Wednesday, November 26, 2025

Latest Posts

Malaysia: ಮಹಿಳೆಯರಿಗೂ ಸಮಾನ ಅವಕಾಶಗಳು ದೊರೆತಾಗ ದೇಶದ ಪ್ರಗತಿ ಸಾಧ್ಯ

- Advertisement -

Malaysia: ಮಹಿಳಾ ಉದ್ಯಮಿಗಳಿಗೂ ವೇದಿಕೆ ಸಿಗಬೇಕು. ಅದಕ್ಕಾಗಿ ಸೂಕ್ತ ತರಬೇತಿ, ಮಾರ್ಗದರ್ಶನ ಮತ್ತು ಬೆಂಬಲ ದೊರಕಿದರೆ ದೇಶದ ಅಭಿವೃದ್ಧಿಗಾಗಿ ಅವರು ಕೂಡ ಸಮಾನವಾಗಿ ಪಾಲ್ಗೊಳ್ಳಲು ಸಾಧ್ಯ ಎಂದು ಉಬುಂಟು ಒಕ್ಕೂಟದ ಸಂಸ್ಥಾಪಕರು ಹಾಗೂ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಹೇಳಿದರು.

ಮಲೇಷ್ಯಾದಲ್ಲಿ ನಡೆದ 2025ರ ಯುನೈಟೆಡ್ ಎಕನಾಮಿಕ್ ಶೃಂಗಸಭೆಯಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದ ಅವರು, ಭಾರತ ನಿಯೋಗದ ನೇತೃತ್ವವಹಿಸಿ ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.

ಮಹಿಳಾ ಉದ್ಯಮಶೀಲತೆ ಮತ್ತು ಆರ್ಥಿಕ ರಾಜತಾಂತ್ರಿಕತೆಯಲ್ಲಿನ ತಮ್ಮ ಸೇವೆಗಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಕೆ. ರತ್ನಪ್ರಭಾ ಅವರು ಸಮಾವೇಶದಲ್ಲಿ ತಮ್ಮ ಸರ್ಕಾರಿ ಸೇವೆಯ ದಿನಗಳನ್ನು ಸ್ಮರಿಸಿದರು. ಹಲವಾರು ಮಹಿಳಾ ಉದ್ಯಮಿಗಳ ಸಂಘಗಳೊಂದಿಗಿನ ಒಡನಾಟ ʼಉಬುಂಟು ಒಕ್ಕೂಟ’ ಸ್ಥಾಪನೆಗೆ ಹೇಗೆ ಪ್ರೇರಣೆ ನೀಡಿತು ಎಂಬುದನ್ನು ಮೆಲುಕು ಹಾಕಿದರು.

ಕೆಲವು ಮಹಿಳೆಯರ ಗುಂಪು ಪ್ರತ್ಯೇಕವಾಗಿ ಕೆಲಸ ಮಾಡುತ್ತಿತ್ತು, ಅದನ್ನು ಕಂಡು ನಾವೆಲ್ಲರೂ ಒಂದಾಗಬೇಕು, ಒಟ್ಟಾಗಿ ಬೆಳೆಯಬೇಕು ಎಂಬ ಆಲೋಚನೆಯಲ್ಲಿ ನಿವೃತ್ತಿಯ ಬಳಿಕ ʼಉಬುಂಟು ಒಕ್ಕೂಟʼವನ್ನು ಸ್ಥಾಪಿಸಲಾಯಿತು. ಇಂದು ಉಬುಂಟು 12 ರಾಜ್ಯಗಳ 60ಕ್ಕೂ ಹೆಚ್ಚು ಸಂಘಗಳನ್ನು ಒಳಗೊಂಡಿದ್ದು, ಸುಮಾರು 30,000 ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುತ್ತಿದೆ. ಈ ಒಕ್ಕೂಟದ ಹತ್ತು ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾರತದ ನಿಯೋಗವನ್ನು ಪ್ರತಿನಿಧಿಸುತ್ತಿದ್ದು, ಇದು ನಮ್ಮ ಮೊದಲ ಅಂತಾರಾಷ್ಟ್ರೀಯ ವೇದಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ವಿಶ್ವಸಂಸ್ಥೆಯ ಶೃಂಗಸಭೆಯು ನಮ್ಮ ಉದ್ಯಮಿಗಳಿಗೆ ಜಾಗತಿಕ ಪ್ರತಿನಿಧಿಗಳೊಂದಿಗೆ ಚರ್ಚಿಸಲು, ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅವಕಾಶ ಒದಗಿಸುತ್ತಿದೆ ಎಂದರು.

