ಕೋಲ್ಕತ್ತಾ: ಆರ್.ಜಿ ಕಾರ್ ಆಸ್ಪತ್ರೆಯ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಮಮತಾ ಬ್ಯಾನರ್ಜಿ ಸರ್ಕಾರ (Mamata Banerjee government) ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ‘ಅಪರಾಜಿತಾ’ ಅತ್ಯಾಚಾರ ವಿರೋಧಿ ಮಸೂದೆ (West Bengal Criminal Laws and Amendment-2024)ಗೆ ಅಂಗೀಕಾರ ನೀಡಿದೆ.
ವಿಧಾನಸಭೆಯಲ್ಲಿ ‘ಅಪರಾಜಿತ’ ಮಸೂದೆ (anti-rape bill) ಅಂಗೀಕಾರವಾದ ಬಳಿಕ ಮಾತ್ನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಮಸೂದೆಯನ್ನು ಮಾದರಿ ಮತ್ತು ಐತಿಹಾಸಿಕ ಎಂದು ಶ್ಲಾಘಿಸಿದ್ದಾರೆ. ಅತ್ಯಾಚಾರ ಎಂಬುದು ಮಾನವೀಯತೆಯ ವಿರುದ್ಧದ ಶಾಪ. ಅಂತಹ ಅಪರಾಧ ಕೃತ್ಯಗಳನ್ನ ತಡೆಯಲು ಅಗತ್ಯವಿರೋ ಸಾಮಾಜಿಕ ಸುಧಾರಣೆಗಳು ಬೇಕು. ‘ಅಪರಾಜಿತಾ’ ಮಸೂದೆಗೆ ಸಹಿ ಹಾಕುವಂತೆ ಪ್ರತಿಪಕ್ಷಗಳು ರಾಜ್ಯಪಾಲ ಸಿ.ವಿ.ಆನಂದ ಬೋಸ್ (Governor CV Ananda Bose) ಅವರಿಗೆ ಹೇಳಬೇಕು. ಅದಾದ ನಂತರ ‘ಅಪರಾಜಿತಾ’ ಮಸೂದೆಯನ್ನು ಜಾರಿಗೊಳಿಸುವುದು ನಮ್ಮ ಜವಾಬ್ದಾರಿ ಅಂತ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
‘ಅಪರಾಜಿತಾ’ ಮಸೂದೆಯನ್ನ ಮಂಡಿಸಿದ ಬಳಿಕ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ಈ ಮಸೂದೆಯ ಮೂಲಕ ನಾವು ಕೇಂದ್ರ ಶಾಸನದಲ್ಲಿರುವ ಲೋಪದೋಷಗಳನ್ನು ತೋರಿಸಲು ಪ್ರಯತ್ನಿಸಿದ್ದೇವೆ. ಉತ್ತರ ಪ್ರದೇಶ, ಗುಜರಾತ್ನಂತಹ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯ ಅಪರಾಧಗಳು ನಡೆಯುತ್ತಿವೆ. ಆದ್ರೆ ಬಂಗಾಳದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತಿದೆ ಅಂತ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪ್ರತಿಪಕ್ಷಗಳ ಸಂಪೂರ್ಣ ಬೆಂಬಲದೊಂದಿಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ‘ಅಪರಾಜಿತಾ’ ಅತ್ಯಾಚಾರ ವಿರೋಧಿ ಮಸೂದೆ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಆದ್ರೆ, ಆದಾಗ್ಯೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಂಡಿಸಿದ ಮಸೂದೆಗೆ ಪ್ರಸ್ತಾವಿತ ತಿದ್ದುಪಡಿಗಳನ್ನು ಸದನವು ಅಂಗೀಕರಿಸಲಿಲ್ಲ. ಕರಡು ಶಾಸನವು ಅತ್ಯಾಚಾರ ಪ್ರಕರಣಗಳ ಅಪರಾಧಿಗಳಿಗೆ ಮರಣದಂಡನೆಯನ್ನ ಬಯಸುತ್ತದೆ. ಸಂತ್ರಸ್ತರ ಸಾವಿಗೆ ಕಾರಣವಾದರೆ ಅಥವಾ ಕೋಮಾದಂಥ ಸ್ಥಿತಿಗೆ ಕಾರಣವಾದರೆ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ.