Thursday, June 19, 2025

Latest Posts

ಕಾಂಗ್ರೆಸ್ ಸಂಸದ, ಶಾಸಕರಿಗೆ ಇ.ಡಿ. ಶಾಕ್ : ಬಿಜೆಪಿ ವಿರುದ್ಧ ಸಿಡಿದೆದ್ದ ಕೈ ನಾಯಕರು

- Advertisement -

Political News: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ, ಇಂದು ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದ ಇ ತುಕಾರಾಂ, ಮಾಜಿ ಸಚಿವ ಬಿ.ನಾಗೇಂದ್ರ ಶಾಸಕರಾದಂತಹ ನಾರಾ ಭರತ್ ರೆಡ್ಡಿ ಕಂಪ್ಲಿ ಶಾಸಕ ಗಣೇಶ್, ಡಾ. ಎನ್.ಟಿ. ಶ್ರೀನಿವಾಸ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಯಾವುದೇ ಕಾರಣಕ್ಕೂ ತಪ್ಪನ್ನ ಬೆಂಬಲಿಸಲ್ಲ..

ಕಾಂಗ್ರೆಸ್ ಸಂಸದ ಮತ್ತು ಶಾಸಕರ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ ವಿಚಾರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಕೈಗೊಳ್ಳಲಿ. ಯಾವುದೇ ಕಾರಣಕ್ಕೂ ತಪ್ಪನ್ನು ಬೆಂಬಲಿಸಲ್ಲ ಎಂದು ತಿಳಿಸಿದ್ದಾರೆ.

ನಾವು ಯಾವುದೇ ಕಾನೂನಿನ ಅನುಷ್ಠಾನಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ ದೇಶದಲ್ಲಿ ಬಿಜೆಪಿ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಇ.ಡಿ. ದಾಳಿಯ ಮೂಲಕ ಕಾಂಗ್ರೆಸ್ ಇಬ್ಬಾಗದ ಉದ್ದೇಶ..

ಇದೆ ವಿಚಾರವಾಗಿ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಶಾಸಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷದ ಮೇಲೆ ಮೊದಲಿನಿಂದಲೂ ಸಿಟ್ಟಿದೆ. ಇಡಿ ದಾಳಿಯ ಮೂಲಕ ಕಾಂಗ್ರೆಸ್ ಇಬ್ಬಾಗ ಮಾಡಬೇಕು ಎಂಬ ಉದ್ದೇಶವಿದೆ. ಟಾರ್ಚರ್ ಕೊಟ್ಟರೆ ಪಕ್ಷ ಇಬ್ಬಾಗ ಆಗುತ್ತೆ ಅನ್ನೋ ಉದ್ದೇಶ ಇರಬೇಕು. ಆದರೆ ಅದು ಸಾಧ್ಯವಿಲ್ಲದ ಮಾತು ಎಂದು ಕಿಡಿ ಕಾರಿದ್ದಾರೆ.

ಯಾವ ಕಾರಣಕ್ಕೆ ದಾಳಿಯಾಗಿದೆ ಅನ್ನೋದು ಇಡಿಯವರಿಗೆ ಗೊತ್ತಿದೆ. ಇಡಿ ಅಧಿಕಾರಿಗಳ ದಾಳಿ ಇದೇನು ಹೊಸದಲ್ಲ. ಚುನಾವಣೆ ಸಮಯದಲ್ಲಿ ಎಲ್ಲಾ ಪಕ್ಷಗಳ ಹಣ ಸೀಜ್ ಮಾಡಿದ್ದರು. ಇಡೀ ಜಪ್ತಿ ಮಾಡಿದ್ದ ಹಣ ಎಲ್ಲಿ ಹೋಯಿತು? ಯಾರಿಗೂ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ರೀತಿಯ ದಾಳಿಗಳು ಪ್ರಜಾಪ್ರಭುತ್ವದ ಮೇಲಿನ ಸವಾರಿ ಇದ್ದಂತೆ..

ಯಾವುದೇ ಒಂದು ತನಿಖೆ ರಾಜಕೀಯ ಪ್ರೇರಿತ, ರಾಜಕೀಯದ ಕಾರಣಕ್ಕಾಗಿ ತನಿಖೆಯಾದರೆ ಅದು ಪ್ರಜಾಪ್ರಭುತ್ವದ ಮೇಲಿನ ಸವಾರಿಯಾದಂತೆ ಆಗುತ್ತದೆ. ಸಂವಿಧಾನದ ಮೇಲಿನ ದಾಳಿಗೆ ಸಮಯವಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.

ಇದು ಪೂರ್ವ ನಿಯೋಜಿತ ದಾಳಿಯಾಗಿದೆ..

ಅಲ್ಲದೆ ಇದೇ ವಿಚಾರಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಐಟಿ, ಇಡಿ ಹಾಗೂ ಸಿಬಿಐ ಬಳಸಿಕೊಂಡು ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸೇಡಿನ ರಾಜಕರಣ ಮಾಡುತ್ತಿದೆ. ಬರೀ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡೋದು ಸರಿಯಲ್ಲ. ಇದು ಪೂರ್ವ ನಿಯೋಜಿತ ದಾಳಿಯಾಗಿದೆ. ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ದಾಳಿ ಮಾಡಲಾಗುತ್ತಿದೆ. ವಾಲ್ಮೀಕಿ ಹಗರಣ ಆಗಿಲ್ಲ ಎಂದು ಹೇಳುತ್ತಿಲ್ಲ, ಆದರೆ ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರ ಬರಲಿದೆ. ತನಿಖೆ ಆಗಲಿ ಎಂದು ಕಾಂಗ್ರೆಸ್ ನಾಯಕರ ಮೇಲಿನ ಇ.ಡಿ. ದಾಳಿಯನ್ನು ಖಂಡಿಸಿದ್ದಾರೆ.

- Advertisement -

Latest Posts

Don't Miss