ರಾಜಕಾರಣ:ಬಿಬಿಎಂಪಿ ಗುತ್ತಿಗೆದಾರರ ಬಿಲ್ ಪಾವತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಈ ಹಿಂದೆ ನಾವು 40 % ಕಮಿಷನ್, ಪೇಸಿಎಂ ಅಭಿಯಾನ ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೂಡ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರು.
ಇನ್ನು ಲೋಕಾಯುಕ್ತ ಸಂಸ್ಥೆ ಕೂಡ ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 137 ಕೋಟಿ ಹಣ ಕಾಮಗಾರಿ ಆಗದೇ ಬಿಲ್ ಪಾವತಿ ಮಾಡಲಾಗಿದೆ ಎಂದು ವರದಿ ನೀಡಿದೆ. ನಾವು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸದನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅವರ ಸಲಹೆ, ಮಾರ್ಗದರ್ಶನದಂತೆ ನಾವು ಕ್ರಮ ಕೈಗೊಂಡು ತನಿಖೆ ಮಾಡುತ್ತಿದ್ದೇವೆ. ಯಾರು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿ ಆಗಲಿದೆ. ಈ ಕಾಮಗಾರಿಗಳು ವ್ಯವಸ್ಥಿತ ರೂಪದಲ್ಲಿ ನಡೆಯಬೇಕು. ರಸ್ತೆ ನಿರ್ಮಾಣವಾಗದೇ ಬಿಲ್ ಪಾವತಿಸಲು ಮುಂದಾಗಿದ್ದರು. ಸಂತೋಷ್ ಪಾಟೀಲ್ ಪ್ರಕರಣದಂತೆ ಅನೇಕ ಪ್ರಕರಣಗಳು ಇವೆ. ನಮ್ಮ ವಿರುದ್ಧ ಯಾರು ಎಷ್ಟು ಮಾತನಾಡುತ್ತಾರೋ ಮಾತನಾಡಲಿ. ನಾವು ಯಾರ ನಾಲಿಗೆಗೂ ಬೀಗ ಹಾಕುವುದಿಲ್ಲ” ಎಂದು ತಿಳಿಸಿದರು.
ಬಿಬಿಎಂಪಿ ಕಾಮಗಾರಿಗಳ ಅಕ್ರಮ ತನಿಖೆಗೆ ಎಸ್ಐಟಿ ರಚಿಸಿರುವ ಬಗ್ಗೆ ಕೇಳಿದಾಗ, “ನಾನು ಯಾವುದೇ ಎಸ್ಐಟಿ ರಚನೆ ಮಾಡಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವಾಗ ಯಾವ ಕಾಮಗಾರಿಗೆ ಟೆಂಡರ್ ಆಯಿತು, ಕಾಮಗಾರಿಗೆ ಯಾವಾಗ ಅನುಮತಿ ಸಿಕ್ಕಿತು, ಯಾವಾಗ ಕಾಮಗಾರಿ ಮುಗಿಯಿತು, ಯಾವಾಗ ಬಿಲ್ ಪಾಸ್ ಆಗಿದೆ, ಕಾಮಗಾರಿ ಗುಣಮಟ್ಟ ಹೇಗಿದೆ ಎಂದು ಪರಿಶೀಲನೆ ಮಾಡಬೇಕಿದೆ. 2 ಕೋಟಿ ಕಾಮಗಾರಿಯಲ್ಲಿ 1.99 ಕೋಟಿ ಬಿಲ್ ನೀಡಿದ್ದು ಕೇವಲ 1 ಲಕ್ಷ ಮಾತ್ರ ಬಾಕಿ ಉಳಿಸಿದ್ದಾರೆ. ಇಂತಹ ಸುಮಾರು 25 ಪ್ರಕರಣಗಳಿವೆ. ಈ ಬಗ್ಗೆ ನಾನು ಮಾಹಿತಿ ಪಡೆಯಬೇಕಿದೆ” ಎಂದು ತಿಳಿಸಿದರು.
ಅಧಿಕಾರಿಗಳು ಈವರೆಗೂ ಎಷ್ಟು ಕಾಮಗಾರಿಗಳ ಮಾಹಿತಿ ನೀಡಿದ್ದಾರೆ ಎಂದು ಕೇಳಿದಾಗ, “ಅಧಿಕಾರಿಗಳು ಇನ್ನು ಮಾಹಿತಿ ನೀಡಿಲ್ಲ. ನಾನು ಕೆಲವು ಮಾನದಂಡಗಳನ್ನು ಹಾಕಿದ್ದು, ಅದರ ಮೇಲೆ ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು 26 ಅಂಶಗಳ ಬಗ್ಗೆ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ನಾನು ಹಳ್ಳಿಯಿಂದ ಬಂದಿರುವವನು ನನಗೆ ಅವರಷ್ಟು ದೊಡ್ಡ ಅನುಭವವಿಲ್ಲ. ನನ್ನ ಅನುಭವ ಸಣ್ಣದು. ಅದರ ಆಧಾರದ ಮೇಲೆ ನಾನು ಮಾಹಿತಿ ಕೇಳಿದ್ದೇನೆ” ಎಂದರು.
Finance support: ಮೃತ ರೈತ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ; ಆರ್ಥಿಕ ನೆರವು..!
Thimmakka: ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು..! ಆರೋಗ್ಯ ವಿಚಾರಿಸಿದ ಸಚಿವ ಈಶ್ವರ್ ಖಂಡ್ರೆ..!
BJP Protest: ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