Hubli News: ಹುಬ್ಬಳ್ಳಿ: ನೇಹಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಗುರುವಾರ ನಮ್ಮ ಮನೆಗೆ ಆಗಮಿಸಿ ಘಟನೆ ಕುರಿತ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ನಮ್ಮಿಂದಲೂ ಕೆಲ ಮಾಹಿತಿ ಕೇಳಿದ್ದಾರೆ. ಜೊತೆಗೆ ತನಿಖೆಗೆ ಸಹಕಾರ ನೀಡುವಂತೆ ಕೇಳಿದ್ದಾರೆ ಎಂದು ಮೃತ ನೇಹಾಳ ತಂದೆ ನಿರಂಜನ ಹಿರೇಮಠ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾ ಹಂತದಲ್ಲಿರುವಾಗ ಈ ಬಗ್ಗೆ ಹೆಚ್ಚಿನ ವಿವರಣೆ ಕೊಡಲು ಆಗುವುದಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ನಾನೇ ಪೂರ್ಣ ಮಾಹಿತಿ ನೀಡುವೆ ಎಂದು ಅವರು ಹೇಳಿದರು.
ಪ್ರತಿ ದಿನ ಹೇಳಿಕೆ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ನಿರಂಜನ, ನಾನು ಆ ರೀತಿಯ ಹೇಳಿಕೆ ಕೊಟ್ಟಿಲ್ಲ. ಅಂದು ಇದ್ದ ನಿಲುವೇ ಇವತ್ತು ಇದೆ. ಮಗಳ ಹತ್ಯೆ ನಂತರ ಸರ್ವಜನಾಂಗದವರು ಆಗಮಿಸಿ ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಇದೇ ವೇಳೆ ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡು ಬಂದಿದೆ. ನೇಹಾಳ ಶಿವಗಣಾರಾಧನೆಯ ಐದನೇ ದಿನದಂದು ಸಂತಾಪದ ನೆಪದಲ್ಲಿ ಒಬ್ಬರು ಮನೆಯೊಳಗೆ ಬಂದು ವಿಡಿಯೋ ಮಾಡಿಕೊಂಡು ಹೋಗಿದ್ದಾರೆ. ಕೊಲೆ ಮಾಡುವ ಮುನ್ನ ಆರೋಪಿ ಬಿಡ್ನಾಳ ಬಸವನಗರದಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡಿದ್ದನೆಂದು ತಿಳಿದು ಬಂದಿದೆ ಎಂದರು.
ಅನಾಮಧೇಯ ವ್ಯಕ್ತಿಗಳು ನಮ್ಮ ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ. ಇವತ್ತು ಕೆಲ ವ್ಯಕ್ತಿಗಳು ಯಾವುದೋ ಸಂಚು ಹಾಕಿದ್ದಾರೆ ಎಂದು ಅನುಮಾನ ಬಂದಿದೆ. ಕುಟುಂಬಕ್ಕೆ ಭದ್ರತೆ ಕೊಡುವುದಾಗಿ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಭದ್ರತೆ ಕೂಡ ಒದಗಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕದ್ದುಮುಚ್ಚಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು?: ಸಿಎಂಗೆ ಸುನೀಲ್ ಕುಮಾರ್ ಪ್ರಶ್ನೆ
ಆರೋಪಿ ಫಯಾಜ್ ಮೊಬೈಲ್ನಲ್ಲಿದ್ದ ಫೋಟೋಗಳು ಲೀಕ್ ಆಗಿದ್ದು ಹೇಗೆ?: ಪ್ರಹ್ಲಾದ್ ಜೋಶಿ ಪ್ರಶ್ನೆ..