ಕಾಂಗ್ರೆಸ್ ರಾಷ್ಟ್ರೀಯ ನಾಯಕ ಮಾ.31ಕ್ಕೆ ಕರ್ನಾಟಕಕ್ಕೆ ಆಗಮನ – ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮ ನಿಮಿತ್ತ ಇದೇ 31 ರಂದು ಮಧ್ಯಾಹ್ನ 3.30 ಕ್ಕೆ ತುಮಕೂರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರ ಗದ್ದುಗೆಗೆ ಪೂಜೆ, ಗೌರವ ಸಲ್ಲಿಸುವರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮಾರ್ಚ್ 31ರಂದು ರಾಜ್ಯಕ್ಕೆ ರಾಹುಲ್ ಗಾಂಧಿ ಬೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿ, ಅಲ್ಲಿಯೇ ಪ್ರಸಾದ ಸ್ವೀಕರಿಸುತ್ತಾರೆ ಎಂದರು.

ನಂತರ ಬೆಂಗಳೂರಿಗೆ ಬಂದು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಬಿಬಿಎಂಪಿ ವ್ಯಾಪ್ತಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಂತರ ಏ.1 ರಂದು ಎಲ್ಲ ಶಾಸಕರು, ಮಾಜಿ ಶಾಸಕರು, 2018 ರ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಂಸತ್ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಲಿದ್ದಾರೆ. ಜೂಮ್ ಮೂಲಕ ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಸಕ್ರಿಯವಾಗಿರುವವರ ಜತೆ ಸಂಪರ್ಕ ಮಾಡಲಾಗುವುದು.

ರಾಜ್ಯದಲ್ಲಿ ಈಗಾಗಲೇ 47 ಲಕ್ಷ ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಇಡೀ ದೇಶದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಇನ್ನು ತಾಂತ್ರಿಕ ಕಾರಣದಿಂದ ಪ್ರಾವಿಷನ್ ಆಗಿರುವ ಸದಸ್ಯತ್ವ ಬೇರೆ ಇದೆ. 31 ರಂದು ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ ಮಾಡಬೇಕು ಎಂದು ಕೆಲವರು ಮನವಿ ಮಾಡಿದ್ದು, ಈ ಬಗ್ಗೆ ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ.

ಬ್ಲಾಕ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಪಕ್ಷದ ವಿವಿಧ ಚುನಾವಣೆಗಳು ತೀರ್ಮಾನ ಆಗಿದ್ದರಿಂದ ನಾವು ತರಾತುರಿಯಲ್ಲಿ ಸದಸ್ಯತ್ವ ಮಾಡಿದ್ದೇವೆ. ಎಲ್ಲವೂ ನೈಜ ಸದಸ್ಯತ್ವವಾಗಿವೆ.

ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಜತೆ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಅವರು ಬಯಸಿದ್ದಾರೆ. ಇನ್ನು ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ಎಸ್ಯೂಐ, ಸೇವಾದಳ ಹಾಗೂ ಮುಂಚೂಣಿ ಘಟಕಗಳ ಮುಖ್ಯಸ್ಥರ ಜತೆ ಪ್ರತ್ಯೇಕ ಸಭೆ ಮಾಡಲಿದ್ದಾರೆ.

31 ರಂದು ಪ್ರತಿಭಟನೆ:

ಮತ್ತೊಂದು ಪ್ರಮುಖ ವಿಚಾರ, ದಿನನಿತ್ಯ ಜನಸಾಮಾನ್ಯರ ಜೇಬು ಪಿಕ್ ಪಾಕೆಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ 31 ರಂದು ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ತಮ್ಮ ಮನೆಯ ಮುಂದೆ ತಮ್ಮ ವಾಹನ, ಗ್ಯಾಸ್ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ ಜಾಗಟೆ ಬಾರಿಸಬೇಕು. ನಂತರ ಅದರ ವಿಡಿಯೋ, ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಹಾಕಬೇಕು. ನಮ್ಮ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಇದನ್ನು ಮಾಡಬೇಕಾಗಿ ಮನವಿ ಮಾಡುತ್ತೇನೆ.

ಇದು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕ್ರಮ. ನಂತರ ಏ. 7 ರಂದು ಜಿಲ್ಲಾ ಮಟ್ಟದಲ್ಲಿ ಈ ವಿಚಾರವಾಗಿ ರಾಲಿ ಹಮ್ಮಿಕೊಳ್ಳಲು ಸೂಚನೆ ನೀಡುತ್ತೇವೆ.

