Bangla News: ದೇಶ ಬಿಟ್ಟು ಭಾರತಕ್ಕೆ ಬಂದಿರುವ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಬಾಂಗ್ಲಾ ನ್ಯಾಯಾಲಯ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದು, ಅಕ್ಟೋಬರ್ 17ರಂದು ಈ ಆದೇಶ ಹೊರಡಿಸಿದೆ. ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಈ ಬಗ್ಗೆ ಮಾತನಾಡಿದ್ದಾರೆ.
ಶೇಖ್ ಹಸೀನಾ ಅವರನ್ನು ಹೇಗಾದರೂ ಮಾಡಿ, ಬಾಂಗ್ಲಾ ದೇಶಕ್ಕೆ ಕರೆಸಿಕೊಳ್ಳಲೇಬೇಕು ಎಂದು, ಇಲ್ಲಿನ ರಾಜಕಾರಣಿಗಳು ಪಣ ತೊಟ್ಟಿದ್ದಾರೆ. ಹಾಗಾಗಿ ಬಾಂಗ್ಲಾ ದೇಶದ ಪರ ವಕಾಲತ್ತು ವಹಿಸಿಕೊಂಡಿರುವ ತಾಜುಲ್, ಹೇಗಾದರೂ ಮಾಡಿ, ಶೇಖ್ ಹಸೀನಾ ಅವರನ್ನು ದೇಶಕ್ಕೆ ಕರೆತರುತ್ತೇವೆ. ಅವರೊಂದಿಗೆ ಯಾರ್ಯಾರು ದೇಶಬಿಟ್ಟು ಓಡಿಹೋಗಿದ್ದಾರೋ ಅವರನ್ನೆಲ್ಲ ಕರೆತರುತ್ತೇವೆ ಎಂದು ಹೇಳಿದ್ದಾರೆ.
ಆಗಸ್ಟ್ 5ರಂಂದು ಶೇಖ್ ಹಸೀನಾ 45 ನಿಮಿಷದಲ್ಲಿ ದೇಶ ತೊರೆಯಬೇಕು ಎಂದು ಆದೇಶಿಸಲಾಗಿತ್ತು. ಹಾಗಾಗಿ ಶೇಖ್ ಹಸೀನಾ ಬಾಂಗ್ಲಾ ಬಿಟ್ಟು ಲಂಡನ್ ತೆರಳಲು ಪ್ರಯತ್ನಿಸಿದ್ದರು. ಆದರೆ ಲಂಡನ್ ಸರ್ಕಾರ ಇದಕ್ಕೆ ಅವಕಾಶ ಕೊಡದ ಕಾರಣ, ಶೇಖ್ ಹಸೀನಾ ತಮ್ಮ ಸಹೋದರಿ ಶೇಖ್ ರೆಹಾನಾ ಜೊತೆ ಭಾರತಕ್ಕೆ ಬಂದು ನೆಲೆಸಿದರು.