Monday, May 12, 2025

Latest Posts

ನಾನು ಸೋತಿದ್ದೇನೆ, ರಾಜ್ಯದ ಸ್ಥಾನಮಾನ ಕೇಳಲ್ಲ : ವಿಧಾನಸಭೆಯಲ್ಲಿ ಸಿಎಂ ಒಮರ್‌ ಭಾವುಕರಾಗಿದ್ದೇಕೆ..?

- Advertisement -

ನವದೆಹಲಿ : ಪಹಲ್ಗಾಮ್‌ ದಾಳಿಯ ವಿಚಾರವನ್ನು ಮುಂದಿಟ್ಟುಕೊಂಡು ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಹೇಗೆ ಕೇಳಲಿ..? ಈಗ ಆ ವಿಚಾರ ಎತ್ತಿ ಅಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಲು ನಾನು ಬಯಸುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವ ಅವರು, ಯಾವುದೇ ಕಾರಣಕ್ಕೂ ನಾನು ರಾಜ್ಯ ಸ್ಥಾನಮಾನದ ಬೇಡಿಕೆ ಇಡಲು ಈ ಸಮಯವನ್ನು ಬಳಸುವುದಿಲ್ಲ. ಪಹಲ್ಗಾಮ್ ದಾಳಿಯ ನೆಪವಾಗಿ ನಾನು ಯಾವ ಮುಖದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೇಳಲಿ? ಮೇರಿ ಕ್ಯಾ ಇತ್ನಿಸಸ್ತಿ ಸಿಯಾಸತ್ ಎಂದು ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನಕ್ಕಾಗಿ ಕೆಲ ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯಿದ ಅವರು, ನಾವು ಹಿಂದೆಯೂ ರಾಜ್ಯದ ಬಗ್ಗೆ ಮಾತನಾಡಿದ್ದೇವೆ ಮತ್ತು ಮುಂದೆಯೂ ನಮ್ಮ ಬೇಡಿಕೆ ಇಡುತ್ತೇವೆ. ಆದರೆ ನಾನು ಹೋಗಿ ಕೇಂದ್ರ ಸರ್ಕಾರಕ್ಕೆ ನಮ್ಮಲ್ಲಿ 26 ಜನರು ಬಲಿಯಾಗಿದ್ದಾರೆ ಎಂದು ಹೇಳಿದರೆ ಅದು ನನಗೆ ನಾಚಿಕೆಗೇಡಿನ ಸಂಗತಿಯಾಗುತ್ತದೆ. ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡು ಸಂತ್ರಸ್ತವಾಗಿರುವ ಕುಟುಂಬಗಳಿಗೆ ಯಾವ ರೀತಿ ಕ್ಷಮೆ ಕೇಳುವುದು ಎಂದು ಗೊತ್ತಾಗುತ್ತಿಲ್ಲ ಎಂದು ಒಮರ್‌ ಭಾವುಕರಾಗಿದ್ದಾರೆ.

ನಾನು ವಿಫಲನಾಗಿದ್ದೇನೆ..

ನಮ್ಮಲ್ಲಿ ಅತಿಥಿಗಳಾಗಿ ಬಂದಿದ್ದ ಪ್ರವಾಸಿಗರಿಗೆ ರಕ್ಷಣೆ ನೀಡಿ, ಅವರನ್ನು ಸುರಕ್ಷಿತವಾಗಿ ವಾಪಸ್‌ ತಲುಪುವಂತೆ ನೋಡಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯವಾಗಿತ್ತು. ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ, ವಿಫಲವಾಗಿದ್ದೇನೆ. ಈಗ ಅವರಿಗೆ ಕ್ಷಮೆಯಾಚಿಸಲು ನನ್ನಲ್ಲಿ ಪದಗಳಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ, ನೂತನವಾಗಿ ಮದುವೆಯಾದ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ನಾನು ಏನು ಹೇಳಬೇಕು..? ಅವರು ನಮ್ಮ ತಪ್ಪೇನು ಎಂದು ಕೇಳುತ್ತಿದ್ದಾರೆ..? ನಾವು ರಜಾದಿನಗಳಿಗೆ ಬಂದಿದ್ದೇವು, ದಾಳಿ ಮಾಡಿದವರು ನಿಮಗಾಗಿ ಅಂದರೆ, ಕಾಶ್ಮೀರಿಗರಿಗಾಗಿ ಮಾಡಿದ್ದಾರೆಂದು ಅವರು ಹೇಳುತ್ತಾರೆ, ಆದರೆ ನಾನು ಕೇಳಲು ಬಯಸುತ್ತೇನೆ, ನಾವು ಅದಕ್ಕೆ ಬೆಂಬಲವಾಗಿದ್ದೇವೆಯೇ..? ಅಥವಾ ಭಯೋತ್ಪಾದಕರಿಗೆ ಹೀಗೆ ಮಾಡಲು ಹೇಳಿದ್ದೇವೆಯೇ..? ನಾವು ಈ ದಾಳಿಗಳನ್ನು ಬೆಂಬಲಿಸುವುದಿಲ್ಲ ಎಂದು ಕಾಶ್ಮೀರದ ಜನರು ಬೀದಿಗೀಳಿದು ನಡೆಸಿದ ಪ್ರತಿಭಟನೆಗಳಿಂದ ನಮಗ ಭರವಸೆ ಬಂದಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಭರವಸೆಯ ಆಶಾಕಿರಣ ಹುಡುಕಬೇಕು..