ಯುಗಾದಿ, ಏ. 5 ರಂದು ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಹಿನ್ನೆಲೆಯಲ್ಲಿ 7 ರಂದು ಈ ಪ್ರತಿಭಟನೆ ಮಾಡಲು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸೂಚಿಸಿದ್ದು, ರಾಜ್ಯಮಟ್ಟದ ಪ್ರತಿಭಟನೆ ದಿನಾಂಕವನ್ನು ಚರ್ಚಿಸಿ ಪ್ರಕಟಿಸುತ್ತೇವೆ.

31 ರಂದು ರಾಹುಲ್ ಗಾಂಧಿ ಅವರು ಆಗಮಿಸಿದರೂ ಕೂಡ ನೀವು ಈ ಕಾರ್ಯಕ್ರಮ ಮಾಡಲೇಬೇಕು. ಜನರಿಗೆ ಬೆಲೆ ಏರಿಕೆ ವಿಚಾರ ತಿಳಿಯಬೇಕು.

ಬೆಳಗ್ಗೆ 8 ರಿಂದ 11 ಗಂಟೆ ಸಮಯದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಪ್ರಶ್ನೋತ್ತರ

ರಾಹುಲ್ ಗಾಂಧಿ ಅವರು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿ ಮಠಕ್ಕೆ ಭೇಟಿ ನೀಡುತ್ತಿದ್ದಾರೋ ಅಥವಾ ರಾಜ್ಯದ ನಾಯಕರ ಸಲಹೆ ಮೆರೆಗೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಗಾಂಧಿ ಕುಟುಂಬಕ್ಕೂ ಮಠಗಳು ಹಾಗೂ ಎಲ್ಲ ಧರ್ಮಗಳಿಗೂ ಇರುವ ಸಂಬಂಧ ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧದಂತೆ. ಗಾಂಧಿ ಕುಟುಂಬದವರು ಸಾವಿರಾರು ಮಠಗಳಿಗೆ ಭೇಟಿ ನೀಡಿದ್ದಾರೆ. ಶ್ರೀಮತಿ ಇಂದಿರಾಗಾಂಧಿ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿ ಹಸ್ತ ತೆಗೆದುಕೊಂಡು ಬಂದ ಇತಿಹಾಸವಿದೆ. ರಾಜೀವ್ ಗಾಂಧಿ ಅವರು ಶೃಂಗೇರಿ ಮಠದಲ್ಲಿ ವಾರಗಟ್ಟಲೆ ಹೋಮ ಹವನ ಮಾಡಿದ್ದರು. ಸೋನಿಯಾ ಗಾಂಧಿ ಅವರು ಕೂಡ ಸಿದ್ದಗಂಗಾ ಮಠಕ್ಕೆ ಬಂದು ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಠಗಳು ಕೊಟ್ಟ ಅನ್ನದಾಸೋಹ ಕಾರ್ಯಕ್ರಮ ಸಂದೇಶವನ್ನು ಇಟ್ಟುಕೊಂಡು ನಾವು ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಬಿಸಿಯೂಟ ಕಾರ್ಯಕ್ರಮ ಆರಂಭಿಸಿದ್ದೆವು.

ಈಗ ಕೆಲವು ಬಿಜೆಪಿ ನಾಯಕರು ಅದನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಗಾಂಧಿ ಕುಟುಂಬ ಮೊದಲಿನಿಂದಲೂ ಮಠಗಳಿಗೆ ಗೌರವ ನೀಡುತ್ತಿದೆ. ಇದೇನು ಹೊಸದಾಗಿ ಸೃಷ್ಟಿ ಮಾಡುತ್ತಿಲ್ಲ’ ಎಂದು ಉತ್ತರಿಸಿದರು.

