಕ ‘ಬಳ್ಳಾರಿ ಚಲೋ’ ಜನಾಂದೋಲನ ಪಾದಯಾತ್ರೆ ಇಂದು ತನ್ನ ಗಮ್ಯಸ್ಥಾನವನ್ನು ಯಶಸ್ವಿಯಾಗಿ ತಲುಪಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ರೂಪಾಯಿಗಳ ಲೂಟಿ ಕೇವಲ ಒಂದು ಹಗರಣವಲ್ಲ, ಅದು ಶೋಷಿತರು, ಪರಿಶಿಷ್ಟ ಪಂಗಡದ ಶ್ರಮಿಕರು ಮತ್ತು ಬಡವರ ಹಕ್ಕನ್ನು ದೋಚಿರುವ ಅಕ್ಷಮ್ಯ ಅಪರಾಧ. ಇದಕ್ಕೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ! ಬಡವರ, ಶೋಷಿತರ ಪಾಲಿನ ಪ್ರತಿಯೊಂದು ಪೈಸೆಯೂ ಕೂಡ ಹಿಂದಿರುಗಿ ಬರುವವರಿಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
ಪಾದಯಾತ್ರೆಯ ದಾರಿಯುದ್ದಕ್ಕೂ ನಮ್ಮ ತಾಯಂದಿರು, ಹಿರಿಯರು, ಶ್ರಮಿಕರು, ರೈತರು, ದಲಿತರು ಹಾಗೂ ಅಲೆಮಾರಿ ಸಮಾಜ ಸೇರಿದಂತೆ ಎಲ್ಲರ ಆಶೀರ್ವಾದ, ನಮ್ಮ ಹೋರಾಟಕ್ಕೆ ಬೆಂಬಲ, ಆಶೀರ್ವಾದ, ಈ ದುರಾಡಳಿತದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಜನಾಂದೋಲನವಾಗಿ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಜನಸಮರ್ಥನೆಯ ದಾಖಲೆ ನಿರ್ಮಿಸಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟಿ ಕೋಟಿ ಲೂಟಿಯ ಪ್ರತಿಯೊಂದು ಪೈಸೆಯನ್ನು ಹಿಂತಿರುಗಿಸಿ ಶೋಷಿತರ ಅಭಿವೃದ್ಧಿಗೆ ಬಳಸಲೇಬೇಕು, SCP-TSP ಅನುದಾನದ ದುರ್ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಕಲ್ಯಾಣ ಕರ್ನಾಟಕದ ಹಕ್ಕಿನ ನೀರಾವರಿ ಮತ್ತು ರಸ್ತೆ ಅಭಿವೃದ್ಧಿಗಾಗಿ ಪ್ರತಿ ಕ್ಷೇತ್ರಕ್ಕೂ ೨೦೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎನ್ನುವುದೇ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯವಾಗಿದೆ ಎಂದು ವಿಜಯೇಂದ್ರ ವಾಾಗ್ದಾಳಿ ನಡೆಸಿದ್ದಾರೆ.
ರಿಯಲ್ ಎಸ್ಟೇಟ್ ಲಾಬಿಗೆ ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಕಾಂಗ್ರೆಸ್ ಸರ್ಕಾರ, ಕಲ್ಯಾಣ ಕರ್ನಾಟಕದ ಹಿತವನ್ನು ಬಲಿಕೊಟ್ಟಿರುವ ಆಡಳಿತಾರೂಢ ನಾಯಕರಿಗೆ, ನಮ್ಮ ಕೃಷಿಕರ ಹಾಗೂ ಯುವಜನರ ಹತಾಶೆ ಕಾಣುತ್ತಿಲ್ಲ. ಎಲ್ಲದ್ದಕ್ಕೂ ಕೇಂದ್ರದತ್ತ ಬೆರಳು ತೋರಿಸುತ್ತಾ ನೆಪ ಹೇಳುತ್ತಿರುವ ಈ ಅಸಮರ್ಥ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನತೆ ಈಗಾಗಲೇ ನಿಶ್ಚಯಿಸಿದ್ದಾರೆ. ರೈತವಿರೋಧಿ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶದ ಅಭಿವ್ಯಕ್ತಿಯಾಗಿರುವ ಈ ಪಾದಯಾತ್ರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೈತರು ಹಾಗೂ ಯುವಜನತೆಗೆ ಎಸಗಿರುವ ವಂಚನೆಯ ವಿರುದ್ಧ ಮತ್ತು ಕನ್ನಡಿಗರ ಹಕ್ಕುಗಳನ್ನು ಮರಳಿ ತರಲು ಈ ಜನಾಂದೋಲನವನ್ನು ಪಕ್ಷ ಕೈಗೆತ್ತಿಕೊಂಡಿತ್ತು.
ಈ ಲೂಟಿಕೋರ ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ದುರಾಡಳಿತದ ಕೃತ್ಯಕ್ಕೆ ತಕ್ಕ ಶಾಸ್ತಿ ಕಾಯುತ್ತಿದೆ. ಶೋಷಿತರ ಲೂಟಿಯಾದ ಸಾರ್ವಜನಿಕ ಹಣ ಮರಳಿ ಸಿಗುವವರೆಗೆ ಹಾಗೂ ಕಲ್ಯಾಣ ಕರ್ನಾಟಕದ ಭೂಮಿಗೆ ಸಂಪೂರ್ಣ ನ್ಯಾಯ ದೊರೆಯುವವರೆಗೆ ನಮ್ಮ ಈ ರಣಕಹಳೆ ಮತ್ತು ಜನಾಕ್ರೋಶದ ಸಮರ ವಿಶ್ರಮಿಸುವುದಿಲ್ಲ!
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ‘ವಿಕಸಿತ ಭಾರತ’ದ ಸಂಕಲ್ಪದೊಂದಿಗೆ, ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನ ಗೌರವ ಮತ್ತು ಹಕ್ಕುಗಳನ್ನು ಪುನಃಸ್ಥಾಪಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ, ಈ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸುವವರಿಗೂ ನಮ್ಮ ಹೋರಾಟ ನಿರಂತರ! ಇಂದಿನ ಸಮಾರೋಪ ಸಮಾರಂಭ ದುರಾಡಳಿತವನ್ನೇ ಹೊತ್ತು ಮಲಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಮುಂದಿನ ಹೋರಾಟದ ಪ್ರಾರಂಭವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.




