ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆಗೆ ಸಂಬಂಧಿಸಿ ವಕೀಲ ರಾಕೇಶ್ ಕಿಶೋರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಯಾವುದೇ ಪಶ್ಚಾತಾಪವಿಲ್ಲ, ನಾನು ಮಾಡಿದದ್ದು ಸರಿಯೇ. ದೇವರೇ ನನ್ನನ್ನು ಅದಕ್ಕೆ ಪ್ರಚೋದಿಸಿದರು ಎಂದು ಅವರು ಹೇಳಿದರು.
ಸೋಮವಾರ ನಡೆದ ಘಟನೆ ವೇಳೆ ರಾಕೇಶ್ ಕಿಶೋರ್ ಅವರು ಸನಾತನ ಧರ್ಮಕ್ಕೆ ಅವಮಾನವಾದರೆ ಹಿಂದೂಸ್ಥಾನ ಕ್ಷಮಿಸುವುದಿಲ್ಲ ಎಂದು ಕೂಗಿದ್ದರೆಂದು ಸಾಕ್ಷಿಗಳು ತಿಳಿಸಿದ್ದಾರೆ. ಆದರೆ ಸಿಜೆಐ ಗವಾಯಿ ಅವರು ಶಾಂತವಾಗಿ ಪ್ರತಿಕ್ರಿಯಿಸಿ, ಭದ್ರತಾ ಸಿಬ್ಬಂದಿಗೆ ಅವರಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿ ಎಂದು ಸೂಚಿಸಿದ್ದರು. ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು ಖಂಡಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ರಾಕೇಶ್ ಕಿಶೋರ್, ನಾನು ಕುಡಿದಿರಲಿಲ್ಲ. ಸಿಜೆಐ ಅವರ ತೀರ್ಪಿನಿಂದ ನೋವಿನಲ್ಲಿದ್ದೆ. ಇದು ನನ್ನ ಪ್ರತಿಕ್ರಿಯೆ. ನನಗೆ ಭಯವಿಲ್ಲ, ಪಶ್ಚಾತಾಪವಿಲ್ಲ. ನ್ಯಾಧೀಶರು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಲಕ್ಷಾಂತರ ಪ್ರಕರಣಗಳು ಬಾಕಿ ಇವೆ, ನಾನು ಯಾವುದೇ ತಪ್ಪು ಮಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ಜೈಲಿಗೆ ಹೋಗಲು ಸಿದ್ದನಾಗಿದ್ದೇನೆ ಎಂದಿದ್ದಾರೆ.
ಖಜುರಾಹೋ ಅರ್ಜಿ ವಿಚಾರಣೆ ವೇಳೆ ಸಿಜೆಐ ಗವಾಯಿ ಅವರು ಭಾರತೀಯ ಕಾನೂನು ವ್ಯವಸ್ಥೆ ಕಾನೂನಿನ ಆಳ್ವಿಕೆಯಿಂದ ನಿಯಂತ್ರಿತ, ಬುಲ್ಡೋಜರ್ ನಿಯಮದಿಂದ ಅಲ್ಲ ಎಂದಿದ್ದರು. ಆ ಮಾತು ನನಗೆ ಬೇಸರವಾಯಿತು. ಆ ರಾತ್ರಿ ನಿದ್ರೆಯೇ ಬರಲಿಲ್ಲ. ದೇವರೇ ನನಗೆ ಈ ಕ್ರಮ ಕೈಗೊಳ್ಳಲು ಪ್ರೇರಣೆ ನೀಡಿದರು ಎಂದು ಕಿಶೋರ್ ಹೇಳಿದರು. ಕಿಶೋರ್ ಅವರು ಸೆಪ್ಟೆಂಬರ್ 16ರಂದು ಖಜುರಾಹೋದಲ್ಲಿನ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಮರುಸ್ಥಾಪಿಸಲು ಪಿಐಎಲ್ ಸಲ್ಲಿಸಿದ್ದರು. ಸಿಜೆಐ ಗವಾಯಿ ನೇತೃತ್ವದ ಪೀಠ ಆ ಅರ್ಜಿಯನ್ನು ವಜಾಗೊಳಿಸಿತ್ತು. ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯ ಬಂದಾಗ ಸುಪ್ರೀಂ ಕೋರ್ಟ್ ಹಾಸ್ಯ ಮಾಡುವಂತಿಲ್ಲ. ಅರ್ಜಿದಾರರನ್ನು ಕೀಳಾಗಿ ನೋಡಬಾರದು ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