ಕಾಂಗ್ರೆಸ್ ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿದೆಯೇ ಎಂಬ ಪ್ರಶ್ನೆಗೆ, ‘ಇಲ್ಲಿರುವ ನೀವು ನಾವೆಲ್ಲ ಯಾರು? ಹಿಂದೂ ಹಾಗೂ ಹಿಂದುತ್ವ ನಡುವೆ ಇರುವ ವ್ಯತ್ಯಾಸವನ್ನು ರಾಹುಲ್ ಗಾಂಧಿ ಅವರು ಜೈಪುರ ಭಾಷಣದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದು, ಬಡವರ ಊಟ, ಹೊಟ್ಟೆಪಾಡಿಗೂ ಕಲ್ಲು ಹಾಕಲು ಈ ಸರ್ಕಾರ ಪ್ರಚೋದನೆ ನೀಡುತ್ತಿದೆ. ಇದು ದೇಶಕ್ಕೆ ಮಾರಕ’ ಎಂದು ಉತ್ತರಿಸಿದರು.

ಇನ್ನು ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರು ಈ ವಿಚಾರವಾಗಿ ಚರ್ಚೆ ಮಾಡಿದ್ದು, ಮುಖ್ಯಮಂತ್ರಿಗಳ ಉತ್ತರಕ್ಕೆ ನಾವು ಕಾಯುತ್ತಿದ್ದೇವೆ. 40% ಜತೆಗೆ ಬೇರೆ ಭ್ರಷ್ಟಾಚಾರ ವಿಚಾರವಾಗಿ ಏನು ಹೇಳುತ್ತಾರೆ ಎಂದು ನೋಡಿ ನಂತರ ಕಾಂಗ್ರೆಸ್ ತನ್ನ ಕಾರ್ಯಯೋಜನೆ ತಿಳಿಸಲಿದೆ’ ಎಂದರು.

ಈ ರೀತಿ ಪತ್ರ ಬರೆಯುವುದು ಟ್ರೆಂಡ್ ಆಗಿದ್ದು, ನಾಳೆ ನಿಮ್ಮ ಸರ್ಕಾರ ಬಂದಾಗ ಇದೇ ರೀತಿ ಪತ್ರ ಬರೆದರೆ ಆಗ ನೀವು ರಾಜೀನಾಮೆ ನೀಡುತ್ತೀರಾ ಎಂಬ ಪ್ರಶ್ನೆಗೆ, ‘ನನ್ನ ಮೇಲೆ ಯಾರು ಪತ್ರ ಬರೆದಿದ್ದರು? ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದಾಗ ಯಾರಾದರೂ ಪತ್ರ ಬರೆದಿದ್ದರಾ? ಯಾವುದಾದರೂ ತನಿಖೆ ಆಗಿತ್ತಾ? ಲಂಚ, ರೇಪ್ ಕೇಸ್ ಗಳು ದಾಖಲಾಗಿದ್ದವಾ? ಏನು ಇರಲಿಲ್ಲ, ಆದರೂ ನನ್ನ ಮೇಲೆ ದಾಳಿ ಮಾಡಿ ಬಂದಿಸಿದ್ದು ಯಾಕೆ?’ ಎಂದು ಕೇಳಿದರು.

ಇದೊಂದು ಪೂರ್ವನಿಯೋಜಿತ ಷಡ್ಯಂತ್ರ ಎಂಬ ಬಿಜೆಪಿ ನಾಯಕರ ವಾದದ ಬಗ್ಗೆ ಕೇಳಿದಾಗ, ‘ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಾಗ ಅವರಿಗೆ ಬುದ್ದಿ ಇರಲಿಲ್ಲವೇ? ಯತ್ನಾಳ್, ವಿಶ್ವನಾಥ್ ಮಾತನಾಡಿದರಲ್ಲ ಅವರಿಗೆ ಬುದ್ಧಿ ಇರಲಿಲ್ಲವೇ? ಯಾವ ಕ್ರಮ ಕೈಗೊಂಡರು? ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ಆರೋಪ ನಿಜ ಎಂದು ಒಪ್ಪಿಕೊಂಡಂತೆ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ’ ಎಂದು ಉತ್ತರಿಸಿದರು.

ಅವಧಿಪೂರ್ವ ಚುನಾವಣೆ ಬರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ‘ಅವರು ಯಾವಾಗ ಬೇಕಾದರೂ ಚುನಾವಣೆ ಮಾಡಲಿ, ಈ ತಿಂಗಳು ಅಥವಾ ನಾಳೆಯೇ ಮಾಡಲಿ, ನವೆಂಬರ್ 27ಕ್ಕೆ ಚುನಾವಣೆ ಪ್ರಕಟಿಸಲಿ, ಕಾಂಗ್ರೆಸ್ ಸಜ್ಜಾಗಿದೆ’ ಎಂದರು.

