Chikkaballapura News: ಹಲವು ದಿನಗಳಿಂದ ಪೆಂಡಿಂಗ್ನಲ್ಲಿದ್ದ ಚಿಕ್ಕಬಳ್ಳಾಪುರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಸೀಕಲ್ ರಾಮಚಂದ್ರಗೌಡರನ್ನು ಆಯ್ಕೆ ಮಾಡಿದ್ದಾರೆ.
ಈ ಬಗ್ಗೆ ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಣಿಕ್ ಅಧಿಕೃತ ಆದೇಶ ಹ“ರಡಿಸಿದ್ದಾರೆ. ಸೀಕಲ್ ರಾಮಚಂದ್ರಗೌಡರು ಮೂಲತಃ ಚಿಂತಾಮಣಿ ತಾಲೂಕಿನವರಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ನಾನಾಕಡೆ ಆಸ್ಪತ್ರೆಯನ್ನು ತೆರೆದಿರುವ ಖ್ಯಾತ ಉದ್ಯಮಿಯಾಗಿದ್ದಾರೆ.
2023 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಥಮ ಪ್ರಯತ್ನದಲ್ಲೇ 15446 ಮತಗಳನ್ನು ಪಡೆದು ಗಮನ ಸೆಳೆದಿದ್ದರು. ಅಂದಿನಿಂದ ಇಂದಿನವರೆಗೆ ಬಿಜೆಪಿಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಲ್ಲದೇ, ಶಿಡ್ಲಘಟ್ಟ ನಗರದಲ್ಲಿ ಮಯೂರಿ ಥಿಯೇಟರ್ ಇದ್ದ ಜಾಗವನ್ನು ಖರೀದಿಸಿ, ಅಲ್ಲಿನ ಪಕ್ಷದ ಕಾರ್ಯಚಟುವಟಿಕೆ ನಡೆಸಲು, ಸೇವಾ ಸೌಧ ನಿರ್ಮಿಸಿ ಇಂದಿಗೂ ಕೂಡ ಪಕ್ಷದ ಕಾರ್ಯಕ್ರಮಗಳಿಗೆ ಖಾಯಂ ನೆಲೆಯನ್ನು ಕಲ್ಪಿಸಿದ್ದಾರೆ.
ಇನ್ನು ಸೀಕಲ್ ರಾಮಚಂದ್ರರಾವ್ ಅವರ ಆಯ್ಕೆಯಿಂದ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ, ಹಿರಿಯರಲ್ಲಿ ಸಂತೋಷ ಮನೆ ಮಾಡಿದೆ. ಹೈಕಮಾಂಡ್ ಅತ್ಯುತ್ತಮರನ್ನೇ ಆಯ್ಕೆ ಮಾಡಿದ್ದಾರೆಂದು ಎಲ್ಲರೂ ಶ್ಲಾಘಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಸೀಕಲ್ ರಾಮಚಂದ್ರರಾವ್, ಬಿಜೆಪಿ ಪಕ್ಷವು ನನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಿಸಿ, ಜವಾಬ್ದಾರಿ ನೀಡಿರುವುದಕ್ಕೆ ಎಲ್ಲಾ ಹಿರಿಯ ಮುಖಂಡರಿಗೆ, ರಾಜ್ಯಾಧ್ಯಕ್ಷರಿಗೆ, ಹಿರಿಕಿರಿಯ ಮುಖಂಡರಿಗೆ ಅಭಿನಂದನೆ ಅರ್ಪಿಸುತ್ತೇನೆ. ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪ್ರಯತ್ನಿಸುತ್ತೇನೆ ಎಂದು ರಾಮಚಂದ್ರರಾವ್ ಹೇಳಿದ್ದಾರೆ.