ಬೆಂಗಳೂರು: ಕಂಬಿ ಕಳವು ಮಾಡಲು ಹೋಗಿ ವಿದ್ಯುತ್‌ ತಂತಿ ತಗಲಿ ವ್ಯಕ್ತಿ ಸಾವು – BESCOM

ಬೆಂಗಳೂರು: ನಿರ್ಮಾಣ ಹಂತದಲ್ಲಿರವ ಕಟ್ಟದಿಂದ ಕಬ್ಬಿಣದ ಕಂಬಿ ಕಳವು ಮಾಡಲು ಹೋಗಿ ಕಂಬಿ ಅಕಸ್ಮಿಕವಾಗಿ ವಿದ್ಯುತ್‌ ತಂತಿಗೆ ತಗಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹಲಸೂರು ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಹಲಸೂರು ರಾಜಕಾಲುವೆಗೆ ಹೊಂದಿಕೊಂಡುವಿರುವ ಗುರುದ್ವಾರದ ಬಳಿ ಈ ಘಟನೆ ಸಂಭವಿಸಿದೆ. ಇದೊಂದು ಇಲಾಖೇತರ ವಿದ್ಯುತ್‌ ಅವಘಡವಾಗಿದ್ದು, ಮೃತ ವ್ಯಕ್ತಿಯ ಪೂರ್ತಿ ವಿವರ ದೊರೆತಿಲ್ಲ. ಪ್ರಾಥಮಿಕ ಮಾಹಿತ ಪ್ರಕಾರ ಮೃತ ವ್ತಕ್ತಿ ಹೆಸರು ಅಪ್ಪು ಸುಮಾರು 25ವರ್ಷ ಎಂದು ಗುರುತಿಸಲಾಗಿದೆ. ಈತ ಪಕ್ಕದ ಸ್ಲಂ ನಿವಾಸಿಯಾಗಿದ್ದು, ಸ್ಲಂ ನಿವಾಸಿಗಳು ಈತನ ಮಾಹಿತಿಯನ್ನು ಒದಗಿಸಿಲ್ಲವೆಂದು ಬೆಸ್ಕಾಂ ಇಂದಿರಾನಗರ ಕಾರ್ಯನಿರ್ವಾಹಕ ಇಂಜಿನಿಯರ್‌ ನರಸಿಂಹಮೂರ್ತಿ ತಿಳಿಸಿದ್ದಾರೆ.

ಪ್ರಕರಣದ ವಿವರ: ಗುರುದ್ವಾರದ ಬಳಿ ಇರುವ ರಾಜಕಾಲುವೆ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟದಿಂದ ಕಬ್ಬಿಣದ ಕಂಬಿ ಕಳವು ಮಾಡಲು ಹೋಗಿ ಈ ಪ್ರಕರಣ ನಡೆದಿದೆ. ಮೃತ ವ್ಯಕ್ತಿ ಕಂಬಿ ಕಳವು ಮಾಡಿ ಪಕ್ಕದ ಕಂಪೌಂಡ್‌ ಗೋಡೆ ಮೇಲೆ ನಡೆದು ಬರುತ್ತಿದ್ದಾಗ ಆಕಸ್ಮಿಕವಾಗಿ ಕಂಬಿ ರಾಜುಕಾಲುವೆ ಪಕ್ಕದಲ್ಲಿ ಹಾದು ಹೋಗಿರುವ ಎಲ್‌ ಟಿ ವಿದ್ಯುತ್‌ ತಂತಿಗೆ ತಗಲಿ, ವಿದ್ಯುತ್‌ ಪ್ರವಹಿಸಿ ಅಪ್ಪು ಮೃತ ಪಟ್ಟಿದ್ದಾನೆ. ಹಲಸೂರು ಪೋಲಿಸ್‌ ಠಾಣೆ ಇನ್ಸ್‌ ಪೆಕ್ಟರ್‌ ಮತ್ತು ಪೂರ್ವ ವಲಯದ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ವಿದ್ಯುತ್‌ ಅವಘಡ ಬೆಸ್ಕಾಂ ನಿರ್ಲಕ್ಷ್ಯದಿಂದಾಗಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಬ್ಬಿಣದ ಕಂಬಿ ವಿದ್ಯುತ್‌ ತಂತಿಗೆ ಸಿಕ್ಕಿ, ಮುರಿದ ವಿದ್ಯುತ್‌ ತಂತಿ ರಾಜಕಾಲುವೆಗೆ ಬಿದ್ದಿದೆ. ವಿದ್ಯುತ್‌ ತಂತಿಯು ಅಪಘಾತಕ್ಕಿಂತ ಮೊದಲೇ ಬಿದ್ದಿದೆ ಎಂಬ ಮಾಹಿತಿ ಸತ್ಯಕ್ಕೆ ದೂರ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹವನ್ನು ಬೌರಿಂಗ್‌ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಕುಟುಂಬಸ್ಥರ ಬಗ್ಗೆ ಬೆಸ್ಕಾಂ ಮತ್ತು ಪೋಲಿಸ್‌ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

About The Author