ಪ್ರಿಯಕರನ ಮೇಲೆ ಮುನಿಸಿಕೊಂಡ ಪ್ರಿಯತಮೆ ಆತನಿಗೆ ಚಾಕುವಿನಿಂದ ಇರಿದಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ. ಹಾಸನದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್ನಲ್ಲಿ ತಡರಾತ್ರಿ ಘಟನೆ ನಡೆದಿದೆ.
ಮನುಕುಮಾರ್ ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ತಾಲ್ಲೂಕಿನ, ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಹಾಸನದಲ್ಲಿ ಹಾರ್ಡ್ವೇರ್ ಮತ್ತು ಪ್ಲೇವುಡ್ ಅಂಗಡಿ ಇಟ್ಟುಕೊಂಡಿದ್ದಾರೆ ಮನುಕುಮಾರ್. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು, ಕೆಲ ದಿನಗಳಿಂದ ದೂರವಾಗಿದ್ದರು. ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್ಗೆ ಮನುಕುಮಾರ್ ಬಂದಿದ್ದರು. ಈ ವೇಳೆ ಪದೇ ಪದೇ ಮನುಕುಮಾರ್ಗೆ ಫೋನ್ ಮಾಡುತ್ತಿದ್ದ ಭವಾನಿ, ಆತನನ್ನು ಹುಡುಕಿಕೊಂಡು ಹೊಟೇಲ್ ಬಳಿ ಬಂದಿದ್ದಾರೆ.
ಅಷ್ಟರಲ್ಲಿ ಮನುಕುಮಾರ್ ಕೂಡಾ ಗೇಟ್ ಬಳಿ ಬಂದಿದ್ದಾರೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಸ್ನೇಹಿತರು ಬಿಡಿಸಲು ಮುಂದಾಗಿದ್ದಾರೆ. ಸಿಟ್ಟಿಗೆದ್ದ ಭವಾನಿ, ಮನುಕುಮಾರ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾಳೆ. ಕೂಡಲೇ ಸ್ಮೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮನುಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.