ಹುಬ್ಬಳ್ಳಿ ಗಾಂಜಾ ಮಾರಾಟ ಪ್ರಕರಣ: ಮತ್ತೋರ್ವ ರಾಜಸ್ತಾನಿ ಅರೆಸ್ಟ್

Hubli News: ಹುಬ್ಬಳ್ಳಿ: ಈಗಾಗಲೇ ಮಾದಕ ವಸ್ತುಗಳ ಕಡಿವಾಣಕ್ಕೆ ಪಣ ತೊಟ್ಟಿರುವ ಹು-ಧಾ ಪೊಲೀಸರು, ಇದೀಗ ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಶರಹ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೈಲ್ವೆ ನಿಲ್ದಾಣ ಬಳಿಯ ಬುಗಿ ಬುಗಿ ಹೊಟೆಲ್ ಹತ್ತಿರ ವ್ಯಕ್ತಿಯೊರ್ವ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ದಕ್ಷಿಣ ವಿಭಾಗದ ಎಸಿಪಿ ನೇತೃತ್ವದಲ್ಲಿ ಪಿಐ ಎಮ್.ಎಮ್.ತಹಶಿಲ್ದಾರ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ರಾಜಸ್ಥಾನ ಮೂಲದ ಓಂಪ್ರಕಾಶ್ ವೀರಮಾರಮ ಬಾರಮೇರ ಎಂದು ಗುರುತಿಸಲಾಗಿದೆ. ಈತನಿಂದ ಸ್ಥಳದಲ್ಲಿ 85000 ಸಾವಿರ ಮೌಲ್ಯದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 9 ಲಕ್ಷ ರೂ ಮೌಲ್ಯದ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಅಷ್ಟೇ ಅಲ್ಲದೇ ಆರೋಪಿಯ ಮನೆ ಪರಿಶೀಲಿಸಿದಾಗ 96,50,000 ರೂ ನಗದು ಹಣ ಹಾಗೂ 50 ಸಾವಿರ ಮೌಲ್ಯದ ಐಫೋನ್‌, ವಿವಿಧ ಬ್ಯಾಂಕಿನ 30 ಎಟಿಎಂ ಕಾರ್ಡ್, 36 ಚೆಕ್ ಬುಕ್, 4 ಪಾಸ್ ಬುಕ್, 9 ಪಾನ ಕಾರ್ಡ್, 7 ರಬ್ಬರ್ ಸ್ಟಾಂಪ್, 6 ಸ್ವಾಪಿಂಗ್ ಮಷಿನ್ ಜಪ್ತಿ ಮಾಡಲಾಗಿದೆ.

ಆರೋಪಿ ಓಂಪ್ರಕಾಶ್ ರಾಜಸ್ತಾನ ಮೂಲದ ಅಶೋಕಕುಮಾರ ಎಂಬಾತನಿಂದ ಗಾಂಜಾವನ್ನು ತಂದಿರುವುದಾಗಿ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ. ಅಷ್ಟೇ ಇದಕ್ಕಾಗಿ ನಕಲಿ ದಾಖಲಾತಿಗಳನ್ನು ಬಳಸ ಬ್ಯಾಂಕ್ ಉಳಿತಾಯ ಖಾತೆ, ಚಾಲ್ತಿ ಖಾತೆ ತೆರೆದಿರುವುದು ಕಂಡುಬಂದಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ಅಧಿಕಾರಿಗಳು ಶರಹ ಪೊಲೀಸರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ ಐ ಮಾರುತಿ ಆರ್, ಎ ಎಸ್ ಐ ದಾಸನ್ನವರ, ಹೆಚ್ ಸಿ ಬಿಎಸ್ ಆವಟಿ, ಸಿಬ್ಬಂದಿಗಳಾದ ಆರ್.ಎಮ್‌ಹೊರಟ್ಟಿ, ಜಗದೀಶ್ ಮೇಗಿನಮನಿ, ಆರ್.ಪಿ ಕೆಂದೂರ, ರಾಮರಾವ್ ರಾಥೋಡ, ಕನಕಪ್ಪ ರಗನಿ, ಪ್ರಕಾಶ್ ಮಲ್ಲರೆಡ್ಡಿ ಸೇರಿದಂತೆ ಇತರ ಸಿಬ್ಬಂದಿಗಳು ಭಾಗಿಯಾಗಿದ್ದರು.

ಇನ್ನೂ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪೋಲೀಸ್ ಅಧಿಕಾರಿಗಿಗೆ ಹಾಗೂ ಸಿಬ್ಬಂದಿಗಳಿಗೆ ಬಹುಮಾನ ಜೊತೆಗೆ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

About The Author