ಮುಂಬೈ: ಐಪಿಎಲ್ನ 54ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸನ್ರೈಸರ್ಸ್ ಮತ್ತೆ ಮುಖಾಮುಖಿಯಾಗುತ್ತಿದೆ.
ವಾಂಖೆಡೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ಲೇ ಆಫ್ ಕನಸು ಕಾಣುತ್ತಿರುವ ಆರ್ಸಿಬಿಗೆ ಈ ಪಂದ್ಯ ಮಹತ್ವದಾಗಿದೆ. ರಾಯಲ್ ಚಾಲೆಂಜರ್ಸ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 13 ರನ್ಗಳಿಂದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಆರ್ಸಿಬಿ 11 ಪಂದ್ಯಗಳಿಂದ 6ರಲ್ಲಿ ಗೆದ್ದು 5ರಲ್ಲಿ ಸೋತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಇನ್ನು ಆರನೆ ಸ್ಥಾನದಲ್ಲಿರುವ ಸನ್ರೈಸರ್ಸ್ 10 ಪಂದ್ಯಗಳಿಂದ 5ರಲ್ಲಿ 5ರಲ್ಲಿ ಸೋಲು ಕಂಡಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಮೊನ್ನೆ ಗುಜರಾತ್ ವಿರುದ್ಧ ಅರ್ಧ ಶತಕ ಸಿಡಿಸಿದ್ದ ವಿರಾಟ್ ನಂತರ ಚೆನ್ನೈ ವಿರುದ್ಧ 30 ರನ್ ಸಿಡಿಸಿದ್ದರು.
ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಶಬಾಜ್ ಅಹ್ಮದ್ ಸ್ಫೋಟಕ ಬ್ಯಾಟಿಂಗ್ ಮಾಡಿದರೆ ಆರ್ಸಿಬಿ ದೊಡ್ಡ ಮೊತ್ತ ಪೇರಿಸುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ತಂಡದ ಬೌಲಿಂಗ್ ವಿಭಾಗ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹ್ಯಾಟ್ರಿಕ್ ಸಾಧಿಸಿತ್ತು. ವೇಗಿಗಳಾದ ಜೋಶ್ ಹೆಜ್ಲವುಡ್, ಹರ್ಷಲ್ ಪಟೇಲ್, ಮೊಹ್ಮದ್ ಸಿರಾಜ್ ಮತ್ತು ಸ್ಪಿನ್ನರ್ ವನಿಂದು ಹಸರಂಗ ಮ್ಯಾಚ್ ವಿನ್ನರ್ಗಳಾಗಿದ್ದಾರೆ.
ಅರೆಕಾಲಿಕಾ ಸ್ಪಿನ್ನರ್ಸ್ಗಳಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಶಬಾಜ್ ಅಹ್ಮದ್ ತಂಡಕ್ಕೆ ನೆರವಾಗಿದ್ದಾರೆ.
ಇನ್ನು ಸನ್ರೈಸರ್ಸ್ ಹೈದ್ರಾಬಾದ್ ತಂಡ ಸತತ ಐದು ಪಂದ್ಯಗಳನ್ನು ಗೆದ್ದ ನಂತರ ಮೂರು ಪಂದ್ಯಗಳನ್ನು ಕೈಚೆಲ್ಲಿದೆ. ನಾಯಕ ಕೇನ್ ವಿಲಿಯಮ್ಸನ್ ರನ್ ಗಳಿಸಲು ಪರದಾಡುತ್ತಿದ್ದಾರೆ. 10 ಪಂದ್ಯಗಳಿಂದ ವಿಲಿಯಮ್ಸ್ ಗಳಿಸಿದ್ದು 199 ರನ್.
ಸನ್ರೈಸರ್ಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡಿದೆ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದಿಂದ ಚೇತರಿಸಿಕೊಂಡಿಲ್ಲ. ಎಡಗೈ ವೇಗಿ ಟಿ. ನಟರಾಜನ್ ಕೂಡ ಚೇತರಿಸಿಕೊಂಡಿಲ್ಲ. ಆರ್ಸಿಬಿ ವಿರುದ್ಧ ಅದ್ಬುತವಾಗಿ ಬೌಲಿಂಗ್ ಮಾಡಿದ್ದ ಮಾರ್ಕೊ ಹನ್ಸನ್ ಆಡುವ ಸಾಧ್ಯತೆ ಇದೆ. ಮತ್ತೊರ್ವ ಯುವ ವೇಗಿ ಉಮ್ರಾನ್ ಮಲ್ಲಿಕ್ 157 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿರಬಹುದು ಆದರೆ ಡೆಲ್ಲಿ ಎದುರು ದುಬಾರಿಯಾಗಿದ್ದರು.
ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಒಳ್ಳೆಯ ಆರಂಭ ನೀಡುತ್ತಿದ್ದಾರೆ. ಇನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿದ್ದರೆ ತಂಡದ ಗೆಲುವು ಸುಲಭವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ನಿಕೊಲೊಸ್ ಪೂರಾನ್ಗೆ ಸಾಥ್ ಕೊಡುವ ಬ್ಯಾಟರ್ ಬೇಕಾಗಿದ್ದಾರೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಆರ್ಸಿಬಿ ತಂಡ : ವಿರಾಟ್ ಕೊಹ್ಲಿಘಿ, ಫಾಫ್ ಡುಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಮಾಹಿಪಾಲ್ ಲೊಮೊರೊರ್, ರಜತ್ ಪಟಿದಾರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಶಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹ್ಮದ್ ಸಿರಾಜ್, ಜೋಶ್ ಹೆಜ್ಲ್ವುಡ್.
ಸನ್ರೈಸರ್ಸ್ ತಂಡ: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡಿನ್ ಮಾರ್ಕ್ರಾಮ್, ನಿಕೊಲೊಸ್ ಪೂರಾನ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಸಿಯಾನ್ ಅಬೋಟ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಭುನನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್.
ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್ಸಿಬಿ
ಸನ್ರೈಸರ್ಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಆರ್ಸಿಬಿ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆರ್ಸಿಬಿ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಾ ಬಂದಿದೆ. ಈ ಜೆರ್ಸಿಯಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚುಘಿ ಅನ್ನೋದೇ ವಿಪರ್ಯಾಸ
ಡೆಲ್ಲಿಗೆ ಚೆನ್ನೈ ಸವಾಲು
ಐಪಿಎಲ್ನ ಮತ್ತೊಂದು ಪಂದ್ಯದಲ್ಲಿ ಇಂದು ಚೆನ್ನೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಪ್ಲೇ ಆಫ್ ರೇಸ್ ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಪಂದ್ಯವನ್ನು ಗೆಲ್ಲಲ್ಲೇಬೇಕಿದೆ. ಇತ್ತ ಧೋನಿ ನೇತೃಥ್ವದ ಚೆನ್ನೈ ತಂಡ ಆರ್ಸಿಬಿ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಆದರೂ ಅದೃಷ್ಟದ ಲೆಕ್ಕಾಚಾರದಲ್ಲಿ ಪ್ಲೇ ಆಫ್ಗೆ ಹೋಗಲು ಪ್ರಯತ್ನಿಸಲಿದೆ.