Bengaluru: ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಕುರಿತು ಜೊತೆಯಲ್ಲಿದ್ದವರೇ ಕೂಡಲೇ ಮಾಹಿತಿ ನೀಡಲಿಲ್ಲ. ಜನಸಾಗರದಿಂದ ಇಂಥದ್ದೊಂದು ಅನಾಹುತ ಸಂಭವಿಸಬಹುದು ಎಂಬ ಸುಳಿವನ್ನು ಯಾರಾದರೂ ನೀಡಿದ್ದಿದ್ದರೆ ಖಂಡಿತ ನಾನು ಕಾರ್ಯಕ್ರಮಕ್ಕೆ ಅನುಮತಿಯೇ ನೀಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಎದುರು ಅಳಲು ತೋಡಿಕೊಂಡಿದ್ದಾರೆ.
ಕಮಿಷನರ್ ಕೂಡಲೇ ನನಗೆ ಮಾಹಿತಿ ನೀಡಲಿಲ್ಲ..
ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ತನ್ನ ಜೊತೆಗೆ ಇಡೀ ದಿನವಿದ್ದರೂ ತನಗೆ ದುರ್ಘಟನೆ ಬಗ್ಗೆ ಮಾಹಿತಿ ನೀಡಲಿಲ್ಲ. ಕಮಿಷನರ್ ದಯಾನಂದ್ ಕೂಡಾ ನನಗೆ ಕೂಡಲೇ ಮಾಹಿತಿ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಪ್ರಮುಖವಾಗಿ ಆರ್ ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸಂಭವಿಸಿದ ನೂಕುನುಗ್ಗಲಿನಿಂದ 11 ಜನ ಅಭಿಮಾನಿಗಳು ಜೀವ ಕಳೆದುಕೊಂಡಿರುವ ಘಟನೆಗೆ ತೀವ್ರ ನೊಂದಿರುವ ಸಿದ್ದರಾಮಯ್ಯ ಅವರು ದುರ್ಘಟನೆಯ ಬಗ್ಗೆ ಮುಂಚಿತವಾಗಿಯೇ ಪೊಲೀಸರು ಸೂಚನೆ ನೀಡಿದ್ದರೆ ಖಂಡಿತವಾಗಿಯೂ ಈ ದುರಂತವನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು ಎಂದು ನೋವು ತೋಡಿಕೊಂಡಿದ್ದಾರೆ.
ನನಗೆ ತಡವಾಗಿ ಸಾವು ನೋವಿನ ವರದಿ ನೀಡಲಾಗಿದೆ..
ಇನ್ನೂ ಪ್ರಮುಖವಾಗಿ ಅಂದು ಬುಧವಾರ ವಿಜಯೋತ್ಸವದ ವೇಳೆ ನೂಕುನುಗ್ಗಲಿನಲ್ಲಿ 3 ಗಂಟೆ 50 ನಿಮಿಷಕ್ಕೆ ಸಾವಿನ ವರದಿಯಾಗಿತ್ತು. ಸಂಜೆ 4 ಗಂಟೆ 45 ನಿಮಿಷಕ್ಕೆ ವಿಧಾನಸೌಧದ ಮೆಟ್ಟಿಲಿನಲ್ಲಿ ಆರ್ ಸಿಬಿ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಆರಂಭವಾಯಿತು. ಆ ಕಾರ್ಯಕ್ರಮ ಮುಗಿದ ಮೇಲೆ ಸಂಜೆ 5 ಗಂಟೆ 45 ನಿಮಿಷಕ್ಕೆ ನನಗೆ ಘಟನೆಯ ಕುರಿತು ಸಾವು ನೋವಿನ ವರದಿ ನೀಡಿದರು. ಸ್ಟೇಡಿಯಂ ಬಳಿ ನೂಕಾಟ ತಳ್ಳಾಟ ಉಂಟಾದರೂ ಕಮಿಷನರ್ ದಯಾನಂದ್ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸಿದ್ದರಾಮಯ್ಯ ತಮ್ಮ ಗೋಳು ಹೇಳಿಕೊಂಡಿದ್ದಾರೆ.
ಇದೆಲ್ಲ ಗೊತ್ತಿದ್ದರೆ ವಿಜಯೋತ್ಸವಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕಮಿಷನರ್ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಬಹುದಿತ್ತು. ಆದರೆ ಅದನ್ನು ಮಾಡದ್ದಕ್ಕೆ ಇದು ಆಯುಕ್ತರ ವೈಫಲ್ಯದ ಎಂಬ ತೀರ್ಮಾನಕ್ಕೆ ಬಂದ ಬಳಿಕ ಸರ್ಕಾರದಿಂದ ದಯಾನಂದ್ ಸೇರಿದಂತೆ ಐವರ ಅಮಾನತು ಮಾಡಲಾಗಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.
ದಿನವಿಡೀ ಜೊತೆಗೆಯೇ ಇದ್ದು ಯಾವುದೇ ಮಾಹಿತಿ ನೀಡದ ಗೋವಿಂದರಾಜು..
ಅಲ್ಲದೆ ತಮ್ಮ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ. ಗೋವಿಂದರಾಜು ಅವರ ತಲೆದಂಡದ ಬಗ್ಗೆಯೂ ಸಿದ್ದರಾಮಯ್ಯ ಹೇಳಿಕೊಂಡಿದ್ದು, ಗೋವಿಂದರಾಜು ದಿನವಿಡೀ ತಮ್ಮ ಜೊತೆಗೆ ಇದ್ದರೂ ಕೂಡ ದುರ್ಘಟನೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗೋವಿಂದರಾಜು ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಬೇಕಾಯಿತು ಎಂದು ಸಮರ್ಥನೆ ನೀಡಿದ್ದಾರೆ.
ಮುಖ್ಯವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸಿದ ಇಡೀ ಕಾರ್ಯಕ್ರಮ ಕೆಎಸ್ ಸಿಎ ಕಾರ್ಯಕ್ರಮವಾಗಿತ್ತು. ಅದು ಸರ್ಕಾರದ ಕಾರ್ಯಕ್ರಮವಾಗಿರಲಿಲ್ಲ. ಈ ಸನ್ಮಾನದ ಅನುಮತಿಗಾಗಿ ಕೋರಿ ಕೆಎಸ್ ಸಿಎ ಸರ್ಕಾರಕ್ಕೆ ಪತ್ರ ಬರೆದಿತ್ತು ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹಂಚಿಕೊಂಡಿದ್ದಾರೆ.
ಇನ್ನೂ ಈ ಘಟನೆಗೆ ಹೈಕಮಾಂಡ್ ಕೂಡಾ ಸಿಟ್ಟಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತಕ್ಷಣವೇ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು . ಅದರಂತೆ ಇಂದು ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ದುರಂತದ ವಿವರ ನೀಡಿದ್ದಾರೆ