Hassan News:
ಹಾಸನದಲ್ಲಿ ಟಿಕೆಟ್ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ.ಇದೀಗ ಹೆಚ್ ಡಿ ಕೆ ಹೇಳಿಕೆಗೆ ರೇವಣ್ಣ ಕುಟುಂಬ ತಿರುಗಿ ಬಿದ್ದಿದ್ದಾರೆ. ಕಳೆದ 15 ವರ್ಷಗಳಿಂದ ಸತತವಾಗಿ ಆರು ರಿಂದ ಏಳು ಶಾಸಕರನ್ನು ರೇವಣ್ಣ ಅವರು ಆಯ್ಕೆ ಮಾಡಿ ಕಳುಹಿಸಿದ್ದಾರೆ, ಹಾಸನವನ್ನು ರೇವಣ್ಣ ಅವರು ತಿಳಿದಿರುವಷ್ಟು ಬೇರೆ ಯಾರಿಗೂ ಗೊತ್ತಿಲ್ಲ ಎಂದು ಎಂಎಲ್ ಸಿ ಸೂರಜ್ ರೇವಣ್ಣ ಹೇಳಿದ್ದಾರೆ.
ಅರಕಲಗೂಡು ತಾಲ್ಲೂಕು ಹರದೂರು ಗ್ರಾಮದಲ್ಲಿ ಮಾತನಾಡಿರುವ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ನಮ್ಮತಾಯಿಗೆ ಟಿಕೆಟ್ ಕೊಡಬೇಕು, ಇವತ್ತಿನ ಲೆಕ್ಕಾಚಾರ ನೋಡಿದರೆ ಭವಾನಿ ರೇವಣ್ಣ ಅಭ್ಯರ್ಥಿ ಆದರೆ ಗೆಲುವು ಖಚಿತ. ಇದನ್ನು ಬರೆದಿಟ್ಟುಕೊಳ್ಳಿ ಬೇಕಾದರೆ. ಇದನ್ನು ಬಿಟ್ಟು ಬೇರೆ ಜನಸಾಮಾನ್ಯರನ್ನು, ಕಾರ್ಯಕರ್ತರನ್ನು ನಿಲ್ಲಿಸುತ್ತೇವೆ ಎನ್ನುವ ಹೇಳಿಕೆಗಳನ್ನು ಬಿಟ್ಟುಬಿಡಬೇಕು. ರೇವಣ್ಣ ಸಾಹೇಬರಂತೆ ಹಾಸನ ಜಿಲ್ಲೆಯನ್ನು ಅರಿತಿರುವ ಮತ್ತೊಬ್ಬ ವ್ಯಕ್ತಿ ಈ ಭೂಮಿಯಲ್ಲಿ ಇಲ್ಲವೇ ಇಲ್ಲ. ಅವರು ಇಡೀ ಜಿಲ್ಲೆಯನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹದಿನೈದು ವರ್ಷದಿಂದ ಸತತವಾಗಿ ಆರರಿಂದ ಏಳು ಜನ ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಇದು ರೇವಣ್ಣ ಅವರ ಸ್ವಂತ ಪ್ರಯತ್ನ. ಅವರನ್ನು ಬಿಟ್ಟರೆ ಇನ್ಯಾರಿಗೂ ಈ ಜಿಲ್ಲೆಯಲ್ಲಿ ಟಿಕೆಟ್ ಬಗ್ಗೆ ಮಾತನಾಡಲು ಅವಕಾಶವಿಲ್ಲ’ ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದರು.
‘ಮೊದಲಿನಿಂದಲೂ ನಮ್ಮ ತಾತ (ಎಚ್.ಡಿ.ದೇವೇಗೌಡ) ಈ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಈಗ ನನ್ನ ಪರಿಸ್ಥಿತಿ ತಗೊಳಿ. ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿದ್ದವು. ಆದರೆ ದೇವೇಗೌಡರು ಸೂರಜ್ರೇವಣ್ಣ ಅಭ್ಯರ್ಥಿಯಾಗಬೇಕು ಎಂದು ತೀರ್ಮಾನಿಸಿದರು ಎಂದು ಸ್ಮರಿಸಿದರು.
ಈಗ ಇಲ್ಲಿನ ರಾಜಕೀಯ ಸನ್ನಿವೇಶ ಬದಲಾಗಿದೆ. ಹಾಲಿ ಶಾಸಕರು ನಮ್ಮ ಕಾರ್ಯಕರ್ತರಿಗೆ ತೊಂದರೆ ಮಾಡುತ್ತಿದ್ದಾರೆ. ನಾವು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಹಾಸನ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಶಾಸಕರು ಆರಿಸಿ ಬರಬೇಕಿದೆ. ಇದು ನಿಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದು ಕಾರ್ಯಕರ್ತರು, ಜನರ ಅಪೇಕ್ಷೆಪಟ್ಟಿದ್ದಾರೆ. ನಮ್ಮವರ ವಿರುದ್ಧ ನಮ್ಮ ಸ್ಪರ್ಧೆಯಿಲ್ಲ’ ಎಂದು ಅವರು ತಿಳಿಸಿದರು. ಇನ್ನೂ ಇದೇ ವೇಳೆ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟನೆ ಕೂಡಾ ನಡೆಸಿದರು.