ಕೆಎಂಎಫ್ ಚುನಾವಣೆ, ವಿಧಾನಸಭಾ, ಲೋಕಸಭಾ ಚುನಾವಣೆಗಳಿಗೂ ಕಮ್ಮಿ ಇಲ್ಲ. ಘಟಾನುಘಟಿ ನಾಯಕರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಅಧ್ಯಕ್ಷ ಹುದ್ದೆಗೆ ನಾಲ್ವರು ಕಾಂಗ್ರೆಸ್ ನಾಯಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಈ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ.
23 ಲಕ್ಷ ಸದಸ್ಯತ್ವವನ್ನು ಹೊಂದಿರುವ ಕೆಎಂಎಫ್, 4 ಒಕ್ಕೂಟದಿಂದ ಆರಂಭವಾಗಿ 16 ಒಕ್ಕೂಟಗಳವರೆಗೆ ಬೆಳೆದು ನಿಂತಿದೆ. ಗುಜರಾತ್ ಮೂಲದ ಅಮುಲ್ ನಂತರ, ದೇಶದ 2ನೇ ಅತಿದೊಡ್ಡ ಹಾಲು ಒಕ್ಕೂಟ ಸಂಸ್ಥೆ ಇದಾಗಿದೆ. ಕೆಎಂಎಫ್ ಮೇಲೆ ಹಿಡಿತ ಸಾಧಿಸುವುದು ರಾಜಕೀಯ ನಾಯಕರಿಗೆ, ಪ್ರತಿಷ್ಠೆಯ ವಿಚಾರವಾಗಿದೆ.
ಮೇ 25ರಂದು ನಡೆದ ಬಮೂಲ್ ಚುನಾವಣೆಯಲ್ಲಿ, ಮಾಜಿ ಸಂಸದ ಡಿ.ಕೆ. ಸುರೇಶ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು, ಸುರೇಶ್ ಅವರ ಮೊದಲ ಹೆಜ್ಜೆಯೆಂದೇ ವ್ಯಾಖ್ಯಾನಿಸಲಾಗ್ತಿದೆ. ರಾಮನಗರ ಜಿಲ್ಲೆಯ ವ್ಯಾಪ್ತಿಯ 5 ತಾಲೂಕು ಸೇರಿದಂತೆ, 6 ನಿರ್ದೇಶಕರು ಆಯ್ಕೆಯಾಗಿದ್ದರು. ಅಲ್ಲಿ ಎಲ್ಲವೂ ಡಿಕೆ ಶಿವಕುಮಾರ್ ಅಣತಿಯಂತೆ ನಡೆದಿತ್ತು. ಲೋಕಸಭಾ ಚುನಾವಣೆ ಸೋಲಿನ ನಂತರ, ಸಹೋದರನಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಡಿಸಿಎಂ ಶತ ಪ್ರಯತ್ನ ಮಾಡಿದ್ರು.
ಕೆಎಂಎಫ್ ಅಧ್ಯಕ್ಷರಾಗಿರುವ ಭೀಮಾ ನಾಯಕ್, ತಮ್ಮನ್ನು ಇನ್ನೊಂದು ಅವಧಿಗೆ ಮುಂದುವರೆಸುವಂತೆ ಪಟ್ಟು ಹಿಡಿದಿದ್ದಾರೆ. ಸಿಎಂ ಬಳಿಯೂ ಡಿಮ್ಯಾಂಡ್ ಮಾಡಿದ್ದಾರಂತೆ. ಮತ್ತೊಂದೆಡೆ ಕೋಲಾರ ಜಿಲ್ಲೆಯ ಮಾಲೂರು ಶಾಸಕ, ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಕೂಡ, ಸಿದ್ದು ಮೇಲೆ ಒತ್ತಡ ಹಾಕುತ್ತಿದ್ದಾರೆ. ಇನ್ನು, ಸಿದ್ದು ಪರಮಾಪ್ತರಲ್ಲಿ ಒಬ್ಬರಾದ ರಾಘವೇಂದ್ರ ಹಿಟ್ನಾಳ್ ಕೂಡ ಪೈಪೋಟಿ ಕೊಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗಾಗಿ, ಕ್ಷೇತ್ರ ತ್ಯಾಗಕ್ಕೂ ಮುಂದಾಗಿದ್ರು. ತಮ್ಮ ಪರಮಾಪ್ತರಲ್ಲಿ ಯಾರನ್ನೂ ಬಿಟ್ಟು ಕೊಡೋಕೆ, ಸಿದ್ದರಾಮಯ್ಯ ಇಷ್ಟಪಡ್ತಿಲ್ಲ. ಹೀಗಾಗಿ ರಾಜ್ಯಕ್ಕೆ, ಬೆಂಗಳೂರಿಗಷ್ಟೇ ಸೀಮಿತವಾಗಿರದೆ, ದಿಲ್ಲಿ ಮುಟ್ಟಿದೆ. ಸೌಹಾರ್ದಯುತವಾಗಿ ಬಗೆಹರಿಸಲು ಹೈಕಮಾಂಡ್ ಮುಂದಾಗಿದೆ.