ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ್ದ ರೌಡಿ ಶೀಟರ್ ಶಿವ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಲೆಮರೆಸಿಕೊಂಡಿದ್ದ ಕೊಲೆಯ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನನ್ನು, ದೆಹಲಿ ವಿಮಾನ ನಿಲ್ದಾಣದಲ್ಲಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ CID ಅಧಿಕಾರಿಗಳು ಬಂಧಿಸಿದ್ದಾರೆ.
ಬಿಕ್ಲು ಶಿವನನ್ನು ಕೊಲೆ ಮಾಡಿದ ಬಳಿಕ ಎ1 ಆರೋಪಿ ಜಗ್ಗ ದುಬೈಗೆ ಹಾರಿದ್ದ. ಜಗ್ಗನಿಗಾಗಿ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಆಗಸ್ಟ್ 26ರಂದು ದುಬೈನಿಂದ ದೆಹಲಿಗೆ ಬರುತ್ತಿದ್ದಂತೆ ಸಿಐಡಿ ಅಧಿಕಾರಿಗಳು ಬಂಧಿಸಿ, ಕಚೇರಿಗೆ ಕರೆತಂದಿದ್ದಾರೆ.
ಕಳೆದ ಜುಲೈ 15ರ ರಾತ್ರಿ 8.30 ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗಡೆ ಬಂದು ಫುಟ್ ಪಾತ್ ಮೇಲೆ ನಿಂತಿದ್ದ. ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7 ರಿಂದ 8 ಆರೋಪಿಗಳು ಬಿಕ್ಲು ಶಿವನ ಮೇಲೆ ದಾಳಿ ಮಾಡಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಬಿಕ್ಲು ಶಿವನನ್ನು ಕವರ್ ಮಾಡಿ ಹಲ್ಲೆ ಮಾಡಿದ್ದಾರೆ. ಕೊನೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳ ಮಧ್ಯೆ ಸಿಲುಕಿಸಿ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಬಿಕ್ಲು ಶಿವ ಕೊಲೆ ಬಳಿಕ ಜಗ್ಗ ದುಬೈಗೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಜಗ್ಗನ ಪ್ರತಿ ಚಲನವಲನದ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಸಿಐಡಿ ಅಧಿಕಾರಿಗಳು ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದರು. ಆತ ಇರುವ ಸ್ಥಳಗಳ ಮಾಹಿತಿ ಪಡೆದು ಅಲ್ಲಿಗೆ ನೋಟಿಸ್ ಕಳುಹಿಸುತ್ತಿದ್ದರು. ಜಗ್ಗ ಥೈಲ್ಯಾಂಡ್ನಲ್ಲಿದ್ದಾಗ ಸಿಐಡಿ ಇಂಟರ್ಪೋಲ್ ನೋಟಿಸ್ ಆತನಿಗೆ ತಲುಪಿತ್ತು. ಆಗ, ಜಗ್ಗನಿಗೆ ನಡುಕ ಶುರುವಾಗಿತ್ತು. ಯಾವ ದೇಶದಲ್ಲಿದ್ದರೂ ಇವರು ಬಿಡುವುದಿಲ್ಲ ಎಂದು ಭಯ ಬಿದ್ದಿದ್ದ ಜಗ್ಗ ಕೂಡಲೇ ವಿಮಾನ ಹತ್ತಿ ಥೈಲ್ಯಾಂಡ್ನಿಂದ ಶ್ರೀಲಂಕಾಕ್ಕೆ ತೆರಳಿದ್ದಾನೆ.
ಜಗ್ಗನ ಚಲನವಲನ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಸಿಐಡಿ ತನಿಖಾ ತಂಡ ಆತ ಭಾರತಕ್ಕೆ ಬರುತ್ತಿರುವ ವಿಚಾರ ತಿಳಿದು ದೆಹಲಿಗೆ ತೆರಳಿದ್ದಾರೆ. ಶ್ರೀಲಂಕಾಕ್ಕೆ ತೆರಳಿದ್ದ ಜಗ್ಗ ಅಲ್ಲಿಂದ ದೆಹಲಿ ವಿಮಾನ ಹತ್ತಿ, ಭಾರತಕ್ಕೆ ಬಂದಿದ್ದಾನೆ. ಆರೋಪಿ ಜಗ್ಗ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ, ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಟ್ರಾನ್ಸಿಟ್ ವಾರಂಟ್ ಪಡೆದು ಸಿಐಡಿ ಅಧಿಕಾರಿಗಳು ಜಗ್ಗನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. ಎಸ್.ಪಿ ವೆಂಕಟೇಶ್, ಡಿವೈಎಸ್ಪಿಗಳಾದ ನಂದಕುಮಾರ್, ಗೋಪಾಲ್ ನಾಯ್ಕ್, ಹೇಮಂತ್, ಇನ್ಸ್ಪೆಕ್ಟರ್ಗಳಾದ ಮಂಜುನಾಥ್ ಹಾಗೂ ಪ್ರಶಾಂತ್ ಅವರ ತಂಡ ಜಗ್ಗನನ್ನು ಬಂಧಿಸಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