ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಇಷ್ಟು ದಿನ ತಣ್ಣಗಾಗಿದ್ದ ಕುರ್ಚಿ ಬದಲಾವಣೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ನಡುವೆ ಮಹತ್ವದ ಮಾತುಕತೆಯಾಗಿದೆ.
ಇನ್ನೂ ಮುನಿಯಪ್ಪ ನಿವಾಸಕ್ಕೆ ತೆರಳಿ ಸತೀಶ್ ಜಾರಕಿಹೊಳಿ ಅವರೊಂದಿಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಕಾಲದ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ವಿಚಾಗಳ ಬಗ್ಗೆಯೂ ಉಭಯ ನಾಯಕರು ಸಮಾಲೋಚಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದಲ್ಲಿನ ಹಲವು ವಿಚಾರಗಳ ಬಗ್ಗೆಯೂ ಮೆಲುಕುಹಾಕಿದ್ದಾರೆ. ಇನ್ನೂ ಪ್ರಮುಖವಾಗಿ ಮುಖ್ಯಮಂತ್ರಿ ಬದಲಾವಣೆಯ ಸಂದರ್ಭ ಎದುರಾದರೆ ಯಾರಿಗೆ ಸ್ಥಾನ ಕಲ್ಪಿಸಬೇಕು ಎನ್ನುವ ವಿಚಾರದ ಕುರಿತು ಗಂಭೀರವಾದ ಮಾತುಕತೆಯನ್ನು ಕೈ ನಾಯಕರು ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಈ ಹಿಂದೆ ರಾಜ್ಯದಲ್ಲಿ ಭಾರೀ ಚರ್ಚೆಯಾಗಿದ್ದ ಡಿನ್ನರ್ ಪಾಲಿಟಿಕ್ಸ್ ವಿಚಾರದಲ್ಲಿ ಬೇಸರ ಹೊರಹಾಕಿದ್ದ ಮುನಿಯಪ್ಪ ಅವರನ್ನು ಸತೀಶ್ ಭೇಟಿಯಾಗಿರುವುದು ದಲಿತ ಎಡಗೈ ಸಚಿವರಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಯಾಕೆಂದರೆ ಈ ವರ್ಷಾರಂಭದ ಹೊತ್ತಲ್ಲಿ ಅದರಲ್ಲೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದ ವೇಳೆ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕೈ ಸಚಿವರಿಗೆ ಔತಣ ಕೂಟ ಏರ್ಪಡಿಸಿ ಸಿಎಂ ಬದಲಾವಣೆಯ ಕುರಿತು ಚರ್ಚೆ ನಡೆಸಲಾಗಿತ್ತು.
ದಲಿತ ಎಡಗೈ ಸಚಿವರ ವಿಶ್ವಾಸಕ್ಕೆ ಪ್ಲ್ಯಾನ್..!
ಈ ವೇಳೆ ದಲಿತ ಎಡಗೈ ಸಚಿವರನ್ನು ಡಿನ್ನರ್ಗೆ ಆಹ್ವಾನಿಸಿಲ್ಲ ಎಂದು ಮುನಿಯಪ್ಪ ಅಸಮಾಧಾನ ಹೊರಹಾಕಿದ್ದರು. ಆದರೆ ಕೆಪಿಸಿಸಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಜಾರಕಿಹೊಳಿ ದಲಿತ ಎಡಗೈ ಸಚಿವರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಮುಂದಾಗಿದ್ದಾರೆ ಎನ್ನಲಾಗಿದೆ. ಅದರ ಮೊದಲ ಭಾಗವಾಗಿಯೇ ಹಿರಿಯ ಕೈ ನಾಯಕನನ್ನು ಭೇಟಿಯಾಗಿದ್ದಾರೆ. ಅಲ್ಲದೆ ಯಾವಾಗಬೇಕಾದರೂ ಕುರ್ಚಿ ಬದಲಾವಣೆಗೆ ಹೈಕಮಾಂಡ್ ಸೂಚಿಸಬಹುದು ಒಂದು ವೇಳೆ ಕೆಪಿಸಿಸಿ ಅಧ್ಯಕ್ಷಗಿರಿ ಖಾಲಿಯಾದರೆ ಆಗ ತಮ್ಮ ಬೆನ್ನಿಗೆ ನಿಲ್ಲುವಂತೆ ಮುನಿಯಪ್ಪ ಅವರನ್ನು ಸತೀಶ್ ಕೇಳಿಕೊಂಡಿದ್ದಾರೆ ಎಂಬುದು ಮೂಲಗಳ ಮಾಹಿತಿಯಾಗಿದೆ.
