ಮೈಸೂರು ದಸರಾ ಉದ್ಘಾಟನೆ ವಿಚಾರ ರಾಜಕೀಯ ಜ್ವಾಲೆ ಪಡೆದುಕೊಂಡಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯನವರು, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮಷ್ತಾಕ್ ಅವರ ಹೆಸರು ಘೋಷಣೆ ಮಾಡಿದ್ದಾರೆ.
ಪರ-ವಿರೋಧದ ಚರ್ಚೆಯ ನಡುವೆಯೇ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಬಾನು ಮುಷ್ತಾಕ್, ಈ ಬಾರಿಯ ದಸರಾವನ್ನು ಗೌರವ ಹಾಗೂ ಪ್ರೀತಿಯಿಂದ ಉದ್ಘಾಟಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪ್ರದಾಯದ ಪ್ರಕಾರವೇ ಉದ್ಘಾಟಿಸಬೇಕು ಎಂದು ಕೆಲವರು ಒತ್ತಾಯಿಸಿದರೆ, ದಸರೆಗೆ ಧರ್ಮದ ಗಂಟು ಹಾಕಬಾರದು ಎಂದು ಮತ್ತೊಂದು ಗುಂಪು ವಾದಿಸುತ್ತಿದೆ. ಈ ಹಿಂದೆ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಕನ್ನಡವನ್ನು ಭುವನೇಶ್ವರಿ ತಾಯಿಗೆ ಹೋಲಿಕೆ ಮಾಡುತ್ತಿರುವುದಕ್ಕೆ ಬಾನು ಮುಷ್ತಾಕ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ಹಾಗಾದರೆ, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುತ್ತಾರೆಯೇ, ದೀಪ ಬೆಳಗಿ ಆರತಿ ಮಾಡು ತಾರೆಯೇಎನ್ನುವ ಬಹಿರಂಗ ಚರ್ಚೆಯೂ ಆರಂಭವಾಯಿತು. ಸೋಮವಾರ ಬೆಂಗಳೂರಿನ ಅಮ್ಮನ ಮಡಿಲು ಸಂಸ್ಥಾಪಕಿ ಶಶಿಕಲಾ ಹಾಸನಕ್ಕೆ ಆಗಮಿಸಿ ಹಿಂದೂ ಸಂಪ್ರದಾಯದಂತೆ ಬಾನು ಮುಷ್ತಾಕ್ ಅವರಿಗೆ ಬಾಗಿನ ಅರ್ಪಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾನು ಮುಷ್ತಾಕ್ ಅವರು, ಬಾಲ್ಯದಲ್ಲಿ ನಾನು ತಂದೆ ತಾಯಿಯ ಜತೆಯಲ್ಲಿ ಜಂಬೂಸವಾರಿ ನೋಡಲು ಹೋಗುತ್ತಿದೆ. ಈಗ ನನಗೆ ಈ ಹಬ್ಬದ ಉದ್ಘಾಟನೆಯ ಆಹ್ವಾನ ಬಂದಿದೆ. ಇದು ಸಂತೋಷದ ವಿಷಯವಾಗಿದೆ, ಚಾಮುಂಡೇಶ್ವರಿ ತಾಯಿ ಅನ್ನುವ ನಿಮ್ಮ ಭಾವನೆಯನ್ನೂ ಗೌರವಿಸುತ್ತೇನೆ. ಅನೇಕರು ದಸರಯನ್ನು ನಾಡಹಬ್ಬ ಎನ್ನುತ್ತಾರೆ. ಅದನ್ನೂ ಗೌರವಿಸುತ್ತೇನೆ. ನಾಡಹಬ್ಬವನ್ನು ಚಾಮುಂಡೇಶ್ವರಿ ತಾಯಿ ಎಂದು ಕರೆಯುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಹೀಗಾಗಿ ನಾನು ಕೂಡ ಪ್ರೀತಿಯಿಂದ ಪಾಲ್ಗೊಳ್ಳುವ ಹಬ್ಬವಾಗಿದೆ ಎಂದು ಹೇಳಿದ್ದಾರೆ.
ವೈರಲ್ ಆದ ಅವರ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮ್ ಸಾಹಿತಿಗಳಿಗೆ ಪ್ರಾತಿನಿಧ್ಯತೆ ನೀಡಲಿಲ್ಲವೆಂಬ ಕಾರಣಕ್ಕಾಗಿ 2023ರಲ್ಲಿ ನಡೆದ ಜನ ಸಾಹಿತ್ಯ ಪ್ರತಿರೋಧ ಸಮಾವೇಶದಲ್ಲಿನಾನು ಮಾಡಿದ ಭಾಷಣದ ಪೂರ್ಣ ಪಾಠವನ್ನು ಕೊಟ್ಟಿದ್ದೇನೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ಕನ್ನಡದ ನಂಟು ಹಾಗೂ ಪರಕೀಯತೆಗಳನ್ನು ನಾನು ಚರ್ಚಿಸಿದ್ದೇನೆ. ಅದು ಆ ಸಭೆಯ ಪ್ರಮುಖ ಚರ್ಚಾ ವಿಷಯವಾಗಿತ್ತು ಎಂದು ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