ಆತ ಮೂರು ಮಕ್ಕಳ ತಂದೆ.. ಗಾರೆಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ರಾತ್ರಿ ಕುಟುಂಬದವರ ಜೊತೆ ಕಾಲ ಕಳೆದಿದ್ದ ಆತ ಬೆಳಗಾಗುವುದರೊಳಗೆ ಕತ್ತು ಕುಯ್ದ ರೀತಿಯಲ್ಲಿ ಆತನ
ಶವ ಪತ್ತೆಯಾಗಿದೆ.
ಫೋಟೋದಲ್ಲಿ ಕಾಣುತ್ತಿರೋ ವ್ಯಕ್ತಿಯ ಹೆಸರು ಹುಲ್ಲೇಶ್ ಹಾಲರವಿ. 38 ವರ್ಷದ ಈತ ಗಿರಣಿಚಾಳದ ನಿವಾಸಿ. ಮದುವೆಯಾದ ನಂತರ ತನ್ನ ಮೂರು ಮಕ್ಕಳ ಜೊತೆ ತಾರಿಹಾಳದಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ ಕಳೆದ ಮೂರು ದಿನಗಳಿಂದ ಗಿರಣಿಚಾಳದಲ್ಲಿನ ತನ್ನ ತಾಯಿಯ ಮನೆಗೆ ಬಂದಿದ್ದ ಈತ ಏರಿಯಾದಲ್ಲಿ ಜಾತ್ರೆ ಮಾಡಿದ್ದ. ಎಲ್ಲರ ಜೊತೆ ಖುಷಿಯಾಗಿದ್ದವ ಬೆಳಗಾಗುವುದರೊಳಗೆ ಹೆಣವಾಗಿ ಪತ್ತೆಯಾಗಿದ್ದಾನೆ.
ಇನ್ನು, ಕೊಲೆಯಾದ ಹುಲ್ಲೇಶ್ ಯಾರ ಜೊತೆಗೂ ಜಗಳ ಮಾಡಿಕೊಂಡವನಲ್ಲ. ಯಾರ ತಂಟೆಗೂ ಕೂಡ ಹೋದವನಲ್ಲ. ಬೆಳ್ಳಿ, ಬಂಗಾರ ಮಾಡಿಕೊಂಡವನಲ್ಲ. ಸಂಜೆ ಹೊತ್ತು ಮದ್ಯ ಸೇವಿಸುವ ಚಟವಿತ್ತು. ಕುಡಿಯೋದನ್ನೂ 1 ತಿಂಗಳ ಹಿಂದಷ್ಟೇ ಬಿಟ್ಟಿದ್ದ. ಆದ್ರೆ, ಆತನನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ರೋ ನಮಗೆ ಗೊತ್ತಾಗುತ್ತಿಲ್ಲ ಅಂತಾ ಹುಲ್ಲೇಶ್ ತಾಯಿ ಕಣ್ಣೀರು ಹಾಕುತ್ತಿದ್ದಾರೆ..
ಕೊಲೆಯಾದ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಭೇಟಿಯನ್ನು ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಹುಲ್ಲೇಶ್ನ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದಿರುವ ಗುರುತು ಪತ್ತೆಯಾಗಿದೆ. ಸ್ಥಳಕ್ಕಾಗಮಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕೂಡ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಸಿಟಿ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಒಟ್ನಲ್ಲಿ, ಅಮಾವಾಸ್ಯೆ ದಿನವೇ ಬಾವಿಯಲ್ಲಿ ಹುಲ್ಲೇಶ್ ಮೃತದೇಹ ಪತ್ತೆಯಾಗಿದ್ದು, ಇಡೀ ಗ್ರಾಮಕ್ಕೆ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಹುಲ್ಲೇಶ್ನದ್ದು ಆತ್ಮಹತ್ಯೆಯೋ, ಇಲ್ಲ ಯಾರಾದ್ರೂ ಕೊಲೆ ಮಾಡಿದ್ದಾರಾ..? ಅನ್ನೋದು ತನಿಖೆಯಿಂದ ಬಯಲಾಗ್ಬೇಕಿದೆ..
– ಸಂಗಮೇಶ್, ಕರ್ನಾಟಕ ಟಿವಿ, ಹುಬ್ಬಳ್ಳಿ..