ಕಲಬುರಗಿ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಜಟಾಪಟಿಯ ನಡುವೆಯೇ ಶಾಸಕರು ಹಾಗೂ ಸಚಿವರ ನಡುವೆ ಟಾಕ್ ಫೈಟ್ ಜೋರಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ನೇರವಾಗಿ ವಸತಿ ಇಲಾಖೆಯಲ್ಲಿನ ಅವ್ಯವಹಾರಗಳ ಬಗ್ಗೆ ಶಾಸಕ ಬಿ.ಆರ್. ಪಾಟೀಲ್ ಧ್ವನಿ ಎತ್ತಿದ್ದರು. ಆದರೆ ಇದೀಗ ಮತ್ತೆ ವಸತಿ ಜಮೀರ್ ಅಹ್ಮದ್ ಖಾನ್ ವಿರುದ್ದ ಶಾಸಕ ಪಾಟೀಲ್, ಅಂವ ಯಾವ ದೊಡ್ಡ ಮನುಷ್ಯ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜಮೀರ್ ಅಹ್ಮದ್ ಖಾನ್ ಹೊಗಳಿಕೆಯ ವಿಚಾರಕ್ಕೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂತ ಜಮೀರ್ ಹೇಳಿಕೊಂಡಿದ್ದಾರೆ. ಆದರೆ ಅವರ ಇಲಾಖೆಯ ಕಾರ್ಯವೈಖರಿಯಿಂದ ನೊಂದಿರುವ ಜನರನ್ನು ವಿಚಾರಿಸಿದರೆ, ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
ನನ್ನ ಬಳಿ ಒಟ್ಟು 27 ಜನರ ವಿವರ ಮತ್ತು ಮೊಬೈಲ್ ಸಂಖ್ಯೆಗಳಿವೆ. ಈಗ ಅವರನ್ನು ಮಾತನಾಡಿಸಿದರೆ, ಜಮೀರ್ ಅವರ ಇಲಾಖೆಯ ಕಾರ್ಯವೈಖರಿ ಹೇಗಿದೆ ಎಂದು ಬಯಲಾಗುತ್ತದೆ. ವಸತಿ ಇಲಾಖೆಯಲ್ಲಿ ಏನೆಲ್ಲಾ ಅಕ್ರಮ ನಡೆಯುತ್ತಿದೆ ಎಂಬುದನ್ನು ಅವರೇ ಹೇಳುತ್ತಾರೆ. ಜಮೀರ್ ಅಹ್ಮದ್ ಯಾವ ದೊಡ್ಡ ಮನುಷ್ಯ? ಸುರ್ಜೇವಾಲಾ ಬಳಿ ಎಲ್ಲವನ್ನೂ ಹೇಳಿದ್ದೇನೆ ಎಂದು ಶಾಸಕ ಬಿ.ಆರ್. ಪಾಟೀಲ್ ಮತ್ತೊಮ್ಮೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಸಮರ ಸಾರಿದ್ದಾರೆ.
ಇನ್ನೂ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಶಾಸಕ ಬಿ.ಆರ್ ಪಾಟೀಲ್ ಅವರ ಆಡಿಯೋವೊಂದು ವೈರಲ್ ಆಗಿತ್ತು. ಅಲ್ಲದೆ ಇದು ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಸತಿ ಇಲಾಖೆಯಲ್ಲಿ ಆ ರೀತಿಯ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ಇದಾದ ಬಳಿಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿದ್ದ ಜಮೀರ್ ಅಹ್ಮದ್ ಖಾನ್ ಅವರನ್ನು ಹಾಡಿ ಹೊಗಳಿದ್ದರು. ಅಲ್ಲದೆ ನಂಬರ್ ಮಂತ್ರಿ ನೀವೇ ಎಂದು ಹೇಳಿದ್ದರು. ಆದರೆ ಇದಕ್ಕೆ ಕೌಂಟರ್ ನೀಡಿರುವ ಬಿ.ಆರ್. ಪಾಟೀಲ್ ಮತ್ತೆ ಸಿದ್ದು ಆಪ್ತ ಸಚಿವನ ವಿರುದ್ಧ ಸಿಡಿದಿದ್ದಾರೆ.