ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರನ್ನು ಇಂದು (ಗುರುವಾರ) ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ ಭೇಟಿ ಮಾಡಿ ಕೆಲ ಹೊತ್ತು ಚರ್ಚೆ ನಡೆಸಿದರು. ಆದರೆ, ದರ್ಶನ್ ಅವರು ತಮ್ಮ ತಾಯಿ ಮೀನಾ ತೂಗುದೀಪ ಅವರು ನೋಡಲು ಬರುತ್ತಾರೆ ಅಂದುಕೊಂಡಿದ್ದರು. ಅದರೆ, ಅವರ ತಾಯಿ ಮಗನನ್ನು ನೋಡಲು ಹೋಗಿಲ್ಲ. ಇದರಿಂದ ದರ್ಶನ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ದಿನಕರ್ ಮತ್ತು ವಕೀಲರ ಜೊತೆ ಸುಮಾರು 25 ನಿಮಿಷಗಳ ಕಾಲ ದರ್ಶನ್ ಮಾತನಾಡಿದ್ದಾರೆ.
ಈ ವೇಳೆ ಜಾಮೀನು ಅರ್ಜಿ ವಿಚಾರ ಕುರಿತು ಚರ್ಚೆ ಮಾಡಿದ್ದಾರೆ. ವಕೀಲರ ಜೊತೆ ಯಾವಾಗ ಜಾಮೀನು ಅರ್ಜಿ ಸಲ್ಲಿಸಬೇಕು, ಚಾರ್ಜ್ ಶೀಟ್ನಲ್ಲಿ ಏನೆಲ್ಲಾ ಇದೆ ಎಂಬ ಬಗ್ಗೆಯೂ ದರ್ಶನ್ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಮುಂದಿನ ನಡೆಗಳ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಅವರನ್ನು ನೋಡಲು ಅವರ ತಾಯಿ ಮೀನಾ ತೂಗುದೀಪ ಅವರು ಬರುತ್ತಾರೆ ಎನ್ನಲಾಗಿತ್ತು. ಆದರೆ, ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ದಿನಕರ್ ಮಾತ್ರ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ್ ಅವರಿಗೆ ಪತ್ನಿ ಡ್ರೈ ಫ್ರೂಟ್ಸ್ ಇತ್ಯಾದಿ ವಸ್ತುಗಳನ್ನು ಸಹ ಬ್ಯಾಗ್ ವೊಂದರಲ್ಲಿ ಇಟ್ಟು ಕೊಟ್ಟಿದ್ದಾರೆ.
ಅದೇನೆ ಇರಲಿ, ದರ್ಶನ್ ಅವರು ಬಳ್ಳಾರಿ ಜೈಲಿನ ನಾಲ್ಕು ಗೋಡೆಗಳ ನಡುವೆ ಇದ್ದು, ಪಶ್ಚಾತ್ತಾಪ ಪಡುತ್ತಿರುವುದಂತೂ ಹೌದು. ಸದ್ಯ ದರ್ಶನ್ ಜೊತೆ ಡಿ ಗ್ಯಾಂಗ್ ಇಲ್ಲ. ಪ್ರತಿಯೊಬ್ಬರನ್ನೂ ಒಂದೊಂದು ಜೈಲಿಗೆ ಸ್ಥಳಾಂತರಿಸಲಾಗಿದೆ. ಪ್ರದೋಶ್ ಅವರನ್ನು ಬೆಳಗಾವಿ ಜೈಲಿಗೆ ಕಳಿಸಿದರೆ, ಉಳಿದ ನಾಲ್ವರನ್ನು ತುಮಕೂರು ಜೈಲು ಹಾಗು ಇತರೆ ಆರೋಪಿಗಳನ್ನು ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.