ಪ್ರತಿಯೊಂದು ಕೆಟ್ಟ ಪರಿಸ್ಥಿತಿಯಲ್ಲೂ, ನಾವು ಭರವಸೆಯ ಆಶಾ ಕಿರಣವನ್ನು ಹುಡುಕಬೇಕು. ಆದರೆ ಈ ಕಾಲದಲ್ಲಿ ಅದರ ಹುಡುಕಾಟ ತುಂಬಾ ಕಷ್ಟವಾಗಿದೆ. ಈ 26 ವರ್ಷಗಳಲ್ಲಿ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಜನರು ದಾಳಿಯನ್ನು ಖಂಡಿಸಿ, ಅದಕ್ಕೆ ನಾವು ಕಾರಣರಲ್ಲ ಎಂದು ಹೇಳುವುದನ್ನು ನಾನು ನೋಡಿದ್ದೇನೆ. ನಾವೆಲ್ಲರೂ ಒಗ್ಗಟ್ಟಾದಾಗ ಮಾತ್ರ ಹಿಂಸೆ ಮತ್ತು ಭಯೋತ್ಪಾದನೆಯ ವಿರುದ್ಧ ಗಟ್ಟಿಯಾದ ಹೋರಾಟ ಸಾಧ್ಯವಾಗುತ್ತದೆ. ಯಾವತ್ತೂ ಜನರಿಗೆ ತೊಂದರೆ ನೀಡುವ ಕೆಲಸವನ್ನು ನಾವು ಮಾಡಬಾರದು. ಯಾವುದೇ ಜನವಿರೋಧಿ ಮಾತು, ವಿಚಾರಗಳತ್ತ ನಾವು ದೃಷ್ಟಿ ಹಾಯಿಸಬಾರದು ಎಂದು ಅವರು ತಿಳಿಸಿದ್ದಾರೆ.

ಖಂಡನಾ ನಿರ್ಣಯ ಅಂಗೀಕಾರ..!

ಇನ್ನೂ ಇದರ ನಡುವೆಯೇ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ನಿರ್ಣಯವನ್ನು ಅಂಗೀಕರಿಸಿದೆ, ನಂತರ ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದಕ್ಕೂ ಮೊದಲು, ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಖಂಡನಾ ನಿರ್ಣಯವನ್ನು ಮಂಡಿಸಿ, ಭದ್ರತಾ ಸಂಪುಟ ಸಮಿತಿ ಸಭೆಯ ನಂತರ ಕೇಂದ್ರ ಸರ್ಕಾರ ಘೋಷಿಸಿದ ರಾಜತಾಂತ್ರಿಕ ಕ್ರಮಗಳನ್ನು ಅನುಮೋದಿಸಿದ್ದರು. ಈ ಮೂಲಕ ಭಯೋತ್ಪಾದಕತೆಯ ವಿರುದ್ಧ ಕಣಿವೆ ರಾಜ್ಯ ಖಂಡನಾ ನಿರ್ಣಯವನ್ನು ಅಂಗೀಕರಿಸಿದೆ.

ಈ ದಾಳಿಯು ಕಾಶ್ಮೀರದ ಮೌಲ್ಯಗಳು, ಸಂವಿಧಾನ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ಏಕತೆ, ಶಾಂತಿ ಮತ್ತು ಸಾಮರಸ್ಯದ ಮೇಲಿನ ದಾಳಿ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಮೃತರ ಮತ್ತು ಅವರ ಕುಟುಂಬಗಳೊಂದಿಗೆ ಗಟ್ಟಿಯಾಗಿ ನಿಲ್ಲುವ ಸಂಕಲ್ಪವನ್ನು ವಿಧಾನಸಭೆಯು ಮಾಡಿದೆ. 2019ರ ಪುಲ್ವಾಮಾ ದಾಳಿಯ ನಂತರ ಪಹಲ್ಗಾಮ್‌ನಲ್ಲಿ ನಡೆದ ದಾಳಿಯು ಜಮ್ಮು ಮತ್ತು ಕಾಶ್ಮೀರದ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಬಲವಾದ ಕ್ರಮಗಳನ್ನು ತೆಗೆದುಕೊಂಡಿದೆ.

- Advertisement -

Latest Posts

Don't Miss