ಕೆಪಿಸಿಸಿ ರಾಜ್ಯ ಸದಸ್ಯ ಸಂಜಯ್ರೆಡ್ಡಿ ಈ ಹಿಂದೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದೀಗ ನಾನು ಮಾತನಾಡಿರುವುದನ್ನು ಹಿಂಪಡೆಯುತ್ತಿದ್ದೇನೆ. ಅವರು ಕ್ಷೇತ್ರದ ಶಾಸಕರು, ಹಿರಿಯರು. ನಾನು ಆ ರೀತಿಯಾಗಿ ಮಾತನಾಡಬಾರದಾಗಿತ್ತು. ಆವೇಶದಲ್ಲಿ ಮಾತನಾಡಿದ್ದು, ಅವರಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಸಂಜಯ್ರೆಡ್ಡಿ ಹೇಳಿದ್ದಾರೆ.
ಶ್ರೀನಿವಾಸಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ವೆಂಕಟಶಿವಾರೆಡ್ಡಿ ಇತ್ತೀಚೆಗೆ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ನಮ್ಮ ನಾಯಕ ರಮೇಶ್ ಕುಮಾರ್ ಬಗ್ಗೆ ಆವೇಶದೊಂದಿಗೆ ಆರೋಪ ಮಾಡಿದ್ದರು. ನಾನು ಸಹ ಆವೇಶದೊಂದಿಗೆ ಶಾಸಕರ ವಿರುದ್ಧ ಮಾತನಾಡಿದ್ದು ನಿಜ. ಜೆಡಿಎಸ್ ಪಕ್ಷದವರೂ ಪತ್ರಿಕಾಗೋಷ್ಠಿ ನಡೆಸಿ ಒಬ್ಬರಿಗೊಬ್ಬರು ಅವಹೇಳನ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಎಲ್ಲರೂ ಸೇರಿ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೈಜೋಡಿಸಬೇಕಿದೆ ಎಂದಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಸಹಮತವಿರುತ್ತದೆ, ನಮ್ಮ ನಾಯಕ ರಮೇಶ್ ಕುಮಾರ್ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಪಡಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಕೆ.ಸಿ ವ್ಯಾಲಿ ನೀರು ನಿಂತು ಹೋಗಿತ್ತು. ಇದರ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮತ್ತೆ ನೀರು ಹರಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು. ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ನಮ್ಮ ನಾಯಕರ ಬಗ್ಗೆ ಶಾಸಕರು ಆವೇಶದಿಂದ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಸಹ ಆವೇಶದಿಂದ ಮಾತನಾಡಿದ್ದೆವು ಎಂದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