ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮೀಷನರೇಟ್ ಒಂದಿಲ್ಲೊಂದು ಕಾರ್ಯದ ಮೂಲಕ ಜನಮನ್ನಣೆ ಪಡೆದಿದೆ. ಸಾಕಷ್ಟು ಜನಪರ ಕಾರ್ಯದ ಮೂಲಕ ಜನಸ್ನೇಹಿ ಪೊಲೀಸ್ ಇಲಾಖೆಯಾಗಿ ಹೊರ ಹೊಮ್ಮಿದ್ದು, ಅಂತಹದೇ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದೆ.
ಹೌದು..ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯವರ ಮನವಿ ಮೇರೆಗೆ ಹಾಗೂ ಅಂಗಾಂಗ ಕಸಿ ಪ್ರಾಧಿಕಾರದ ನಿಯಮದಂತೆ ಇಂದು ಎಸ್.ಡಿ.ಎಂ ಆಸ್ಪತ್ರೆಯಿಂದ ”ಮೂತ್ರಪಿಂಡ” (Kidney) ಅಂಗವನ್ನು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ 12 ಕಿ.ಮೀ ಅಂತರವನ್ನು 07 ನಿಮಿಷಗಳಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಸಾಗಿಸಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆಯನ್ನು ಒದಗಿಸಲಾಯಿತು.
ಸುರಿಯುತ್ತಿದ್ದ ಮಳೆಯಲ್ಲಿಯೇ ಗ್ರೀನ್ ಕಾರಿಡಾರ್ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಾದ ಎಂ.ಎಸ್. ಹೊಸಮನಿ, ಶ್ರೀಕಾಂತ್ ತೋಟಗಿ, ಎಂ.ಎಸ್.ನಾಯ್ಕರ ಹಾಗೂ ಎಲ್ಲ ಸಿಬ್ಬಂದಿ ವರ್ಗದವರಿಗೆ ಮತ್ತು ಜೀರೋ ಟ್ರಾಫಿಕ್ ಗೆ ಸಹಕರಿಸಿದ ನಾಗರಿಕರಿಗೆ ಹಾಗೂ ಅಂಗಾಂಗ ಕಸಿ ದಾನ ಮಾಡಿದ ಕುಟುಂಬದವರಿಗೆ ಕಮೀಷನರೇಟ್ ವತಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕರ್ತವ್ಯದ ಜೊತೆಗೆ ಇಂತಹ ಸಾಮಾಜಿಕ ಜವಾಬ್ದಾರಿ ನಿಭಾಯಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.