Saturday, July 27, 2024

Latest Posts

ಟೀಮ್ ಇಂಡಿಯಾ ಸೋಲಿಗೆ ಕಾರಣ ಇವರೇನಾ..?

- Advertisement -


ವಿಶ್ವಕಪ್ ಲೀಗ್ ಪಂದ್ಯದಲ್ಲಿ, ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ದ ಭಾರತ, ಸೆಮೀಸ್ ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ನಡುವೆ ತಂಡದಲ್ಲಿ ಎಲ್ಲವೂ ಸರಿ ಇಲ್ಲವೇನೋ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಅಷ್ಟಕ್ಕೂ ನಿನ್ನೆ ನಡೆದಿದ್ದೇನು ಪ್ರಮುಖ ಪಂದ್ಯದಲ್ಲಿ ತಂಡದ ಸೋಲಿಗೆ ಕಾರಣವಾಗಿದ್ದಾದ್ರು ಯಾರು, ಅನ್ನೋ ಅನುಮಾನ ನಿಮ್ಮನ್ನು ಕಾಡದೇ ಇರೋದಿಲ್ಲ. ಯಸ್.. ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಸೋಲಿಗೆ ಭಾರತ ತಂಡದ ಕೋಚ್ ರವಿಶಾಸ್ತ್ರಿ ಕಾರಣ ಎನ್ನಲಾಗುತ್ತಿದೆ.


ನಾಯಕನ ಗಮನಕ್ಕೆ ತರದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೋಚ್ ಬದಲಾವಣೆ ಮಾಡಿದ್ದು, ವಿಶ್ವಕಪ್​ ಟೂರ್ನಿಯಿಂದ ಭಾರತ ಹೊರ ಬೀಳಲು ಕಾರಣ ಎನ್ನಲಾಗುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೋಚ್ ರವಿಶಾಸ್ತ್ರಿ ಮತ್ತು ಕ್ಯಾಪ್ಟನ್ ಕೊಹ್ಲಿ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ. ಹೌದು.. ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್​ಗೆ ಮರಳುತ್ತಿದ್ದಂತೆ, ಕೋಚ್ ರವಿಶಾಸ್ತ್ರಿ, ರಿಷಭ್ ಪಂತ್​ರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಕೊಹ್ಲಿ ಔಟಾಗಿ ಬರುತ್ತಿದ್ದಂತೆ ಯುವ ಆಟಗಾರ ಪಂತ್​, ಕ್ರೀಸ್ ಗೆ ಇಳಿದಿದ್ದರು. ಈ ಕ್ರಮಾಂಕದಲ್ಲಿ ಪಂತ್ ಬ್ಯಾಟ್​ ಮಾಡುವುದು ಕೊಹ್ಲಿಗೆ ಇಷ್ಟವಿರಲಿಲ್ಲ.

ಅದರಲ್ಲೂ ಸಂಕಷ್ಟದ ಸಂದರ್ಭದಲ್ಲಿ ಅನುಭವಿ ಆಟಗಾರನಿಗೆ ಆದ್ಯತೆ ನೀಡಬೇಕಾಗಿತ್ತು, ಎಂಬುದು ಕೊಹ್ಲಿಯ ವಾದವಾಗಿತ್ತು. ಕೊಹ್ಲಿ ಪ್ರಕಾರ ಎದುರಾಳಿ ಪಡೆಯ ಬೌಲಿಂಗ್ ದಾಳಿ ಎದುರಿಸಲು ಅನುಭವಿ ಧೋನಿಯನ್ನು ಕಣಕ್ಕಿಳಿಸಬೇಕಿತ್ತು. ಕಡಿಮೆ ಓವರ್​ನಲ್ಲಿ ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ, ವಿಕೆಟ್ ಕಾಯ್ದುಕೊಳ್ಳುವ ಅವಶ್ಯಕತೆಯಿತ್ತು. ಆದರೆ ಪಂತ್ ತಾಳ್ಮೆ ಇಲ್ಲದೆ ಬ್ಯಾಟ್​ ಬೀಸಿ ವಿಕೆಟ್ ಕೈಚೆಲ್ಲಿದ್ದರು. ಪಂತ್ ಔಟಾಗಿ ಪೆವಿಲಿಯನ್ ಕಡೆ ಬರುತ್ತಿದ್ದಂತೆ, ರವಿ ಶಾಸ್ತ್ರಿ ಬಳಿ ತೆರಳಿದ ಕೊಹ್ಲಿ ವಾಗ್ವಾದಲ್ಲಿ ತೊಡಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಟೀಂ ಇಂಡಿಯಾದ ಸೋಲಿಗೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿಕೊಂಡ ಎಡವಟ್ಟು ಮುಖ್ಯ ಕಾರಣ ಎಂದು, ಮಾಜಿ ಆಟಗಾರರಾದ ಸಚಿನ್, ಗಂಗೂಲಿ, ಲಕ್ಷ್ಮಣ್
ಅಭಿಪ್ರಾಯ ಪಟ್ಟಿದ್ದಾರೆ.

ಅಷ್ಟೇ ಅಲ್ಲದೆ ಅನೇಕ ದಿಗ್ಗಜರ ಪ್ರಕಾರ ಸೆಮಿಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು ಎಂದಿದ್ದಾರೆ. ಇಲ್ಲಿ ಅನುಭವಕ್ಕೆ ಮಣೆ ಹಾಕದಿರುವುದೇ, ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಲಾಗಿದೆ. ಟೂರ್ನಿಯಿಂದ ತಂಡ ಹೊರ ಬಿದ್ದ ಬೆನ್ನಲ್ಲೇ, ನಾಯಕ ಮತ್ತು ಕೋಚ್ ನಡುವೆ ಎಲ್ಲವೂ ಸರಿ ಇಲ್ಲ ಅನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಅಭಿಮಾನಿಗಳೆಲ್ಲ, ವರ್ಲ್ಡ್ ಕಪ್ ಟೂರ್ನಿಯಿಂದ ಭಾರತ ಹೊರ ಬೀಳಲು, ಕೋಚ್ ರವಿಶಾಸ್ತ್ರಿ ಯೇ ಕಾರಣ ಎಂದು ದೂರುತ್ತಿದ್ದಾರೆ.

ನಂದನ್ ಸ್ಪೋರ್ಟ್ಸ್ ಬ್ಯೂರೋ ಕರ್ನಾಟಕ ಟಿವಿ

https://www.youtube.com/watch?v=659Bsl3a0dE
- Advertisement -

Latest Posts

Don't Miss