Political News: ಆಳಂದ ಶಾಸಕ ಬಿ.ಆರ್.ಪಾಟೀಲ್ ಬಡವರ ಮನೆ ಮಂಜೂರಾತಿಗೂ ಲಂಚ ನೀಡಬೇಕಿದೆ ಎಂದಿರುವ ಆಡಿಯೋ ವೈರಲ್ ಆದ ಬಳಿಕ ಇದೀಗ ಶಾಸಕ ರಾಜು ಕಾಗೆ ಕೂಡ ಸ್ವಂತ ಪಕ್ಷದ ವಿರುದ್ದವೇ ಹರಿಹಾಯ್ದಿದ್ದಾರೆ.
ಈ ಅವಕಾಶ ಬಿಡದೇ, ರಾಜ್ಯ ಸರ್ಕಾರವನ್ನು ಚೆನ್ನಾಗಿ ರೋಸ್ಟ್ ಮಾಡಲು ರೆಡಿಯಾಗಿರುವ ಬಿಜೆಪಿಗರು, ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.
‘ಭ್ರಷ್ಟತೆ-ಲೂಟಿಕೋರತನ’ ಕಾಂಗ್ರೆಸ್ ಆಡಳಿತದ ಅವಿಭಾಜ್ಯ ಅಂಗವಾಗಿದೆ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕ ರಾಜು ಕಾಗೆ ವಾಸ್ತವ ಸ್ಥಿತಿಯನ್ನು ವಿವರಿಸಿ ಆಕ್ರೋಶ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಬಂದಿರುವ ದುಸ್ಥಿತಿಯನ್ನು ವಿವರಿಸಿದ್ದಾರೆ. ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಬಡವರ ಮನೆ ಮಂಜೂರಾತಿಗೂ ಲಂಚ ನೀಡಬೇಕಾದ ಪರಿಸ್ಥಿತಿಯನ್ನು ವಿವರಿಸಿ ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಸರ್ಕಾರದ ಕಚೇರಿಗಳಲ್ಲಿ ದರ ಹಾಗೂ ಪರ್ಸೆಂಟೇಜ್ ನಿಗದಿಪಡಿಸಿ ವಸೂಲಿ ಮಾಡಲಾಗುತ್ತಿರುವ ಪರಿಸ್ಥಿತಿಯನ್ನು ಸ್ವತಃ ಕಂದಾಯ ಸಚಿವರೇ ಅನಾವರಣಗೊಳಿಸಿದ್ದಾರೆ ಎಂದು ವಿಜಯೇಂದ್ರ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕ“ಂಡಿದ್ದಾರೆ.
ಕಾಂಗ್ರೆಸ್ ಆಡಳಿತ ರಾಜ್ಯಕ್ಕೆ ಶಾಪಗ್ರಸ್ತವಾಗಿ ಕಾಡುತ್ತಿದೆ, ಭಾರತೀಯ ಜನತಾ ಪಾರ್ಟಿಯ ಹೋರಾಟ, ಜನಾಕ್ರೋಶ ಯಾತ್ರೆಯ ಕುರಿತು ಹಗುರವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕರೇ ಇದೀಗ ಉತ್ತರ ಕೊಡುತ್ತಿದ್ದಾರೆ. ಒಂದು ಕಡೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಶೀತಲ ಸಮರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಅಭಿವೃದ್ಧಿ ಶೂನ್ಯತೆಯಿಂದ ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಸಿಡಿದೆದ್ದು ನಿಂತಿದ್ದಾರೆ, ಇದರ ನಡುವೆ ಜನಸಾಮಾನ್ಯರ ಸ್ಥಿತಿ ಅಸಹನೀಯವಾಗಿದೆ, ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎನ್ನುವ ಚಿತ್ರಣ ಸ್ಪಷ್ಟವಾಗಿದೆ .
ವಿಧಾನಸಭಾ ಕ್ಷೇತ್ರವಾರು ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಜನರು ಲಂಚ ನೀಡಬೇಕಾದ ಪರಿಸ್ಥಿತಿಯಿತ್ತು, ಈಗ ಶಾಸಕರನ್ನೂ ಲಂಚದ ಭೂತ ಆವರಿಸಿ ಬಿಟ್ಟಿದೆ ಎಂಬುದನ್ನು ಶಾಸಕರಾದ ಬಿ.ಆರ್.ಪಾಟೀಲ್ ಹಾಗೂ ರಾಜು ಕಾಗೆ ಸಾಕ್ಷೀಕರಿಸಿದ್ದಾರೆ. ಅನುದಾನವಿಲ್ಲದೆ, ಜನರ ಸಮಸ್ಯೆಗಳನ್ನು ನೀಗಿಸಲಾಗದೆ ಕಾಂಗ್ರೆಸ್ ಶಾಸಕರು ಹತಾಶೆಯ ಹಂತ ತಲುಪಿದ್ದಾರೆ. ಶಾಸಕರ ಸಂಯಮದ ಕಟ್ಟೆಯೊಡೆಯಲು ಆರಂಭವಾಗಿದೆ, ಬಿ.ಆರ್.ಪಾಟೀಲ್, ರಾಜು ಕಾಗೆ ಅವರ ಸಾಲಿನಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರು ನಿಂತಿದ್ದಾರೆ. ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವ್ಯವಸ್ಥೆಯ ಭ್ರಷ್ಟತೆ ಹಾಗೂ ಲೂಟಿಕೋರತನದಿಂದ ಬೇಸತ್ತು ಅಸಹಾಯಕ ಪರಿಸ್ಥಿತಿ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾನ್ಯ ಗೌರವಾನ್ವಿತ ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿರ್ಧಾರ ತೆಗೆದುಕೊಳ್ಳಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.