ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಖಾಸಗಿ ಫೈನಾನ್ಸ್ ಗ್ರೂಪ್ವೊಂದರ ಜಾಹೀ ರಾತು ನೋಡಿ ಅಧಿಕ ಲಾಭದ ಆಸೆಯಿಂದ 71.41 ಲಕ್ಷ ರು. ಹೂಡಿಕೆ ಮಾಡಿ ಬಳಿಕ ವಂಚನೆಗೆ ಒಳಗಾಗಿರುವ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಪಿ.ನಗರ 1ನೇ ಹಂತದ ಶಾಕಾಂಬರಿ ನಗರದ ನಿವಾಸಿ ಬಿ.ಹರ್ಷ ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ, ಬಿಎನ್ಎಸ್ ಕಲಂ 318 (4) ಮತ್ತು ಕಲಂ 319(2)ರ ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಹರ್ಷ ಅವರು ನ.12ರಂದು ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆ ನೋಡುವಾಗ, ‘ಆರ್ಯ ಫೈನಾನ್ಸ್ ಗ್ರೂಪ್’ ಎಂಬ ಜಾಹೀರಾತು ಗಮನಿಸಿದ್ದಾರೆ. ಆ ಜಾಹೀರಾತಿನಲ್ಲಿ ನೀಡಿದ್ದ ಲಿಂಕ್ ಕ್ಲಿಕ್ ಮಾಡಿದಾಗ, ಅಪರಿಚಿತರು ಹರ್ಷ ಅವರನ್ನು ‘ಆರ್ಯ ಪ್ರಾಫಿಟ್ ಪ್ಲಸ್ ಎಕ್ಸ್-ಎ’ ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದಾರೆ. ಬಳಿಕ ನೀವು ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಅಪರಿಚಿತರ ಈ ಮಾತು ನಂಬಿದ ಹರ್ಷ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.
ಹರ್ಷ ಅವರು ಅಧಿಕ ಲಾಭದ ಆಸೆಯಿಂದ ಅಪರಿಚಿತರು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ 71.41 ಲಕ್ಷ ರು. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಅಪರಿಚಿತರು ಯಾವುದೇ ಲಾಭ ಅಥವಾ ಹಣ ವಾಪಾಸ್ ನೀಡದೆ ಸಂಪರ್ಕ ಕಡಿದುಕೊಂಡಿದ್ದಾರೆ.
ಈ ವೇಳೆ ಹರ್ಷಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಬಳಿಕ ಹರ್ಷ ತನಗಾದ ಸೈಬರ್ ವಂಚನೆ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಹ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.