ಇವತ್ತು ರಾಜ್ಯಾದ್ಯಂತ ಸಾರಿಗೆ ನೌಕರರ ಒಕ್ಕೂಟ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿತ್ತು. ಇದೀಗ ಹೈಕೋರ್ಟ್ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಲಾಗಿದೆ. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಮುಷ್ಕರದಿಂದ ಹಿಂದೆ ಸರಿದಿದ್ದಾರೆ. ಜೊತೆಗೆ 4 ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ, ಹೈಕೋರ್ಟ್ ನೋಟಿಸ್ ನೀಡಿದೆ.
ಆಗಸ್ಟ್ 4ರಂದು ವಕೀಲ ಅಮೃತೇಶ್ ಮತ್ತು ಸಾರಿಗೆ ಇಲಾಖೆ ಪರ ವಕೀಲರು, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು. 1 ದಿನದ ಮಟ್ಟಿಗೆ ಮುಷ್ಕರ ನಿಲ್ಲಿಸುವಂತೆ, ನ್ಯಾಯಾಲಯ ಸೂಚಿಸಿತ್ತು. ಆದರೂ ಮುಷ್ಕರ ಆರಂಭಿಸಿದ್ದ ಸಂಘಟನೆಗಳಿಗೆ, ಹೈಕೋರ್ಟ್ ವಿಭಾಗೀಯ ಪೀಠ ತರಾಟೆ ತೆಗೆದುಕೊಂಡಿದೆ.
ನಿಮ್ಮ ಸಮಸ್ಯೆ ಏನಿದ್ದರೂ, ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿ ಇರಿಸುವುದು ಸರಿಯಲ್ಲ. ನಿಮ್ಮಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಗಬಾರದು.
ಹೈಕೋರ್ಟ್ ಆದೇಶವನ್ನೂ ಪಾಲಿಸಿಲ್ಲ. ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡಬೇಕಾಗುತ್ತದೆ. ಎಸ್ಮಾ ಜಾರಿಯಾದ್ರೂ ಮುಷ್ಕರ ನಡೆಸೋದು ಕಾನೂನು ಬಾಹಿರ. ಎಸ್ಮಾ ಕಾಯ್ದೆಯಡಿ ಸಂಘಟನೆಗಳ ಪದಾಧಿಕಾರಿಗಳನ್ನು ಬಂಧಿಸಲೂಬಹುದು ಅಂತಾ, ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಆಗಸ್ಟ್ 4ರಂದು ಸಾರಿಗೆ ನೌಕರರ ಒಕ್ಕೂಟ ಮತ್ತು ಸಿಎಂ ನೇತೃತ್ವದಲ್ಲಿ ನಡೆದಿದ್ದ ಸಭೆ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ. ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಕಾಯ್ದೆಯಂತೆ ರಾಜಿ ನಡೆಸಲಾಗಿದೆ ಅಂತಾ ವಕೀಲರು ಹೇಳಿದ್ರು. ತಕ್ಷಣವೇ ಮುಷ್ಕರ ನಿಲ್ಲಿಸಿ. ಮುಷ್ಕರ ನಿಂತಿರುವ ಬಗ್ಗೆ ನಾಳೆಯೇ ಮಾಹಿತಿ ನೀಡಿ ಅಂತಾ, ಜಂಟಿ ಕ್ರಿಯಾ ಸಮಿತಿ ಪರ ವಕೀಲರಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಭು ಬಕ್ರು ಮತ್ತು ಸಿ.ಎಂ. ಜೋಶಿ ಅವರಿದ್ದ ಪೀಠ, ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ.