Yadagiri News: ಯಾದಗಿರಿ ಜಿಲ್ಲೆಯ ಶಾಹಾಪುರದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಎದೆ ನೋವು ಎಂದು ಹೇಳಿದರೂ, ಆತನ ಆರೈಕೆ ಮಾಡದೇ, ಆಸ್ಪತ್ರೆಗೆ ಸೇರಿಸದೇ, ಬೈದು ಕ್ಲಾಸಿನಲ್ಲೇ ಕೂರಿಸಿದ್ದು, ಶಿಕ್ಷಕನ ಈ ದುರ್ವರ್ತನೆಯಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಚೇತನ್ (17) ಮೃತ ವಿದ್ಯಾರ್ಥಿಯಾಗಿದ್ದು, ಹತ್ತನೇ ತರಗತಿ ಓದುತ್ತಿದ್ದ. ಈತ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ನಿನ್ನೆ ಶಾಲೆಯಲ್ಲಿ ಪರೀಕ್ಷೆ ಇದ್ದ ಕಾರಣ, ಪರೀಕ್ಷೆ ಬರೆಯಲು ಶಾಲೆಗೆ ಬಂದಿದ್ದ. ಆಗ ಚೇತನ್ಗೆ ವಾಂತಿಯಾಗಿತ್ತು. ಆಗ ಚೇತನ್ ತನಗೆ ಎದೆ ನೋವಾಗುತ್ತಿದೆ, ಬೇಗ ಮನೆಗೆ ಹೋಗುತ್ತೇನೆ ಎಂದಿದ್ದಾನೆ. ಆದರೆ ಶಿಕ್ಷಕ ಚೇತನ್ಗೆ ನೀನು ಪರೀಕ್ಷೆ ಬರೆಯದೇ ಇರಲು ನಾಟಕ ಮಾಡುತ್ತಿದ್ದೀ ಎಂದು ಗದರಿದ್ದಾರೆ.
ಬಳಿಕ ಈತನ ಸಹೋದರಿ, ಪೋಷಕರಿಗೆ ಕರೆ ಮಾಡಲು ಅವಕಾಶವಾದರೂ ಕೊಡಿ ಎಂದಿದ್ದಾಳೆ. ಆಕೆಗೂ ಬೈದು ಕೂರಿಸಲಾಗಿದೆ. ಪರೀಕ್ಷೆ ಬರೆಯುತ್ತ ಚೇತನ್ ಕುಸಿದು ಬಿದ್ದಿದ್ದಾನೆ. ಆಗ ಅಲ್ಲೇ ಇದ್ದ ಕೆಲ ವಿದ್ಯಾರ್ಥಿಗಳು ಚೇತನ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅದಾಾಗಲೇ ಚೇತನ್ ಮೃತಪಟ್ಟಿದ್ದಾನೆ. ವಿಷಯ ತಿಳಿದ ಪೋಷಕರು ಮಗನ ಸಾವಿಗೆ ಶಿಕ್ಷಕನೇ ಕಾರಣವೆಂದು ಹೇಳಿದ್ದು, ಸದ್ಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.