ಹೊಸ ವರ್ಷದ ಮೊದಲ ದಿನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶದ ರೈತಾಪಿ ವರ್ಗಕ್ಕೆ ಭಾರೀ ಉಡುಗುಗೊರೆ ನೀಡಿದೆ. ‘ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ’ಯ ವಿಸ್ತರಣೆಯೂ ಸೇರಿದಂತೆ ಹಲವು ಬಂಪರ್ ಕೊಡುಗೆಗಳನ್ನು ಮೋದಿ ಸರ್ಕಾರ ಘೋಷಿಸಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚನೆ ಮಾಡಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು 2025-26ರ ಆರ್ಥಿಕ ವರ್ಷದವರೆಗೆ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗೆ ಒಟ್ಟಾರೆ 69,515.71 ಕೋಟಿ ರೂ.ಮೀಸಲಿರಿಸಲು ನಿರ್ಧರಿಸಲಾಗಿದ್ದು, ಯೋಜನೆಯನ್ನು 2025-26ರವರೆಗೆ ಮುಂದುವರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಅದರಂತೆ ಈ ಎರಡೂ ಯೋಜನೆಯ ಅನುಷ್ಠಾನದಲ್ಲಿ ದೊಡ್ಡ ಪ್ರಮಾಣದ ತಂತ್ರಜ್ಞಾನ ಬಳಕೆಗೆ ಅನುಕೂಲವಾಗುವಂತೆ ಒಟ್ಟು 824.77 ಕೋಟಿ ರೂ. ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕಾರ್ಯಕ್ರಮದೊಳಗೆ YESTECH ಮತ್ತು WINDSನಂತಹ ತಾಂತ್ರಿಕ ಉಪಕ್ರಮಗಳನ್ನು ಬೆಂಬಲಿಸಲು ಈ ನಿಧಿಯನ್ನು ಬಳಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳಿಗೆ ಪೂರಕವಾಗಿ ಈ ಯೋಜನೆಗಳ ಅವಧಿ ವಿಸ್ತರಣೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY)ಯು ಅನಿರೀಕ್ಷಿತ ಘಟನೆಗಳಿಂದ ಆಗುವ ಬೆಳೆ ನಷ್ಟಕ್ಕೆ ಹಣಕಾಸಿನ ನೆರವು ಒದಗಿಸುತ್ತದೆ. ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಈ ಯೋಜನೆ, ರೈತರ ಆದಾಯವನ್ನು ಸ್ಥಿರಗೊಳಿಸುವಲ್ಲಿ ಸಹಾಯಕಾರಿಯಾಗಿದೆ. ಅಲ್ಲದೇ ಈ ಯೋಜನೆಯು ನವೀನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಉತ್ತೇಜಿಸುತ್ತದೆ. ದೇಶದ ಆಹಾರ ಭದ್ರತೆಗೂ ಈ ಯೋಜನೆ ಬೆಂಬಲವಾಗಿ ನಿಂತಿದೆ.
ಅದೇ ರೀತಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರೈತರನ್ನು ರಕ್ಷಿಸಲು, ಕೇಂದ್ರ ಸರ್ಕಾರ ಪುನರ್ರಚನೆ ಮಾಡಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆRWBCIS)ಯನ್ನು ಪರಿಚಯಿಸಿದೆ. 2016ರಲ್ಲಿ ಆರಂಭಗೊಂಡ ಈ ಯೋಜನೆಯು ಆಹಾರ ಬೆಳೆಗಳು, ಎಣ್ಣೆಕಾಳುಗಳು ಮತ್ತು ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ವಿಮಾ ಭದ್ರತೆಯನ್ನು ಒದಗಿಸುತ್ತದೆ.
ಬರ, ಪ್ರವಾಹ, ಚಂಡಮಾರುತ ಮತ್ತು ಇನ್ನಿತರ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ, ರೈತರು ಬೆಳೆದ ಬೆಳೆಗೆ ಸಮಗ್ರ ವಿಮೆ ರಕ್ಷಣೆಯನ್ನು ಒದಗಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಇದೀಗ ಈ ಎರಡೂ ಯೋಜನೆಗಳ ಅವಧಿ ವಿಸ್ತರಣೆ ನಿರ್ಧಾರಕ್ಕೆ ದೇಶದ ರೈತಾಪಿ ವರ್ಗ ಸಂತಸ ವ್ಯಕ್ತಪಡಿಸಿದೆ.