ಚೆಕ್ ಬೌನ್ಸ್ ಪ್ರಕರಣದಡಿ ಆರೋಪಿಯಾಗಿರುವ ಹಿರಿಯ ನಟಿ ಪದ್ಮಜಾ ರಾವ್, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ಪದ್ಮಜಾ ರಾವ್ ನೀಡಿದ್ದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ನೋಟೀಸ್ ನೀಡಿದರು ಪ್ರತಿಕ್ರಿಯೆ ನೀಡದ ಕಾರಣ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿತ್ತು.
ವಾರೆಂಟ್ ಹೊರಡಿಸಲಾದ ನಂತರ ನ್ಯಾಯಾಲಯಕ್ಕೆ ಹಾಜರಾದ ಪದ್ಮಜಾ ರಾವ್ ಜಾಮೀನು ಪಡೆದಿದ್ದಾರೆ. ಇದೀಗ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.
ಈ ಸಮಯದಲ್ಲಿ ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ದೇವರ ದಯೆಯಿಂದ ಈಗ ಎಲ್ಲವೂ ಸರಿಯಾಗಿದೆ. ನನಗೆ ಗೌರವಾನ್ವಿತ ಘನ ನ್ಯಾಯಾಲಯ ಮತ್ತು ಕಾನೂನು ವ್ಯವಸ್ಥೆ ಮೇಲೆ ಸಂಪೂರ್ಣವಾದ ನಂಬಿಕೆ ಇದೆ. ಸತ್ಯಾಂಶ ಏನು ಎಂಬುವದು ಆದಷ್ಟು ಬೇಗನೆ ಎಲ್ಲರಿಗೂ ತಿಳಿಯಲಿದೆ.
ಸದ್ಯ ಪ್ರಕರಣವು ನ್ಯಾಯಾಲಯದಲ್ಲಿ ಇರುವದರಿಂದ ನಾನೀಗ ಯಾವದೇ ಹೇಳಿಕೆ ಕೊಡುವದು ಸಮಂಜಸವಲ್ಲ. ನಾನು ಮೊದಲಿನಿಂದಲೂ ಸ್ವಪ್ರಯತ್ನದಿಂದ, ಕಠಿಣ ಪರಿಶ್ರಮದಿಂದ, ಎಲ್ಲವನ್ನೂ ಎದುರಿಸಿ, ನೈತಿಕವಾಗಿ ಬೆಳೆದು ಬಂದಿರುತ್ತೇನೆ. ಇನ್ನು ಮುಂದೆಯೂ ಹೀಗೆಯೇ ಇರುತ್ತೇನೆ. ನನ್ನ ಶಕ್ತಿ ನನ್ನ ಅಭಿಮಾನಿಗಳು, ಸ್ನೇಹಿತರು ಹಾಗೂ ನನ್ನ ಕುಟುಂಬ. ಅವರ ಬೆಂಬಲ ಇದೆ. ಅಷ್ಟು ಸಾಕು. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಯಾವಾಗಲೂ ಹೀಗೆ ಇರಲಿ.
-ಪದ್ಮಜಾ ರಾವ್, ಹಿರಿಯ ನಟಿ
