ಶಿವಮೊಗ್ಗ: ಕೂಡಲೇ ಕೆರೆ ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಡಿಸಿಗೆ ಸಚಿವ ಡಾ.ನಾರಾಯಣಗೌಡ ಸೂಚನೆ

ಶಿವಮೊಗ್ಗ,ಮೇ 23: ಶಿವಮೊಗ್ಗದಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋರ್ಟ್ ಸರ್ಕಲ್, ಬಾಪೂಜಿ ನಗರ, ಹೊಳೆಹೊನ್ನೂರು ರಸ್ತೆ, ವಿದ್ಯಾನಗರ, ನ್ಯೂ ಮಂಡ್ಲಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಕೋರ್ಟ್ ಸರ್ಕಲ್, ನ್ಯೂ ಮಂಡ್ಲಿ ಬಾಪೂಜಿನಗರದಲ್ಲಿ ರಾಜಕಾಲುವೆ ನೀರು ಉಕ್ಕಿ ಅನಾಹುತ ಸೃಷ್ಟಿಯಾಗಿದ್ದನ್ನು ಪರಿಶೀಲಿಸಿದ ಸಚಿವ ಡಾ.ನಾರಾಯಣಗೌಡ ಅವರು, ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ಒತ್ತುವರಿಯಿಂದ ಸಮಸ್ಯೆ ಆಗ್ತಿದೆ ಎಂದು ಸ್ಥಳೀಯರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.

ಬಿ.ಬೀರುವಳ್ಳಿಯಲ್ಲಿ ಕೆರೆ ಕಟ್ಟೆ ಒಡೆದಿರುವ ಸ್ಥಳಕ್ಕೆ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು. ಕೆರೆ ಕಟ್ಟೆ ಒಡೆದ ಪರಿಣಾಮ ಅಕ್ಕಪಕ್ಕದ ಬೆಳೆ ನಾಶವಾಗಿರುವ ಬಗ್ಗೆ ರೈತರ ಮನವಿ ಆಲಿಸಿದ ಸಚಿವರು, ಕೂಡಲೇ ಪರಿಹಾರ ನೀಡುವಂತೆ ಸೂಚಿಸಿದರು. ಜೊತೆಗೆ ಒಡೆದಿರುವ ಕೆರೆ ಕಟ್ಟೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತೀರ್ಥಹಳ್ಳಿಯಲ್ಲಿ ಒಂದು ಸಾವಾಗಿದ್ದು, 5 ಲಕ್ಷ ಪರಿಹಾರ ನೀಡಲಾಗಿದೆ. 2139 ಮನೆಗಳು ಜಲಾವೃತವಾಗಿದ್ದವು. 24 ಶಾಲೆಗಳು ಹಾನಿ, ಅಂಗನವಾಡಿಗಳ ಹಾನಿ – 17, ಕೆರೆಗಳ ಹಾನಿ – 43, ಸೇತುವೆ ಡ್ಯಾಮೇಜ್ – 20, ರಸ್ತೆ ಹಾನಿ(ಜಿಲ್ಲೆಯಾದ್ಯಂತ)- 24, ತೀವ್ರ ಮನೆಹಾನಿ 05, ಭಾಗಶಃ ಮನೆ ಹಾನಿ -257, ಜಾನುವಾರು ಹಾನಿ- 09
ವಿದ್ಯುತ್ ಕಂಬಗಳು ಹಾನಿ -427, 54 ಟ್ರಾನ್ಸ್ ಫಾರ್ಮರ್ ಗಳು ಹಾನಿ, ಭತ್ತ- 486 ಹೆಕ್ಟೇರ್, ಅಡಿಕೆ- 18.35 ಹೆಕ್ಟೇರ್, ಮುಸುಕಿನ ಜೋಳ- 2518 ಹೆಕ್ಟೇರ್
ಬಾಳೆ- 153.75 ಹೆಕ್ಟೇರ್, ಅಡಿಕೆ- 18.35 ಹೆಕ್ಟೇರ್
ಹಾನಿಯಾಗಿರುವುದು ಸೇರಿದಂತೆ ಮಳೆಯಿಂದ ಆಗಿರುವ ಹಾನಿಯ ಕುರಿತು ಸಂಪೂರ್ಣವಾಗಿ ವರದಿ ಪಡೆಯಲಾಗಿದ್ದು, NDRF ನಿಯಮದ ಪ್ರಕಾರ ಕೂಡಲೇ ಅಗತ್ಯ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಾದ್ಯಂತ ಸುಮಾರು 40 ಕೋಟಿ ರೂ.ನಷ್ಟು ಹಾನಿಯಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹೆಚ್ಚುವರಿ ಪರಿಹಾರಕ್ಕೆ ಮನವಿ ಮಾಡುವುದಾಗಿ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

ದಿಢೀರ್ ಆಗಿ ಸುರಿದ ಅಕಾಲಿಕ ಮಳೆಯಿಂದಾಗಿ ಅನಾಹುತ ಸಂಭವಿಸಿದೆ. ಇದರಿಂದ ಎಚ್ಚೆತ್ತು ಮುಂಗಾರಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ಸಮರ್ಥವಾಗಿ ಎದುರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡುವಲ್ಲಿ ನಮ್ಮ ಸರ್ಕಾರ ಯಾವತ್ತೂ ಹಿಂದೆ ಉಳಿದಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲದಿಂದಲೂ ಸಮಸ್ಯೆಯಾದ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಆಗುತ್ತಿದೆ. ಸದಕಾಲ ಜನರ ಜೊತೆ ನಮ್ಮ ಸರ್ಕಾರ ನಿಲ್ಲುತ್ತೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಸಂಸದರಾದ ಬಿವೈ ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಪರಿಷತ್ ಸದಸ್ಯರಾದ ಡಿಎಸ್ ಅರುಣ್, ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

About The Author