ಹುಬ್ಬಳ್ಳಿ ಪ್ರಕರಣ: ಅಮಾಯಕರ ಬಂಧನವಾಗಿಲ್ಲ – CM ಬಸವರಾಜ ಬೊಮ್ಮಾಯಿ

ಚಿಕ್ಕಮಗಳೂರು : ಹುಬ್ಬಳ್ಳಿ ಗಲಭೆ ಘಟನೆಯಲ್ಲಿ ಅಮಾಯಕರ ಬಂಧನವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟ ಪಡಿಸಿದರು.

ಇಂದು ಶೃಂಗೇರಿ ಮೆಣಸೆ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿ ಘಟನೆಯಲ್ಲಿ ಅಮಾಯಕರನ್ನು ಸರ್ಕಾರ ಬಂಧಿಸಿದೆ ಎಂದು ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾವ ಅಮಾಯಕರ ಬಂಧನವೂ ಆಗಿಲ್ಲ ಸಾಕ್ಷ್ಯಾಧಾರದ ಮೇಲೆ ಬಂಧನವಾಗಿದೆ ಎಂದರು.

ಕೈ ಮುಖಂಡನ ಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ವೀಡಿಯೊ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ರಾಮನ ಹೆಸರಿನಲ್ಲಿ ರಾವಣ ರಾಜ್ಯವನ್ನು ಮಾಡಲು ಹೊರಟಿದ್ದಾರೆ ಎಂದು ವಿರೋಧಪಕ್ಷದವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರವರ ವ್ಯಾಖ್ಯಾನಗಳನ್ನು ಅವರು ನೀಡುತ್ತಾರೆ. ವಿರೋಧಪಕ್ಷದವರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ಜನ ಏನು ಹೇಳುತ್ತಾರೆ ಎನ್ನುವುದು ಮುಖ್ಯ ಎಂದರು.

ಮುಖ್ಯಮಂತ್ರಿಗಳು ಮೃದು ಧೋರಣೆ ಹೊಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಹುಬ್ಬಳ್ಳಿ, ಶಿವಮೊಗ್ಗ, ಘಟನೆಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ, ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಎಫ್.ಐ.ಆರ್.ದಾಖಲಿಸಲಾಗಿದೆ. ಧಾರವಾಡದ ಹಣ್ಣಿನ ಅಂಗಡಿ ಪ್ರಕರಣದಲ್ಲಿಯೂ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೂ ವಿಳಂಬ ಆಗಿಲ್ಲ. ಪೊಲೀಸ್ ನೇಮಕಾತಿಯಲ್ಲಿ ನಾವೇ ಕ್ರಮ ವಹಿಸಿದ್ದೇವೆ. ಇದಕ್ಕಿಂತ ಇನ್ನೇನು ಮಾಡಬೇಕು ಎಂದರು.

About The Author