ನವೆಂಬರ್ 27 ಎಂದು ಹೇಗೆ ಹೇಳುತ್ತೀರಾ ಎಂಬ ಪ್ರಶ್ನೆಗೆ, ‘ನಿಮಗೆ ಮಾಹಿತಿ ನೀಡಲು ಮೂಲಗಳು ಇರುವಂತೆ ನಮಗೂ ಇದ್ದಾರೆ. ನಮಗೂ ಮಾಹಿತಿ ಬರುತ್ತದೆ’ ಎಂದರು.

ಇತಿಹಾಸ ತಿರುಚಬಾರದು

ಪಠ್ಯ ಪುಸ್ತಕದಲ್ಲಿ ಟಿಪ್ಪು ಅವರ ವಿಚಾರಕ್ಕೆ ಕತ್ತರಿ ಹಾಕುವ ಸರ್ಕಾರದ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದು ಇತಿಹಾಸದ ವಿಚಾರ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ರಾಷ್ಟ್ರಪತಿಗಳು ಬಂದು ನಮಗೆ ಟಿಪ್ಪು ಬಗ್ಗೆ ಏನು ಪಾಠ ಮಾಡಬೇಕೋ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಅದನ್ನು ನೋಡಲಿ. ನಾವು ಈ ವಿಚಾರದ ಬಗ್ಗೆ ಆಮೇಲೆ ಮಾತನಾಡುವ’ ಎಂದರು.

ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಬಂದಿರುವುದಕ್ಕೆ ಯಾವುದೇ ದಾಖಲೆ ಇಲ್ಲವೆಂದು ಸಮಿತಿ ಹೇಳಿರುವ ಬಗ್ಗೆ ಪ್ರಸ್ತಾಪಿಸಿದಾಗ, ಟಿಪ್ಪುವಿಗೆ ಮೈಸೂರ್ ಹುಲಿ ಎಂದು ಬಿರುದು ಕೊಟ್ಟದ್ದು ಬ್ರಿಟಿಷರು. ನಾನಲ್ಲ, ಕಾಂಗ್ರೆಸ್ಸ್ನವರಲ್ಲ, ಬಿಜೆಪಿಯವರಲ್ಲ. ಹೋಗಿ ಲಂಡನ್ ಮ್ಯೂಸಿಯಂ ನಲ್ಲಿ ಇರುವ ದಾಖಲೆ ನೋಡಲಿ. ಬ್ರಿಟಿಷರನ್ನು ಕೇಳೋಣ. ಯಾರೂ ಕೊಟ್ರು ಬಿರುದು ಅಂತ.

ಸಮಿತಿಯಲ್ಲಿ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು ಇದ್ದಾರೆ ಎಂದು ಭಾವಿಸಿದ್ದೇನೆ. ಅವರು ಕುಲಕುಷವಾಗಿ ಇವೆಲ್ಲವನ್ನೂ ನೋಡುತ್ತಾರೆ ಎಂಬ ಭರವಸೆ ಇದೆ.

ಇತಿಹಾಸವನ್ನು ಯಾರೂ ತಿರುಚಲು ಸಾಧ್ಯವಿಲ್ಲ. ಟಿಪ್ಪು ಬ್ರಿಟಿಷರ ಜತೆ ಹೊರಡಿದ್ದು, ಕೊಲ್ಲೂರು, ಶೃಂಗೇರಿ ಮಠಗಳಿಗೆ ಏನೇನು ಮಾಡಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ಯಾರೂ ಸೃಷ್ಟಿಸಲು, ತಿರುಚಲು ಆಗದು.

ಸಮಿತಿಯವರು ಏನು ಮಾಡುತ್ತಾರೆ, ಸರಕಾರ ಏನು ಮಾಡುತ್ತದೆ ನೋಡಿ ಆಮೇಲೆ ಏನು ಮಾಡಬೇಕೋ ತೀರ್ಮಾನ ಮಾಡುತ್ತೇವೆ.

ಮುಸಲ್ಮಾನ ವ್ಯಾಪಾರಿಗಳಿಗೆ ನಿರ್ಬಂಧ ಹೇರಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಯಾವುದೇ ಧರ್ಮದವರ ವ್ಯಾಪಾರಕ್ಕೆ ಅಡಚಣೆ ಮಾಡಬಾರದು’ ಎಂದರು.

About The Author