ಇನ್ನೂ ಪರಿಶಿಷ್ಟ ಸಮುದಾಯದಲ್ಲಿನ ಇಬ್ಬಗೆಯ ನೀತಿಯ ಬಗ್ಗೆ ಪ್ರಸ್ತಾಪಿಸಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪರಿಶಿಷ್ಟ ಸಮುದಾಯದ ಬಲಗೈನವರಿಗೆ ಅಧಿಕ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದರಂತೆಯೇ ನಾನೂ ಸಹ ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ, 7 ಬಾರಿ ಸಂಸದನಾಗಿದ್ದೇನೆ. ಅಲ್ಲದೆ ಪಕ್ಷಕ್ಕೆ ನಿಷ್ಠಾವಂತನಾಗಿರುವ ನನಗೂ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಸಾಮರ್ಥ್ಯವಿದೆ. ಇನ್ನೂ ಮುಂಬರುವ ದಿನಗಳಲ್ಲಿ ದಲಿತ ಮುಖ್ಯಮಂತ್ರಿ ಮಾಡುವ ಸಂದರ್ಭ ಬಂದಾಗ ನನ್ನ ಬೆಂಬಲಕ್ಕೆ ನೀವು ನಿಲ್ಲಬೇಕು. ಹಾಗೆಯೇ ನಾನೂ ಸಹ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಚಾರ ಬಂದಾಗ ನಿಮ್ಮ ಜೊತೆಗೆ ಇರುತ್ತೇನೆ ಅಂತ ಮುನಿಯಪ್ಪ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಬರಲ್ಲ..
ಇನ್ನೂ ಡಿನ್ನರ್ ಸಭೆಯ ಬಳಿಕ ಆಗ ಪ್ರತಿಕ್ರಿಯಿಸಿದ್ದ ಸಚಿವ ಸತೀಶ್ ಜಾರಕಿಹೊಳಿ, ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದು. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಸಭೆಯಲ್ಲಿ ಅಂತಾ ಚರ್ಚೆ ಯಾವುದೂ ಆಗಿಲ್ಲ. ಸಂಪುಟ ವಿಸ್ತರಣೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ಸಿಎಂ ಬದಲಾವಣೆ ಕುರಿತು ಮುಖ್ಯಮಂತ್ರಿಗಳು ಇದ್ದಾರೆ, ಅಂತಹ ಅವಶ್ಯಕತೆ ಬರಲ್ಲ. ಈ ಅವಧಿಗೆ ಸಿಎಂ ಆಗುವುದು ಬರಲ್ಲ. ಮುಂದಿನ ಅವಧಿಗೆ ನಾನು ಸಿಎಂ ಅಂತ ಹೇಳಿದ್ದೇನೆ, ಕಾದು ನೋಡಬೇಕು ಎನ್ನುವ ಮೂಲಕ ಅವರು ಸಭೆಯ ಇನ್ಸೈಡ್ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.
ಪರಮೇಶ್ವರ್ ಡಿನ್ನರ್ ಮೀಟಿಂಗ್ಗೂ ಬ್ರೇಕ್ ಬಿದ್ದಿತ್ತು..
