Political News: ಭಾರತ ಚೂರು ಚೂರಾಗಲಿ ಎಂದವನು ಹರಿಪ್ರಸಾದ್‌ರ ಪ್ರಕಾರ ದೇಶಪ್ರೇಮಿಯೇ..?: ಸಿ.ಟಿ.ರವಿ

Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಾಕಿಸ್ತಾನವನ್ನು ಬೆಂಬಲಿಸುವ ಉಮರ್ ಖಲೀದ್‌ನನ್ನು ರಾಷ್ಟ್ರೀಯವಾದಿ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ, ದೇಶದ್ರೋಹಿಗಳನ್ನು ಬೆಂಬಲಿಸುವುದು, ದೇಶ ಪ್ರೇಮಿಗಳು, ದೇಶಭಕ್ತಿಯನ್ನು ವಿರೋಧಿಸುವುದು ಕಾಂಗ್ರೆಸ್ ಪಕ್ಷದ ಹಳೆಯ ಚಾಳಿ. ದೇಶದ್ರೋಹಿಗಳನ್ನು ಆರಾಧಿಸುವ ಅದೇ ಬುದ್ಧಿಯನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮುಂದುವರಿಸಿದ್ದಾರೆ ಎಂದು ರವಿ ಕಿಡಿಕಾರಿದ್ದಾರೆ.

ಉಮರ್ ಖಾಲಿದ್ ಎನ್ನುವ ವ್ಯಕ್ತಿಯನ್ನು ದೆಹಲಿ ದಂಗೆಯ ಹಿಂದಿನ ಸಂಚು ರೂಪಿಸಿದ ಆರೋಪದಡಿ, ಭಯೋತ್ಪಾದನಾ ನಿಗ್ರಹ ಕಾಯ್ದೆಯಾದ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ. ಆದರೆ, ಇಂತಹ ವ್ಯಕ್ತಿ ಬಿ. ಕೆ. ಹರಿಪ್ರಸಾದ್ ಪಾಲಿಗೆ ರಾಷ್ಟ್ರೀಯವಾದಿ! ಎಂದು ರವಿ ಹರಿಪ್ರಸಾದ್ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ.

ಕಾಶ್ಮೀರ ಭಾರತೀಯರಿಗೆ ಸೇರಿದ್ದಲ್ಲ, ಕಾಶ್ಮೀರಿಗರಿಗೆ ಸೇರಿದ್ದು ಎಂದಾತ ದೇಶಪ್ರೇಮಿಯೇ? ಹರಿಪ್ರಸಾದ್ ಅವರಿಗೆ ದೇಶಪ್ರೇಮದ ಅರ್ಥ ಏನೆಂದಾದರೂ ತಿಳಿದಿದೆಯೇ? ‘ಭಾರತ್ ತೇರಾ ತುಕ್ಡೇ ಹೋಗೇ – ಇನ್ಶಾ ಅಲ್ಲಾ’ ಎನ್ನುತ್ತಾ, ಭಾರತ ಚೂರಾಗಲಿ ಎಂದು ಹಾರೈಸಿ ಕುಣಿದಾಡಿದರೆ ನೈಜ ಭಾರತೀಯನ ರಕ್ತ ಕುದಿಯುತ್ತದೆ. ಇಂತಹ ಘೋಷಣೆ ಕೂಗಿದ್ದ ವ್ಯಕ್ತಿ ಹರಿಪ್ರಸಾದ್ ಅವರಿಗೆ ದೇಶಪ್ರೇಮಿ!

ಓರ್ವ ದೇಶಪ್ರೇಮಿ ಮುಸಲ್ಮಾನ ಖಂಡಿತವಾಗಿಯೂ ಉಮರ್ ಖಾಲಿದ್‌ನನ್ನು ಒಪ್ಪಲಾರ. ಒಂದು ಕೋಮನ್ನು ಓಲೈಸುವ ಸಲುವಾಗಿ, ದೇಶ ವಿರೋಧಿಗೂ ಜೈಕಾರ ಹಾಕುವ ಸ್ಥಿತಿಗೆ ಇಳಿದಿರುವ ಕಾಂಗ್ರೆಸ್ ಪಕ್ಷ ಮತ್ತದರ ನಾಯಕತ್ವಕ್ಕೆ ಧಿಕ್ಕಾರವಿರಲಿ ಎಂದು ಹರಿಪ್ರಸಾದ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

About The Author