ನವದೆಹಲಿ : ಪಹಲ್ಗಾಮ್ ದಾಳಿಯ ಬಳಿಕ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದ ಉಗ್ರರನ್ನು ಸದೆ ಬಡಿಯುವಂತೆ ಪ್ರತೀಕಾರಕ್ಕಾಗಿ ದೇಶಾದ್ಯಂತ ವ್ಯಾಪಕ ಆಕ್ರೋಶ ಹೆಚ್ಚಾಗಿದೆ. ಇದರ ಬೆನ್ನಲ್ಲಿಯೇ ಕೇಂದ್ರ ಸರ್ಕಾರ ಉಗ್ರರ ರಾಷ್ಟ್ರ ಪಾಕಿಸ್ತಾನಕ್ಕೆ ಒಂದರ ಮೇಲೊಂದು ಆಘಾತ ನೀಡುತ್ತಿದೆ. ಆದರೂ ಸಹ ಬುದ್ಧಿ ಕಲಿಯದೆ ಹೇಡಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತವನ್ನು ಕೆದಕುವ ದುಸ್ಸಾಹಸ ಮಾಡುತ್ತಿದೆ. ಆದರೆ ಈ ಭಯೋತ್ಪಾದನಾ ನಿರ್ಮೂಲನೆಗಾಗಿ ಹೋರಾಡುತ್ತಿರುವ ಭಾರತ ಉಗ್ರರನ್ನು ಮಟ್ಟ ಹಾಕಲು ಗಟ್ಟಿಯಾದ ಸಂಕಲ್ಪವನ್ನು ಹೊಂದಿದೆ.
ಪ್ರಧಾನಿಗಳ ಬಗ್ಗೆ ಜನರು ತಿಳಿದುಕೊಂಡಿದ್ದಾರೆ..
ಇನ್ನೂ ಪಹಲ್ಗಾಮ್ ದಾಳಿಯನ್ನು ಕಟುವಾದ ಪದಗಳಲ್ಲಿ ಟೀಕಿಸಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಅವರು, ಭಾರತದ ಮೇಲೆ ದಾಳಿ ಮಾಡಲು ಧೈರ್ಯ ಮಾಡುವವರಿಗೆ ಸೂಕ್ತ ಉತ್ತರ ನೀಡುವುದು ರಕ್ಷಣಾ ಸಚಿವರಾಗಿ ನನ್ನ ಜವಾಬ್ದಾರಿಯಾಗಿದೆ. ನಮ್ಮ ಪ್ರಧಾನಿಯನ್ನು ನೀವು ಚೆನ್ನಾಗಿ ತಿಳಿದಿದ್ದೀರಿ, ಅವರ ಕಾರ್ಯಶೈಲಿ, ದೃಢನಿಶ್ಚಯದ ಬಗ್ಗೆ ನಿಮಗೆ ಗೊತ್ತಿದೆ. ಅವರು ಅಪಾಯಗಳನ್ನು ತೆಗೆದುಕೊಳ್ಳಲು ಕಲಿತುಕೊಂಡ ವಿಧಾನ ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.
ದೇಶದ ಭದ್ರತೆ ನನ್ನ ಜವಾಬ್ದಾರಿ..
ನಮ್ಮ ಧೈರ್ಯಶಾಲಿ ಸೈನಿಕರು ಯಾವಾಗಲೂ ಭಾರತವನ್ನು ರಕ್ಷಣೆ ಮಾಡಿದ್ದಾರೆ. ಭಾರತದ ಶಕ್ತಿ ಅದರ ಸಶಸ್ತ್ರ ಪಡೆಗಳಲ್ಲಿ ಮಾತ್ರವಲ್ಲ, ಅದರ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯಲ್ಲೂ ಇದೆ. ನಮ್ಮ ಋಷಿಮುನಿಗಳು ಮತ್ತು ಜ್ಞಾನಿಗಳು ಭಾರತದ ಆಧ್ಯಾತ್ಮಿಕ ಸ್ವರೂಪವನ್ನು ರಕ್ಷಿಸಿದ್ದಾರೆ. ನಮ್ಮ ಸೈನಿಕರು ಯುದ್ಧಭೂಮಿಯಲ್ಲಿ ಹೋರಾಡುತ್ತಿದ್ದರೆ, ಮತ್ತೊಂದೆಡೆ, ನಮ್ಮ ಸಂತರು ಬದುಕಿನ ಭೂಮಿಯಲ್ಲಿ ಹೋರಾಡುತ್ತಾರೆ. ರಕ್ಷಣಾ ಸಚಿವನಾಗಿ, ನನ್ನ ಸೈನಿಕರೊಂದಿಗೆ ದೇಶದ ಗಡಿಗಳ ಭದ್ರತೆಯನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ನಮ್ಮ ದೇಶದ ಮೇಲೆ ದಾಳಿ ಮಾಡಲು ಧೈರ್ಯ ಮಾಡುವವರಿಗೆ ಸೂಕ್ತ ಉತ್ತರ ನೀಡುವುದು ನನ್ನ ಜವಾಬ್ದಾರಿ ಎಂದು ಅವರು ಗುಡುಗಿದ್ದಾರೆ.
