ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಅನೇಕ ಜೀವನ ಪಾಠವನ್ನು ಹೇಳಿದ್ದಾರೆ. ಅವರು ಹೇಳಿದ ಎಲ್ಲ ನೀತಿಯನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅಂಥವರು ಖಂಡಿತ ಯಶಸ್ಸು ಗಳಿಸುತ್ತಾರೆ. ಅಂಥ ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಕಾಗೆಯನ್ನ ನೋಡಿ ನಾವು ಕಲಿಯಬೇಕಾಗಿದ್ದು ಸಾಕಷ್ಟಿದೆ ಎಂದಿದ್ದಾರೆ. ಹಾಗಾದ್ರೆ ಕಾಗೆಯನ್ನ ನೋಡಿ ನಾವು ಏನನ್ನು ಕಲಿಯಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಾವು ಕಾಗೆಯಿಂದ ಒಗ್ಗಟ್ಟನ್ನು ಕಲಿಯಬೇಕು ಅಂತಾರೆ ಚಾಣಕ್ಯರು. ಕಾಗೆ ತನಗೆ ಏನಾದರೂ ತಿನ್ನಲಿಕ್ಕೆ ಸಿಕ್ಕಿದ್ರೆ, ತನ್ನ ಬಳಗವನ್ನು ಕರೆದು ಅವರೊಟ್ಟಿಗೆ ತಿನ್ನುತ್ತದೆ. ಮನುಷ್ಯನೂ ಅದೇ ರೀತಿ ಸಹಬಾಳ್ವೆಯಿಂದ ಇರಬೇಕು. ಆಗಲೇ ಜೀವನ ಚೆಂದವಾಗಿರಲು ಸಾಧ್ಯ. ಸಕಲ ಸಮಯದಲ್ಲೂ ಕುಟುಂಬದ ಸಾಥ್ ಸಿಕ್ಕರೆ, ಯಶಸ್ಸು ಸಾಧಿಸಲು ನಿಮ್ಮನ್ನು ಯಾರೂ ತಡೆಯಲಾರರು.
ಎರಡನೇಯದಾಗಿ ಕಾಗೆಯಂತೆ ಶತ್ರುಗಳನ್ನ ಎದುರಿಸಲು ಕಲಿಯಬೇಕು. ಕಾಗೆ ತನ್ನ ಆಹಾರವನ್ನು ಕಾಪಾಡಿಕೊಳ್ಳಲು, ತನ್ನ ಬಳಗವನ್ನು ಕಾಪಾಡಿಕೊಳ್ಳಲು ಶತ್ರುಗಳನ್ನು ಎದುರಿಸುತ್ತದೆ. ಅದೇ ರೀತಿ ಮನುಷ್ಯ ಕೂಡ ಶತ್ರುಗಳನ್ನ ಎದುರಿಸಲು ಕಲಿಯಬೇಕು. ನಾವು ಧೈರ್ಯದಿಂದ ಶತ್ರುಗಳನ್ನ ಎದುರಿಸಿ ಮುನ್ನಡೆದರೆ, ನಮ್ಮ ದಾರಿಗೆ ಯಾರೂ ಅಡ್ಡ ಬರುವುದಿಲ್ಲ.
ಮೂರನೇಯದಾಗಿ ಕಾಗೆಯಂತೆ ಮನುಷ್ಯ ಕೂಡಾ ಎಚ್ಚರಿಕೆಯಿಂದಿರಬೇಕು. ಕಾಗೆ ತನ್ನ ಸುತ್ತ ಮುತ್ತಲೂ ಏನು ನಡೆಯುತ್ತಿದೆ..? ತನಗೆ ಅದರಿಂದೇನಾದ್ರೂ ಸಮಸ್ಯೆ ಇದೆಯಾ ಎಂಬುದನ್ನು ಸದಾ ಗಮನಿಸುತ್ತಲಿರುತ್ತದೆ. ಇದೇ ಎಚ್ಚರಿಕೆ ಮನುಷ್ಯನಿಗೂ ಇರಬೇಕು. ಸದಾ ಎಚ್ಚರಿಕೆಯಿಂದ ಇದ್ದರೆ, ನಾವು ಹಲವು ಕಷ್ಟಗಳಿಂದಲೂ ಪಾರಾಗಬಹುದು ಅಂತಾರೆ ಚಾಣಕ್ಯರು.