Hubli News: ಹುಬ್ಬಳಿ: ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳ ವಿಚಾರ ಸದ್ಯ ಜಟಾಪಟಿಗೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೀಸಲಾತಿ ಮಾಡುತ್ತಿದ್ದೇವೆ ಅಂತಾರೆ. ಆದರೆ 2019ರಲ್ಲಿ ಕೇಂದ್ರ ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಸುತ್ತೋಲೆ ಇದ್ದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಜಮೀರ್ ಹೇಳಿಕೆಗೆ ಜೋಶಿ ತಿರುಗೇಟು
ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಈ ಬಗ್ಗೆ ಮಾತನಾಡಿ, ಈ ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಮೈತ್ರಿ ಸರ್ಕಾರದಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ 15ರಷ್ಟು ಮೀಸಲಾತಿ ಬಗ್ಗೆ ಸಂಪುಟ ಉಪಸಮಿತಿ ಶಿಫಾರಸು ಮಾಡಲಾಗಿತ್ತು ಎಂದಿದ್ದರು. ಸದ್ಯ ಇದೇ ವಿಚಾರಕ್ಕೆ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಈ ಬಗ್ಗೆ ನಾನು ಟ್ವೀಟ್ ಮಾಡಿದ್ದೆ, ಅದಕ್ಕೆ ಸಿಎಂ ಉತ್ತರ ಕೊಟ್ಟಿಲ್ಲ. ಕಾಂಗ್ರೆಸ್ನವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಕಾನೂನಿನ ಮೇಲೆ ಕಾಂಗ್ರೆಸ್ನವರಿಗೆ ಗೌರವವೇ ಇಲ್ಲ. ಅಧಿಕಾರಿಗಳನ್ನು ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಪರವಾಗಿದೆ
ಚಕ್ರವರ್ತಿ ಸೂಲಿಬೆಲೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದ ಪೊಲೀಸ್ ಅಧಿಕಾರಿ ತಲೆಯಲ್ಲಿ ಬುದ್ಧಿ ಇಲ್ಲ. ರಾಜಕೀಯ ಮಾತಾಡಬಾರದು ಅಂತ ಹೇಳಿದ್ದಾರೆ. ನಾವು ಮಾತಾಡದೇ ಪೊಲೀಸರು ರಾಜಕೀಯ ಮಾತಾಡುತ್ತಾರಾ? ಔರಂಗಜೇಬನ ಬಗ್ಗೆ ಮಾತನಾಡಿದರೆ ರಾಜಕರಣವಾಗುತ್ತಾ? ಸಿದ್ದರಾಮಯ್ಯರ ತುಷ್ಟೀಕರಣ ಬಗ್ಗೆ ಮಾತಾನಾಡಿದರೆ ರಾಜಕಾರಣವಾಗುತ್ತಾ? ರಾಜ್ಯವನ್ನು ಮತಾಂಧ ಕೇಂದ್ರವಾಗಿ ಬದಲಾಯಿಸುತ್ತಿದ್ದಾರೆ. ಬಿಜೆಪಿ ದೊಡ್ಡ ಪಾರ್ಟಿ, ನೀವು ಹಿಂಗೆ ಮಾಡಿದರೆ ನಾವು ಸುಮ್ಮನಿರಲ್ಲ. ಅವರು ಕೊಲೆ ಮಾಡಿದರೂ ನಡೆಯುತ್ತದೆ. ಮತಾಂಧ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಪರವಾಗಿದೆ ಎಂದು ಕಿಡಿಕಾರಿದ್ದಾರೆ.
ದುಡ್ಡು ಕೊಡಿ ಮನೆ ಪಡಿ, ಇದು ಕಾಂಗ್ರೆಸ್ ಹೊಸ ಘೋಷವಾಕ್ಯ
ಇನ್ನು ಬಿಆರ್ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದುಡ್ಡು ಕೊಡಿ ಮನೆ ಪಡಿ, ಇದು ಕಾಂಗ್ರೆಸ್ ಹೊಸ ಘೋಷವಾಕ್ಯ. ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಗುತ್ತಿಗೆದಾರರು ಮಾಡಿರುವ 60% ಕಮಿಷನ್ ಆರೋಪ ಸರಿಯಿದೆ ಎಂದಿದ್ದಾರೆ.
6 ತಿಂಗಳಲ್ಲಿ ಅಧಿಕಾರದಿಂದ ಇಳಿಯುತ್ತೇನೆಂದು ಸಿಎಂಗೆ ಅನ್ನಿಸಿದೆ, ಹಾಳಾಗಿ ಹೋಗಲಿ ಅಂತಾ ಸಿದ್ದರಾಮಯ್ಯ ಸುಮ್ಮನಾಗಿದ್ದಾರೆ. ಸಂತೋಷ್ ಲಾಡ್ ಕೇವಲ ಒಬಾಮಾ, ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಸಚಿವಸ್ಥಾನ ಉಳಿಸಿಕೊಳ್ಳಲು ಮೋದಿಗೆ ಸಂತೋಷ್ ಲಾಡ್ ಬೈಯುತ್ತಾರೆ ಎಂದು ಹರಿಹಾಯ್ದಿದ್ದಾರೆ.