ಮೋದಿ ಪ್ರತೀಕಾರ ತೀರಿಸಿಕೊಳ್ಳುತ್ತಾರೆಎ..
ಪ್ರಧಾನಿ ಮೋದಿ ಈ ಘೋರ ಕೃತ್ಯಕ್ಕೆ ಭಾರತೀಯರು ಬಯಸಿರುವ ಪ್ರತೀಕಾರವನ್ನು ಪಡೆಯುತ್ತಾರೆ ಅಂತ ಭಾರತದ ಜನರಿಗೆ ಭರವಸೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ನೀವು ಅಂದುಕೊಂಡಂತೆ ಖಂಡಿತವಾಗಿಯೂ ನಡೆಯುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ನೀವು ಏನು ಬಯಸುತ್ತೀರೋ ಅದು ನೆರವೇರುತ್ತದೆ ಎಂದು ಹೇಳುವ ಮೂಲಕ ರಾಜನಾಥ್ ಸಿಂಗ್ ಪಾಕ್ ವಿರುದ್ಧ ದೊಡ್ಡ ಕಾರ್ಯಾಚರಣೆಯ ಮುನ್ಸೂಚನೆ ನೀಡಿದ್ದಾರೆ.
ಅಮೆರಿಕಕ್ಕೆ ಕಡ್ಡಿ ಮುರಿದಂತೆ ಹೇಳಿದ ರಾಜನಾಥ್..
ಇನ್ನೂ ಇದಕ್ಕೂ ಮುನ್ನ ಪ್ರಮುಖವಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೇತ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ, ಪಾಕಿಸ್ತಾನ ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ಹಣಕಾಸು ಒದಗಿಸುವ ಇತಿಹಾಸವನ್ನು ಹೊಂದಿದೆ ಎಂದು ರಾಜನಾಥ್ ಸಿಂಗ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಅಲ್ಲದೆ ಪಾಕಿಸ್ತಾನವು ಒಂದು ರಾಕ್ಷಸ ರಾಷ್ಟ್ರವೆಂದು ಬಹಿರಂಗಗೊಂಡಿದೆ, ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶವನ್ನು ಅಸ್ಥಿರಗೊಳಿಸುತ್ತದೆ. ಜಗತ್ತು ಇನ್ನು ಮುಂದೆ ಭಯೋತ್ಪಾದನೆಗೆ ಕಣ್ಣು ಮುಚ್ಚಲು ಸಾಧ್ಯವಿಲ್ಲ ಎಂದು ಸಿಂಗ್ ಹೆಗ್ಸೇತ್ಗೆ ಖಡಕ್ ಆಗಿ ಹೇಳಿದ್ದಾರೆ. ಇದಾದ ಬಳಿಕ ಬಹಿರಂಗವಾಗಿ ರಾಜನಾಥ್ ಸಿಂಗ್ ಉಗ್ರರ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನೂ ಈಗಾಗಲೇ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದರಿಂದ ಹಿಡಿದು ಪಾಕಿಸ್ತಾನಿ ಹೈಕಮಿಷನ್ ಅನ್ನು ಬಂದ್ ಮಾಡಿರುವುದು. ಅಲ್ಲದೆ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸುವವರೆಗೆ ಪಾಕಿಸ್ತಾನದ ವಿರುದ್ಧ ಭಾರತ ಪ್ರತೀಕಾರದ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಯಾವುದೇ ಕ್ಷಣದಲ್ಲಿ ತನ್ನ ವಿರುದ್ಧ ಭಾರತ ಮಿಲಿಟರಿ ಕಾರ್ಯಾಚರಣೆ ನಡೆಸಬಹುದು ಎಂದು ತಿಳಿದಿರುವ ಪಾಕ್ಗೆ ಪುಕ ಪುಕ ಶುರುವಾಗಿದೆ.