Beauty Tips:
ಕಾಡಿನಲ್ಲಿ ಬೆಳೆಯುವ ಹಣ್ಣು ಗಳ ಪೈಕಿ ಪುನರ್ಪುಳಿ ಹಣ್ಣು ಕೂಡ ಒಂದು. ಇದನ್ನು ಕೋಕಂ ಹಣ್ಣು, ಮುರುಗಲು ಎಂದು ಕೂಡ ಕರೆಯುತ್ತಾರೆ. ಇದು ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತದೆ. ಆಹಾರ, ಔಷಧಿ ಗಳಲ್ಲಿ ಬಳಸುವ ಈ ಹಣ್ಣು ಪೋಷಕಾಂಶಗಳ ಆಗರವಾಗಿದೆ. ಇದರ ಎಲೆ, ಹಣ್ಣು, ಬೀಜ, ಸಿಪ್ಪೆ ಎಲ್ಲದರಲ್ಲೂ ಔಷಧೀಯ ಗುಣಗಳಿವೆ.
ಪುನರ್ಪುಳಿ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ3, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ, ಐರನ್, ಮ್ಯಾಂಗನೀಸ್, ಪೊಟಾಶಿಯಮ್ ಮತ್ತು ಜಿಂಕ್ ಮುಂತಾದ ಖನಿಜಾಂಶಗಳನ್ನು ಹೊಂದಿದೆ. ಇದರಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲ, ಆಸ್ಕೋರ್ಬಿಕ್ ಆಮ್ಲ, ಎಸಿಟಿಕ್ ಆಮ್ಲ ಮತ್ತು ಫೈಬರ್ ಅನ್ನು ಹೊಂದಿದೆ. ಈ ಹಣ್ಣು ವರ್ಷಕ್ಕೊಮ್ಮೆ ಬೆಳೆಯುತ್ತದೆಯಾದರೂ ಬೇರೆ ಬೇರೆ ವಿಧಗಳ ಮೂಲಕ ಇದನ್ನು ಶೇಖರಿಸಿ ವರ್ಷಪೂರ್ತಿ ಬಳಸಬಹುದಾಗಿದೆ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಗ್ಯಾಸ್ ತೊಂದರೆ, ಪಿತ್ತ, ಹೊಟ್ಟೆ ನೋವು ಮತ್ತು ಹಾರ್ಟ್ ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ದೂರ ಇರಬಹುದು ಎಂದು ಹೇಳಲಾಗುತ್ತದೆ.
ಇನ್ನು ಯಾವೆಲ್ಲಾ ಪ್ರಯೋಜನಗಳು ಈ ಹಣ್ಣಿನಿಂದ ಎಂದು ತಿಳಿದುಕೊಳ್ಳೋಣ…
ತೂಕ ಇಳಿಸಲು ಬಳಸಲಾಗುತ್ತೆ: ಕೋಕಂನಲ್ಲಿ ಹೈಡ್ರಾಕ್ಸಿಸಿಟ್ರಿಕ್ ಆಮ್ಲ ಇರುತ್ತದೆ. ಈ ಆಮ್ಲವು ಹಸಿವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಇದರಿಂದ ತೂಕ ಇಳಿಕೆಗೆ ಅನುಕೂಲವಾಗುತ್ತದೆ. ಇದು ಕಾರ್ಬೊಹೈಡ್ರೇಟ್ ಗಳು ಕೊಬ್ಬಾಗಿ ಪರಿವರ್ತನೆಗೊಳ್ಳುವುದನ್ನು ತಪ್ಪಿಸುತ್ತದೆ. ಪುನರ್ಪುಳಿ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆಮಾಡುತ್ತದೆ.
ಕ್ಯಾನ್ಸರ್ ಖಾಯಿಲೆಗೂ ಒಳ್ಳೆಯದು: ಮುರುಗಲು ಹಣ್ಣಿನಲ್ಲಿರುವ ಎಂಟಿ ಆಕ್ಸಿಡೆಂಟ್ ಮತ್ತು ಕಾರ್ಸಿನೋಜೆನಿಕ್ ಗುಣಗಳು ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಇದು ಫ್ರೀ ರೆಡಿಕಲ್ಸ್ ಗಳನ್ನು ಸ್ವಚ್ಛಗೊಳಿಸುವ ಮೂಲಕ ದೇಹದಲ್ಲಿನ ಜೀವಕೋಶಗಳ ಅಸಹಜ ಬೆಳವಣಿಗೆಯನ್ನು ತಡೆಯುತ್ತವೆ.
