Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ (ಕೆಎಂಸಿಆರ್ಐ) ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ನೂತನ ಸಾರಥಿಯಾಗಿ ಡಾ. ಈಶ್ವರ ಹೊಸಮನಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದುವರೆಗೆ ಹಂಗಾಮಿ ನಿರ್ದೇಶಕರಾಗಿದ್ದ ಡಾ. ಎಫ್.ಎಸ್.ಕಮ ಅವರ ಸ್ಥಾನಕ್ಕೆ ಡಾ. ಹೊಸಮನಿ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೂಲತಃ ಬದಾಮಿಯವರಾದ ಡಾ. ಈಶ್ವರ ಹೊಸಮನಿ ಹುಬ್ಬಳ್ಳಿಯ ಇದೇ ಕಾಲೇಜಿನಲ್ಲಿ 1983ರಲ್ಲಿ ಎಂಬಿಬಿಎಸ್ ಹಾಗೂ ಎಂಎಸ್ ಮುಗಿಸಿದ್ದು, ಇಲ್ಲಿಯೇ ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಹಾಗೂ ಕೆಎಂಸಿ ಮಾಜಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಮುಂದಿನ ವರ್ಷ ಮೇ ತಿಂಗಳಲ್ಲಿ ಡಾ. ಹೊಸಮನಿ ನಿವೃತ್ತಿ ಹೊಂದಲಿದ್ದಾರೆ. ಈ ಹಿಂದೆ ಎರಡು ಮೂರು ಸಲ ನಿರ್ದೇಶಕ ಸ್ಥಾನಕ್ಕೆ ಇವರ ಹೆಸರು ಕೇಳಿ ಬಂದಿತ್ತು. ಆದರೆ ಹಲವು ಬದಲಾವಣೆಯಲ್ಲಿ ಇವರಿಗೆ ಅವಕಾಶ ಸಿಕ್ಕಿರಲಿಲ್ಲ.
ಡಾ.ಎಸ್ ಎ ಕಮ್ಮಾರ ಬದಲಾಯಿಸಿದ ಸರ್ಕಾರ: ಆದರೆ, ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಕೆಎಂಸಿಆರ್ಐಯ ಪ್ರಭಾರ ನಿರ್ದೇಶಕ ಡಾ.ಎಸ್.ಎ. ಕಮ್ಮಾರ ಅವರನ್ನು ಸರ್ಕಾರ ಬದಲಾಯಿಸಿದ್ದು, ಅದೇ ಸಂಸ್ಥೆಯ ಸರ್ಜರಿ ವಿಭಾಗದ ಮುಖ್ಯಸ್ಥ, ಹಿರಿಯ ಪ್ರಾಧ್ಯಾಪಕ ಡಾ. ಈಶ್ವರ ಹೊಸಮನಿ ಅವರಿಗೆ ಪ್ರಭಾರ ನಿರ್ದೇಶಕ ಸ್ಥಾನ ನೀಡಿದೆ.
ಆದೇಶ ಪತ್ರ ಸಿಕ್ಕ ಬಳಿಕ ಅಧಿಕಾರ ವಹಿಸಿಕೊಂಡ ಹೊಸಮನಿ: ಕೆಎಂಸಿ ಮುಖ್ಯ ಆಡಳಿತಾಧಿಕಾರಿ ರಮೇಶ ಕಳಸದ ಅವರು ಡಾ. ಹೊಸಮನಿ ಅವರಿಗೆ ಆದೇಶ ಪತ್ರ ನೀಡಿದ ಬಳಿಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಹಿಂದಿನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಬೆಂಗಳೂರಿನಲ್ಲಿದ್ದು, ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಡಾ. ಹೊಸಮನಿ ಅವರಿಗೂ ಸಹ ಸರಕಾರ ಪೂರ್ಣಾವಧಿ ಅಧಿಕಾರ ನೀಡದೇ ಮುಂದಿನ ಪರ್ಮನೆಂಟ್ ನಿರ್ದೇಶಕರ ನೇಮಕವಾಗುವರೆಗೆ ಅಥವಾ ಮುಂದಿನ ಆದೇಶದವರೆಗೆ ಎಂದು ತಿಳಿಸಿದೆ.
2026ರ ಮೇ 31ಕ್ಕೆ ನಿವೃತ್ತರಾಗಲಿರುವ ಡಾ ಹೊಸಮನಿ: ಕೆಎಂಸಿ ಸೀನಿಯಾರಿಟಿ ಲಿಸ್ಟ್ದಲ್ಲಿ ಮೊದಲ ಐವರ ಸಾಲಿನಲ್ಲಿರುವ ಡಾ. ಹೊಸಮನಿ ಅವರು 2026 ಮೇ 31ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದಾರೆ. ಪ್ರಾಚಾರ್ಯರಾಗಿ ಆಡಳಿತಾತ್ಮಕ ಅನುಭವ ಹೊಂದಿರುವ ಡಾ. ಹೊಸಮನಿ ಅವರು ಇತ್ತೀಚೆಗಷ್ಟೇ ಸರ್ಜರಿ ವಿಭಾಗದ ಮುಖ್ಯಸ್ಥರಾಗಿದ್ದರು. ಸರಕಾರದ ಆದೇಶ ಹೊರಬರುತ್ತಿದ್ದಂತೆ ಕೆಎಂಸಿ ವೈದ್ಯರ ದಂಡು ಹೊಸಮನಿಯವರಿಗೆ ಶುಭಾಶಯ ಕೋರಿದೆ.