ಇದೇ ವೇಳೆ ‘ಉಬುಂಟು’ ಹೆಸರಿನ ಹಿಂದಿನ ಕಥೆಯನ್ನು ರತ್ನಪ್ರಭಾ ಅವರು ಹಂಚಿಕೊಂಡರು. ಆಫ್ರಿಕಾದ ಒಂದು ಸಣ್ಣ ಕಥೆಯನ್ನು ನೆನಪಿಸಿಕೊಂಡ ಅವರು, ಮಕ್ಕಳು ಸಿಹಿತಿಂಡಿಗಳಿಗಾಗಿ ಒಬ್ಬರನ್ನೊಬ್ಬರು ಸೋಲಿಸಲು ಸ್ಪರ್ಧಿಸುವ ಬದಲು, ಎಲ್ಲರೂ ಒಟ್ಟಾಗಿ ಬಂದು ಹಂಚಿಕೊಂಡ ಘಟನೆಯನ್ನು ವಿವರಿಸಿದರು. ನಮ್ಮಂತೆಯೇ ಇತರರು ಸಂತೋಷವಾಗಿರಬೇಕು ಎಂಬುದು ಒಕ್ಕೂಟದ ಆಶಯವಾಗಿದೆ ಎಂದು ಹೇಳಿದರು.

ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚಿಸಲು, ಗಡಿಯಾಚೆಗಿನ ವ್ಯಾಪಾರ ಸಹಯೋಗಗಳನ್ನು ಅಭಿವೃದ್ಧಿಪಡಿಸಲು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಹಿನ್ನೆಲೆಯಲ್ಲಿ ರತ್ನಪ್ರಭಾ ಅವರು 10 ಪ್ರಗತಿಪರ ಭಾರತೀಯ ಮಹಿಳಾ ಉದ್ಯಮಿಗಳ ತಂಡದ ನೇತೃತ್ವವಹಿಸಿದ್ದರು.

ನಿಯೋಗದಲ್ಲಿ ಉಟುಂಬು ಒಕ್ಕೂಟದ ಗೌರವ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ, ಜಿಸಿಸಿಐ (GCCI) ಮಹಿಳಾ ವಿಭಾಗದ ಅಧ್ಯಕ್ಷೆ ಮತ್ತು ಎಬಿಡಬ್ಲ್ಯೂಸಿಐ (ABWCI) ಗೋವಾದ ರಾಜ್ಯ ಮುಖ್ಯಸ್ಥೆ ಆಶಾ ಅರೋಂಡೇಕರ್, ಧಾರವಾಡದ ವೆಲಾಸ್ಕಾ ಎಂಟರ್‌ಪ್ರೈಸಸ್‌ನ ವಿದ್ಯಾವತಿ ಭಾವಿ, ರೀಥಿಂಕ್ ಸ್ನ್ಯಾಕ್ಸ್‌ನ ಸ್ಥಾಪಕಿ ದೀಪಿಕಾ ಕಿರಣ್, ಮೀಡಿಯಾ ಕನೆಕ್ಟ್‌ನ ಸಂಸ್ಥಾಪಕರಾದ ದಿವ್ಯಾ ರಂಗೇನಹಳ್ಳಿ, ಹೈದರಾಬಾದ್‌ನ ಮೆಸರ್ಸ್ ಈಕ್ವಲ್‌ನ ಪ್ರಿಯಾಂಕಾ ಜುಲಕಂಟಿ, ತುಮಕೂರಿನ ಮೆಸರ್ಸ್ ಇಕೋ-ಕಾನ್ ಗ್ರೀನ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಜಯಲಕ್ಷ್ಮಿ,ಸುಪ್ರೀಂ ಕೋರ್ಟ್ ವಕೀಲೆ ನಾಜಿಶ್ ಖಾನ್, ಜಿ.ಪಿ. ನಿಸರ್ಗ ಮತ್ತು ವಿಭಾ ದೇವರಾಜ್ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ. ನಿಯೋಗದ ಎಲ್ಲಾ ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳು ಸಿಗುವ ನಿಟ್ಟಿನಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಇದು ಫಲಪ್ರದವಾಗಿದೆ.

ಮಹಿಳಾ ಸಬಲೀಕರಣದ ಆಶಯ ಹೊಂದಿರುವ ಉಬುಂಟು ಒಕ್ಕೂಟವನ್ನು ಮಾರ್ಚ್ 8, 2019ರಂದು ಕೆ. ರತ್ನಪ್ರಭಾ ಅವರು ಸ್ಥಾಪಿಸಿದರು. ಉಬುಂಟು ಒಕ್ಕೂಟವು ಟಯರ್‌ 2 ಮತ್ತು ಟಯರ್‌ 3 ನಗರಗಳಲ್ಲಿ ಮಹಿಳಾ ನೇತೃತ್ವದ ಉದ್ಯಮಗಳನ್ನು ಬಲಪಡಿಸಲು ಕಾರ್ಯನಿರ್ವಹಿಸುತ್ತಿದೆ. “ನಾನು ಇರುವುದರಿಂದ ನಾವು ಇದ್ದೇವೆ” ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಈ ಒಕ್ಕೂಟವು ಜಾಗತಿಕ ಅವಕಾಶಗಳಿಗೆ ಮಹಿಳೆಯರನ್ನು ಸಂಪರ್ಕಿಸಲು ಪಣ ತೊಟ್ಟಿದೆ.

- Advertisement -

Latest Posts

Don't Miss