ಬಸನಗೌಡ ಪಾಟೀಲ್ ಯತ್ನಾಳ್ ಶಪಥ

ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್‌ಗೂ ವಿವಾದಕ್ಕೂ ಬಿಡಿಸಲಾಗದ ನಂಟಿದೆ. ಮದ್ದೂರು, ತುಮಕೂರು, ಕೊಪ್ಪಳದಲ್ಲಿ ದಾಖಲಾದ ಎಫ್‌ಐಆರ್‌ಗಳಿಗೆ ಕ್ಯಾರೇ ಅನ್ನದ ಯತ್ನಾಳ್ ಅವರು ದಾವಣಗೆರೆಯಲ್ಲಿ ಶಪಥ ಮಾಡಿದ್ದಾರೆ.

ದೇಶದಲ್ಲಿ ಈಗ ಪ್ರಧಾನಿಯಾಗಿ ನರೇಂದ್ರ ಮೋದಿ ಇದ್ದಾರೆ. ಮುಂದೆ ಯೋಗಿ ಆದಿತ್ಯನಾಥ್ ಬರ್ತಾರೆ. ಯೋಗಿಯವರು ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ. ನಾನು ಸಿಎಂ ಆದ್ರೆ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ದಾವಣಗೆರೆಯ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅವರ ಮಗ ಇಬ್ಬರೂ ಲೂಟಿ ಮಾಡುತ್ತಿದ್ದಾರೆ. ತಂದೆ ಮೊದಲು ಲೂಟಿ ಮಾಡಿದ, ಈಗ ಮಗನಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ತಾವು ಬಿಜೆಪಿಯಿಂದ ಉಚ್ಚಾಟನೆಗೊಂಡಾಗ ಅಮಿತ್ ಶಾ ಮರಳಿ ಪಕ್ಷಕ್ಕೆ ಕರೆತಂದರೂ, ಯಡಿಯೂರಪ್ಪ ತಮ್ಮನ್ನು ಮಂತ್ರಿಯಾಗದಂತೆ ನೋಡಿಕೊಂಡರು. ನನ್ನ ಹಿರಿತನ ನೋಡಿದರೆ ನಾನೇ ಸಿಎಂ ಆಗಬೇಕಿತ್ತು. ರಾಜ್ಯದಲ್ಲಿ ಉಚ್ಚಾಟನೆಗೊಂಡವರೆಲ್ಲ ಸಿಎಂ ಆಗಿದ್ದಾರೆ, ನಾನೇಕೆ ಆಗಬಾರದು? ಎಂದು ಪ್ರಶ್ನಿಸಿದರು. ವೀರಶೈವ-ಲಿಂಗಾಯತ ಒಂದೇ ಎಂದು ಕೆಲವರು ಹೇಳುತ್ತಾರೆ.

ಆದರೆ ಯಡಿಯೂರಪ್ಪ, ಶಾಮನೂರು, ಖಂಡ್ರೆ ಕುಟುಂಬಗಳು ತಮ್ಮ ರಾಜಕೀಯಕ್ಕಾಗಿ ಸಮಾಜವನ್ನು ಬಳಸಿಕೊಳ್ಳುತ್ತಿವೆ. ಯಡಿಯೂರಪ್ಪ ಜಗಳ ಬೇಡ ಎನ್ನುತ್ತಾರೆ, ಯಡಿಯೂರಪ್ಪ ತಮ್ಮ ನಿಲುವು ಏನೆಂಬುದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮುಸ್ಲಿಂರ ಓಲೈಕೆ ಮಾಡುತ್ತಿದ್ದಾರೆ. ಇದನ್ನ ಸುಧಾರಿಸಿಕೊಳ್ಳಬೇಕು. ಇಲ್ಲವಾದ್ರೆ ಇಷ್ಟರಲ್ಲಿಯೇ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಮಾತ್ರ ಡಿಕೆ ಶಿವಕುಮಾರ್‌ಗೆ ಸಿಎಂ ಆಗೋಕೆ ಬಿಡೋಲ್ಲ ಎಂದರು.

ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕು. ನಾನು ಸಿಎಂ ಆದ್ರೆ ಮೂವರು ಮಕ್ಕಳು ಇರೋರಿಗೆ ಎಲ್ಲಾ ಉಚಿತ ಸೌಲಭ್ಯ ನೀಡುವೆ. ಮದುವೆಗೆ 5 ಲಕ್ಷ ರೂಪಾಯಿ ಸಹ ಉಚಿತವಾಗಿ ಕೊಡುವೆ. ಇದೇ ವೇಳೆ, ಸಾಬರು 25 ಹಡಿತಾರೆ ನಾವು ಕಟ್ಟಿದ ತೆರಿಗೆಯನ್ನ ಅವರೇ ತಿಂದು ತೇಗುತ್ತಿದ್ದಾರೆ ಎಂದು ಯತ್ನಾಳ್ ವ್ಯಂಗ್ಯವಾಡಿದರು. ಕೆಜಿಹಳ್ಳಿ-ಡಿಜೆಹಳ್ಳಿ ಕೇಸ್‌ನಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ವೈಫಲ್ಯವೇ ಕಾರಣ. ಆರಗ ಜ್ಞಾನೇಂದ್ರ, ಬೊಮ್ಮಾಯಿ ಅವರ ಕೈಗೆ ಅಧಿಕಾರ ಕೊಟ್ಟು ಹಾಳಾಯಿತು ಎಂದು ಯತ್ನಾಳ್ ಕಿಡಿಕಾರಿದ್ದಾರೆ.

About The Author