www.karnatakatv.net :ರಾಯಚೂರು : ಗಣೇಶ ಚತುರ್ಥಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಸರಳವಾಗಿ ಕೆಲ ನಿರ್ಬಂಧಗಳೊಂದಿಗೆ ಆಚರಣೆ ಮಾಡಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯಲ್ಲೂ ಈ ಬಾರಿ ಗಣೇಶ ಚತುರ್ಥಿ ಹಬ್ಬ ಆಚರಣೆ ವೇಳೆ ಕಟ್ಟು ನಿಟ್ಟಿನ ನಿಯಮಗಳೊಂದಿಗೆ ಹಬ್ಬ ಆಚರಿಸಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಹಬ್ಬದ ಸಡಗರದಲ್ಲಿರುವ ಜನರು ಮೈಮರೆತು ಗುಂಪು ಗೂಡುವುದರಿಂದ ಕೊರೊನಾ ಸೋಂಕು ಮತ್ತೊಮ್ಮೆ ತೀವ್ರವಾಗಿ ಹರಡುವ ಸಾಧ್ಯತೆ ಇದೆ. ಈ ಸೋಂಕಿನ ಸರಪಳಿ ಮುರಿಯಲು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಹಾಗಾಗಿ ಈ ಬಾರಿಯ ಗಣೇಶ ಹಬ್ಬವನ್ನ ಸರಳವಾಗಿ ಆಚರಣೆ ಮಾಡಬೇಕು ಅಂತ ಎಸ್ಪಿ ಪ್ರಕಾಶ್ ನಿಕ್ಕಂ ಹೇಳಿದ್ದಾರೆ.
ಗಣೇಶ ಚತುರ್ಥಿ ಹಿನ್ನಲೆ ಪ್ರತಿ ಬಡಾವಣೆಗೆ ಒಂದೇ ಗಣೇಶ ಪ್ರತಿಷ್ಠಾಪಿಸಬೇಕು, ಮಾಸ್ಕ್ ಧರಿಸಬೇಕು, ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನ ಪಾಲಿಸಬೇಕು, ಗಣೇಶ ಮೂರ್ತಿಗಳನ್ನು ತರುವಾಗ, ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ.
ಪಾರಂಪರಿಕ ಗೌರಿ–ಗಣೇಶ ಮೂರ್ತಿ ಪೂಜಿಸುವವರು ಅವುಗಳನ್ನು ಮನೆಯಲ್ಲೇ ವಿಸರ್ಜಿಸಬೇಕು. ಅಥವಾ ಅತಿ ಸಮೀಪ ಮಾರ್ಗಗಳನ್ನು ಬಳಸಿಕೊಂಡು ಬಿಬಿಎಂಪಿ, ಪಾಲಿಕೆ, ಜಿಲ್ಲಾಡಳಿತ ಸ್ಥಳೀಯ ಆಡಳಿತಗಳು ವ್ಯವಸ್ಥೆ ಮಾಡಿದ ಹೊಂಡ, ಕಲ್ಯಾಣಿ, ಮೊಬೈಲ್ ಟ್ಯಾಂಕರ್ಗಳಲ್ಲಿ ವಿಸರ್ಜಿಸಬಹುದು.
ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನ ನಿತ್ಯ, ಸ್ಯಾನಿಟೈಸೇಷನ್ ಮಾಡಬೇಕು. ಸಾರ್ವಜನಿಕ ದರ್ಶನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ.
ಈ ಎಲ್ಲ ನಿಯಮಗಳನ್ನ ಪಾಲಿಸಿ ಗಣೇಶನನ್ನ ಪ್ರತಿಷ್ಠಾಪಿಸ ಬಯಸುವವರು ಕಡ್ಡಾಯವಾಗಿ ಹಲವು ಇಲಾಖೆಗಳಿಂದ ಪರವಾನಿಗೆ ಪಡೆಯಬೇಕು. ಹಾಗಾಗಿ ಒಂದೇ ಸ್ಥಳದಲ್ಲಿ ಎಲ್ಲಾ ಇಲಾಖೆಗಳ ಸಿಬ್ಬಂದಿಗಳನ್ನ ಕೂರಿಸಿ ಪರವಾನಿಗೆ ನೀಡುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ನಗರದ ಸದರ್ ಬಜಾರ್ ಠಾಣೆಯಲ್ಲಿ ಗಣೇಶನ ಪರವಾನಿಗೆ ಕೊಡುವ ಕಾರ್ಯ ಭರದಿಂದ ಸಾಗಿದೆ.
ಅನಿಲ್ಕುಮಾರ್, ಕರ್ನಾಟಕ ಟಿವಿ -ರಾಯಚೂರು