ಅಲ್ಲದೆ ಇದಾದ ಬಳಿಕ ಇನ್ನೋರ್ವ ದಲಿತ ಸಚಿವ ಡಾ.ಜಿ. ಪರಮೇಶ್ವರ್ ಅವರೂ ಸಹ ಡಿನ್ನರ್ ಆಯೋಜಿಸುವ ತಯಾರಿ ನಡೆಸಿದ್ದರು. ಆದರೆ ಅದಕ್ಕೆ ಹೈಕಮಾಂಡ್ ನಾಯಕರು ಬ್ರೇಕ್ ಹಾಕಿದ್ದರು. ಬಳಿಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರು, ಶಾಸಕರು, ಸಂಸದರು ಹಾಗೂ ಮುಖಂಡರ ಸಭೆ ರದ್ದಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸೂಚನೆ ಮೇರೆಗೆ ನಾವು ನಡೆಸಲು ಉದ್ದೇಶಿಸಲಾಗಿದ್ದ ಡಿನ್ನರ್ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಪರಮೇಶ್ವರ್ ಆಗ ಪ್ರಕಟಣೆ ಹೊರಡಿಸಿದ್ದರು.
ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಸಭೆ ಬಳಿಕ ಗೃಹ ಸಚಿವ ಜಿ.ಪರಮೇಶ್ವರ್ ಮತ್ತೊಂದು ಡಿನ್ನರ್ ಸಭೆ ನಡೆಸಲು ಉದ್ದೇಶಿಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಡಿನ್ನರ್ ಸಭೆ ಮಾಡುವ ಮೂಲಕ ತಪ್ಪು ಸಂದೇಶ ರವಾನೆಯಾಗುವ ಬಗ್ಗೆ ಕೂಗು ಕೇಳಿ ಬಂದಿತ್ತು.
ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಡಿನ್ನರ್ ಸಭೆ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅಂತಿಮವಾಗಿ ಎಐಸಿಸಿ ಮಧ್ಯ ಪ್ರವೇಶಿಸಿ ಸಚಿವ ಪರಮೇಶ್ವರ್ ನೇತೃತ್ವದ ಡಿನ್ನರ್ ಸಭೆಗೆ ತಾತ್ಕಾಲಿಕ ಬ್ರೇಕ್ ಹಾಕಿತ್ತು. ಅದರೆ ಇದೆಲ್ಲ ಬೆಳವಣಿಗೆಯ ಬಳಿಕ ಇದೀಗ ಮುನಿಯಪ್ಪ ಅವರನ್ನು ಭೇಟಿಯಾಗಿರುವುದು ಕೈ ಪಾಳಯದಲ್ಲಿ ಹೊಸ ಸಮೀಕರಣಕ್ಕೆ ಕಾರಣವಾಗಿದೆ. ಇನ್ನೂ ಸತೀಶ್ ಹೇಳಿ ಕೇಳಿ ಮಾಸ್ಟರ್ ಮೈಂಡ್ ಏನೇ ಮಾಡಬೇಕಾದರೂ ಸಹ ಯೋಚನಾ, ಯೋಜನಾ ಬದ್ಧವಾಗಿಯೇ ಮಾಡಿ ಮುಗಿಸುತ್ತಾರೆ. ಅಲ್ಲದೆ ರಾಜಕಾರಣದಲ್ಲಿಯೂ ಸಹ ಅದೇ ಫಾರ್ಮುಲಾ ಅನುಸರಿಸುತ್ತಾರೆ. ಹೀಗಾಗಿ ಕುರ್ಚಿ ವಿಚಾರದಲ್ಲಿ ಖರ್ಗೆ ವಾರ್ನಿಂಗ್ ಬಳಿಕ ಶಾಂತವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಉಭಯ ನಾಯಕರ ಭೇಟಿಯಿಂದಾಗಿ ಹಲವು ರಾಜಕೀಯ ಲೆಕ್ಕಾಚಾರಗಳು ಹುಟ್ಟಿಕೊಂಡಿದ್ದು, ಇಬ್ಬರ ನಡುವಿನ ಒಳ ಒಪ್ಪಂದ ಎಷ್ಟು ಫಲ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.