ಹಾಸನದ ಮೊಸಳೆ ಹೊಸಳ್ಳಿ ಘೋರ ದುರಂತದಲ್ಲಿ, 10 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಇದೀಗ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ.
ಹಾಸನ ನಗರದ ಖಾಸಗಿ ಆಸ್ಪತ್ರೆಯಲ್ಲಿ, ಆದರ್ಶ್, ಋತ್ವಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಬಿಲ್ ಆಗಿದ್ದು, ಕನಿಷ್ಠ ಅರ್ಧದಷ್ಟು ಹಣ ಕಟ್ಟುವಂತೆ ಆಸ್ಪತ್ರೆಯವರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಉಳಿತಾಯ ಮಾಡಿದ್ದ ಹಣವೆಲ್ಲಾ ಖರ್ಚಾಗಿದ್ದು, ಹೆಚ್ಚಿನ ಹಣದ ಅವಶ್ಯಕತೆ ಇದೆ. ನೀಡಿದ್ದ ಭರವಸೆಯಂತೆ ಜಿಲ್ಲಾಡಳಿತ ನಡೆದುಕೊಂಡಿಲ್ಲ.
ದುರಂತದ ಬಳಿಕ ಅಧಿಕಾರಿಗಳು ಆಸ್ಪತ್ರೆಗೆ ಬಂದು, ಗಾಯಾಳುಗಳ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆ. ಡಿಸಿ, ಸಂಸದ ಶ್ರೇಯಸ್ ಪಟೇಲ್ ಕೂಡ ಬಂದು, ನೋಡಿಕೊಂಡು ಹೋಗಿದ್ದಾರೆ. ಆ ವೇಳೆ ಬಿಲ್ ವಿಚಾರವಾಗಿ ಯಾವುದೇ ಭರವಸೆ ನೀಡಿಲ್ಲ. ಆಸ್ಪತ್ರೆ ಆಡಳಿತ ಮಂಡಳಿ ಜೊತೆಗೂ ಮಾತನಾಡಿಲ್ಲ. ಬಳಿಕ, ಯಾರೊಬ್ಬರು ಕೂಡ ಆಸ್ಪತ್ರೆಗೆ ಬಂದಿಲ್ವಂತೆ.
ಹೀಗಾಗಿ ಮುಂದಿನ ಬಿಲ್ ಪ್ರೊಸೆಸ್ ಬಗ್ಗೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಬಿಲ್ ಕಟ್ಟಿ ಬೇರೆ ಆಸ್ಪತ್ರೆಗೂ ಕರೆದುಕೊಂಡು ಹೋಗೋಕೂ ಆಗ್ತಿಲ್ಲ, ದುಬಾರಿ ಹಣ ಕಟ್ಟಿ ಚಿಕಿತ್ಸೆ ಕೊಡಿಸೋಕೂ ಆಗದಂತ ಸ್ಥಿತಿಯಲ್ಲಿದ್ದಾರೆ. ಡಿಸಿಯವರನ್ನ ಫೋನ್ ಮಾಡಿ ಕೇಳಿದ್ರೆ, ಖಾಸಗಿ ಆಸ್ಪತ್ರೆಗೆ ಏಕೆ ಕರೆದುಕೊಂಡು ಹೋಗಿದ್ದೀರಾ ಅಂತಾ ಪ್ರಶ್ನಿಸಿದ್ರಂತೆ. ಆರೋಗ್ಯ ಇಲಾಖೆ ಯಾರೊಬ್ಬರೂ ಕೂಡ, ಸಂಪರ್ಕಿಸಿಲ್ವಂತೆ.
ಸೆಪ್ಟೆಂಬರ್ 12ರಂದು ನಗರದ ಮಂಗಳ ಆಸ್ಪತ್ರೆಗೆ, ಗಂಭೀರ ಸ್ಥಿತಿಯಲ್ಲಿದ್ದ ಆದರ್ಶ್, ಋತ್ವಿಕ್ನನ್ನು ಸೇರಿಸಲಾಗಿತ್ತು. ದುಡ್ಡು ಕಟ್ಟಿ ಅಂತಾ ಆಸ್ಪತ್ರೆಯವರು ದುಂಬಾಲು ಬಿದ್ದಿದ್ದಾರೆ. ದಿಕ್ಕು ತೋಚದೇ ಕಂಗಾಲಾಗಿರುವ ಗಾಯಾಳುಗಳ ಪೋಷಕರು, ಸರ್ಕಾರ ತಕ್ಷಣವೇ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.