ಜೀರ್ಣಕ್ರಿಯೆಗೆ ಸಹಕಾರಿ: ಪುನರ್ಪುಳಿಯ ಸಿಪ್ಪೆಯನ್ನು ಒಣಗಿಸಿ ವರ್ಷಗಟ್ಟಲೆ ಇಡಬಹುದು. ಒಣಗಿಸಿದ ಸಿಪ್ಪೆಯನ್ನು ಸೇವಿಸುವುದರಿಂದ ಎಸಿಡ್ ರಿಫ್ಲೆಕ್ಸ್, ಎದೆಯುರಿ ಸಮಸ್ಯೆಗಳು ನಿವಾರಣೆಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಪ್ರಾಚೀನ ಕಾಲದಿಂದಲೂ ಇದನ್ನು ಬಳಸುತ್ತಿದ್ದಾರೆ. ಎಸಿಡಿಟಿ ತಡೆಗಟ್ಟಲು ಊಟದ ನಂತರ ಒಣಗಿದ ಹಣ್ಣಿನ ರಸ ತೆಗೆದುಕೊಳ್ಳುವುದು ಒಳ್ಳೆಯದು.
ಡಯಾಬಿಟೀಸ್ ನಿಯಂತ್ರಿಸುತ್ತೆ: ಕೋಕಂನಲ್ಲಿ ಎಂಟಿ ಡಯಾಬಿಟಿಕ್ ಗುಣಗಳಿವೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಡಯಾಬಿಟೀಸ್ ನಿಯಂತ್ರಣದಲ್ಲಿರುತ್ತೆ.
ಹೃದಯ ರೋಗಗಳು ದೂರ: ಕಡಿಮೆ ಕ್ಯಾಲೊರಿ ಮತ್ತು ಹೆಚ್ಚು ಫೈಬರ್ ನಿಂದ ಕೂಡಿದ ಹಣ್ಣು ಇದಾದ್ದರಿಂದ ಇದು ಹೃದಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಮ್ಯಾಗ್ನೀಷಿಯಂ, ಪೊಟಾಶಿಯಂ, ಮ್ಯಾಂಗನೀಸ್ ಮತ್ತು ಖನಿಜಗಳು ಹೃದಯದ ರೋಗಕ್ಕೆ ಕಾರಣವಾದ ಬ್ಲಡ್ ಪ್ರೆಶರ್ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಉತ್ತಮ ಎಂಟಿ ಆಕ್ಸಿಡೆಂಟ್ ಕೂಡ ಹೌದು.
ಖಿನ್ನತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತೆ: ಪುನರ್ಪುಳಿಯಲ್ಲಿ ಪ್ಲೆವೋನೈಡ್ಸ್, ಹೈಡ್ರಾಕ್ಸಿಸಿಟ್ರಿಕ್ ಎಸಿಡ್, ಗಾರ್ಸಿನೋಲ ಮತ್ತು ಎಂಥೋಸೈನಿನ್ ಇದೆ. ಇವುಗಳು ಮೆದುಳಿನಲ್ಲಿ ಸೆರೊಟೊನಿನ್ ಮಟ್ಟವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆಯಂತಹ ಮೆದುಳಿಗೆ ಸಂಬಂಧಪಟ್ಟ ಖಾಯಿಲೆಗಳು ದೂರವಾಗುತ್ತೆ. ಪುನರ್ಪುಳಿಯಿಂದ ಸಾರು, ಕೋಕಂ, ತಂಬುಳಿ ಮುಂತಾದವುಗಳನ್ನು ಮಾಡಿ ತಿನ್ನಬಹುದು. ಇದರಿಂದ ನಮ್ಮ ಶರೀರದ ಅನೇಕ ಸಮಸ್ಯೆಗಳು ದೂರವಾಗುತ್ತೆ.




