Friday, June 20, 2025

Latest Posts

ರಾಹುಲ್ ಗಾಂಧಿ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

- Advertisement -

State News:

ಬೆಂಗಳೂರು, ಅಕ್ಟೋಬರ್ 11: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ರಾಯಚೂರು ತಾಲೂಕಿನ ಗಿಲೆಸುಗೂರು ಗ್ರಾಮದಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಬೃಹತ್ ಸಮಾವೇಶದಲ್ಲಿ ಮರದಿಂದ ಭತ್ತವನ್ನು ಸುರಿಯುವ ಮೂಲಕ ಜನ ಸಂಕಲ್ಪ ಯಾತ್ತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.
‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವವರು. ಯಾವಾಗ ಕಾಂಗ್ರೆಸ್ ಸೇರಿದರೋ ಅಂದಿನಿಂದ ಸಮಾಜವಾದವನ್ನು ಮಡಿಚಿ ಮನೆಯಲ್ಲಿಟ್ಟಿದ್ದಾರೆ. ಮರೆತುಬಿಟ್ಟಿದ್ದೀರಿ. ದುಃಖದ ಸಂಗತಿಯೆಂದರೆ ಆ ಸಣ್ಣ ಹುಡುಗನ ಕೈಕೆಳಗೆ ಸೇವೆ ಮಾಡುತ್ತೀರಲ್ಲ. ಅವರು ಓಡು ಎಂದರೆ ಓಡುತ್ತೀರಿ, ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತೀರಿ. ಇದು ಸ್ವಾಭಿಮಾನದ ಸಂಕೇತವಲ್ಲ.”
“ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ಧಿರಿ. ರಾಹುಲ್ ಗಾಂಧಿ ರಾಜಕೀಯದಲ್ಲಿ ಪ್ರಸ್ತುತವಾಗಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾರೆ. ರೀಲಾಂಚಿಂಗ್ ರಾಹುಲ್ ಗಾಂಧಿ ಕಾರ್ಯಕ್ರಮವಿದು. ಈ ಯಾತ್ರೆ ದೇಶಕ್ಕಾಗಿ, ಜನರಿಗಾಗಿ, ದೀನದಲಿತರಿಗಾಗಿ ಅಲ್ಲ. ಅಂಥ ಭಾರತ್ ಜೋಡೋ ಯಾತ್ರೆಗೆ ನೀವು ಸಾಥ್ ನೀಡುತ್ತಿದ್ದೀರಿ, ನಿಮ್ಮ ಸ್ಥಾನ ಎಲ್ಲಿತ್ತು, ಏನಾಗಿದೆ ಎಂದು ನೀವು ನೋಡಿಕೊಳ್ಳಿ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ” ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅಲ್ಲಿರುವವರು ಸ್ವಲ್ಪ ದಿನಗಳಲ್ಲಿಯೇ ಈ ಕಡೆಗೆ ಬರುವವರಿದ್ದಾರೆ. ಈಗಾಗಲೇ ಸೂಚನೆಗಳು ಬರುತ್ತಿವೆ ಎಂದರು.
ರಾಜ್ಯಶಕ್ತಿ ಮತ್ತು ಜನ ಶಕ್ತಿ ಎರಡೂ ಪ್ರಜಾಪ್ರಭುತ್ವ ನಿರ್ಧಾರ ಮಾಡುತ್ತದೆ. ರಾಜ್ಯ ಶಕ್ತಿ ಜನಪರವಾಗಿದ್ದರೆ ಜನಶಕ್ತಿ ರಾಜ್ಯಪರವಾಗಿರುತ್ತದೆ. ರಾಜ್ಯಶಕ್ತಿ ಜನವಿರೋಧಿ ಕೆಲಸ ಮಾಡಿದಾಗ ಆಗ ಜನಶಕ್ತಿ ರಾಜ್ಯಶಕ್ತಿಯ ಪರವಾಗಿ ನಿಲ್ಲಲು ಸಾಧ್ಯವಿಲ್ಲ. ಕರ್ನಾಟಕ ಕಾಂಗ್ರೆಸ್ನ ಅಗ್ರಗಣ್ಯ ನಾಯಕರು ಹೇಳುವ ಅಹಿಂದದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದೀನದಲಿತರನ್ನೊಳಗೊಂಡಿದೆ. ಅದರಲ್ಲಿ ಈಗ ಹಿಂದುಳಿದ ವರ್ಗದವದರು, ದೀನದಲಿತರು ಅವರನ್ನು ಬಿಟ್ಟುಹೋಗಿದ್ದಾರೆ. ಕೇವಲ ಅಲ್ಪಸಂಖ್ಯಾತರಿದ್ದಾರೆ ಎಂದರು.
ರಾಜ್ಯಕ್ಕೆ ಕಾಂಗ್ರೆಸ್ ದೌರ್ಭಾಗ್ಯ ನೀಡಿದೆ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗದವರು, ದೀನದಲಿತರು ನೆನಪಾಗಲಿಲ್ಲ. ಅವರ ರಾಜಕುಮಾರ ಪಾದಯಾತ್ರೆ ಮಾಡುವರೆಂದು ರಾಯಚೂರಿಗೆ ತಯಾರಿಗೆ ಬಂದಿದ್ದಾರೆ. ಅವರಿಗೆ ರಾಯಚೂರಿನಲ್ಲಿ ಜನ ಸೇರುತ್ತಾರೋ ಇಲ್ಲವೋ ಎಂಬ ಭಯ ಇದೆ. ಅದಕ್ಕೆ ಬಂದಿದ್ದಾರೆ. ಎಸ್.ಸಿ/ ಎಸ್.ಟಿ ಮೀಸಲಾತಿ ಕಾಂಗ್ರೆಸ್ ಕೊಡುಗೆ ಎನ್ನುತ್ತಾರೆ. ಈ ರಾಜ್ಯವನ್ನು 60 ವರ್ಷ ಆಡಳಿತದಲ್ಲಿ 50 ವರ್ಷ ನೀವೇ ಆಳಿದ್ದೀರಿ. ಅಧಿಕಾರದಲ್ಲಿ ಇದ್ದಾಗ ದೀನದಲಿತರ ಜನಸಂಖ್ಯೆ ಹೆಚ್ಚಾಗಿದೆ. ಅವುಗಳಿಗೆ ಹೆಚ್ಚು ಜಾತಿಗಳು ಸೇರ್ಪಡೆಯಾಗಿವೆ. ಅವರ ಮೀಸಲಾತಿ ಹೆಚ್ಚಿಸಬೇಕು, ಅವಮಾನ, ತುಳಿತಕ್ಕೆ ಒಳಗಾಗಿದ್ದಾರೆ. ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದಾರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶಿಕ್ಷಣ ಇಲ್ಲ, ಉದ್ಯೋಗವಿಲ್ಲದೆ ಹಿಂದುಳಿದಿದ್ದಾರೆ, ಅವರನ್ನು ಕೈಯೆತ್ತಿ ಹಿಡಿಯಬೇಕೆಂಬ ಜಾನವೂ ಇಲ್ಲದೇ ಇದ್ದರು.
ಈಗ ಭಾಜಪದ ದಿಟ್ಟ ನಿಲುವು, ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದದಿಂದ ಮೀಸಲಾತಿ ಹೆಚ್ಚಿಸಿದಾಗ, ಇದು ಕಾಂಗ್ರೆಸ್ ಕೊಡುಗೆ ಎನ್ನುತ್ತಾರೆ. ಹತ್ತು ಹಲವಾರು ಭಾಗ್ಯ ಕೊಡುತ್ತೇವೆ ಎಂದು ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೌರ್ಭಾಗ್ಯ ನೀಡಿದ್ದಾರೆ ಎಂದರು.
ಆರ್.ಎಸ್.ಎಸ್ ಒಂದು ದೇಶಭಕ್ತಿಯ ಸಂಸ್ಥೆ
ಮುಖ್ಯಮಂತ್ರಿಗಳು ಆರ್ ಎಸ್.ಎಸ್ ಕೈಗೊಂಬೆ ಎಂದಿದ್ದಾರೆ. ಆರ್.ಎಸ್.ಎಸ್ ಒಂದು ದೇಶಭಕ್ತಿಯ ಸಂಸ್ಥೆ ದೇಶವನ್ನು ಒಗ್ಗೂಡಿಸಿ, ಕಟ್ಟಲು ಶ್ರಮಿಸಿದ, ದೀನದಲಿತರ ಸೇವೆ, ಅನಾಥರ ಸೇವೆ ಮಾಡಿ, ತಳಸಮುದಾಯಕ್ಕೆ ಧ್ವನಿಕೊಟ್ಟು ಮುಖ್ಯವಾಹಿನಿಗೆ ತಂದ ಶ್ರೇಷ್ಠ ಸಂಸ್ಥೆ ಆರ್.ಎಸ್.ಎಸ್. ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಾಡುತ್ತೇವೆ ಅಂದರು. ಆದರೆ ಈ ಭಾಗದ ಜನ ಆಶಾಭಾವನೆಯಿಂದ ಇದ್ದರು. ಕಲ್ಯಾಣವಾಗುತ್ತದೆ ಎಂದು. ಸ್ಪಷ್ಟ ನೀತಿ ಇಲ್ಲ, ಅನುದಾನ ಉಪಯೋಗಿಸಲಿಲ್ಲ. ಬಿಎಸ್ ವೈ ಅವರು 1800 ಕೋಟಿ ರೂ ಪ್ರತಿ ವರ್ಷ ನೀಡಿದರು. ನಾನು ಮುಖ್ಯಮಂತ್ರಿಯಾದ ನಂತರ ಮುಂದಿನ ವರ್ಷ ಮೂರು ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಬಜೆಟ್ ನಲ್ಲಿ ನೀಡಿ, ಕ್ರಿಯಾಯೋಜನೆ ರೂಪಿಸಿ, ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಸಹ-ಉಸ್ತುವಾರಿಗಳು ಡಿ.ಕೆ.ಅರುಣಾ, ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಗೋವಿಂದ್ ಕಾರಜೋಳ, ಸಚಿವರು. ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಸಂಸದರಾದ ರಾಜ ಅಮರೇಶ್ವರ ನಾಯ್ಕ್, ಸಂಗಣ್ಣ ಕರಡಿ, ಶಾಸಕರಾದ ಡಾ. ಶಿವರಾಜ್ ಪಾಟೀಲ್, ಶಿವನಗೌಡ ನಾಯ್ಕ್, ರಾಜು ಗೌಡ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್,ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಿಜೆಪಿ ರಾಯಚೂರು ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಹಾಗೂ ಜಿಲ್ಲೆಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.

- Advertisement -

Latest Posts

Don't Miss