Tumakuru News: ತುಮಕೂರು: ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆಗೆ ಬೆದರಿಕೆ ಹಾಕಿದವನನ್ನು ಮಹಾರಾಷ್ಟ್ರದಲ್ಲಿ ಅರೆಸ್ಟ್ ಮಾಡಿ ತರಲಾಗಿದೆ. ಆರೋಪಿ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಿಯಾಂಕ ಖರ್ಗೆಗೆ ಭದ್ರತೆಯನ್ನು ಹೆಚ್ಚಿಸುತ್ತೇವೆ. ಆರೋಪಿ ಹಿಂದೆ ಯಾರಾದರೂ ಇದ್ದಾರಾ ಇಲ್ಲವಾ ಎಂದು ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.
ಸರ್ಕಾರಿ ಜಾಗದಲ್ಲಿ ಸಂಘ ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಯಾವುದೇ ಸಂಘ ಸಂಸ್ಥೆಗಳು ಖಾಸಗಿಯಾಗಿ ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಪಡೆಯಬೇಕು. ಈ ಆದೇಶ 2013 ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಮಾಡಿದ್ದು. ನಾವು ಅದನ್ನು ಇಂಪ್ಲಿಮೆಂಟ್ ಮಾಡಿರಲಿಲ್ಲ. ಇತ್ತಿಚೆಗೆ ಕೆಲವು ಸಂಘಟನೆಗಳು ಸರ್ಕಾರಿ ಸ್ಥಳ ದುರುಪಯೋಗ ಮಾಡಿಕೊಳ್ತಾ ಇರೋದು ಕಂಡು ಬಂದಿದೆ.
ಹಾಗಾಗಿ ನಿನ್ನೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿ ಶಾಲಾ ಕಾಲೇಜು, ಧಾರ್ಮಿಕ ಸ್ಥಳಗಳನ್ನು ಖಾಸಗಿಯವರಿಗೆ ಕೊಡಬಾರದು ಎಂದು ತೀರ್ಮಾನ ಮಾಡಲಾಗಿದೆ. ಸರ್ಕಾರಿ ಜಾಗದಲ್ಲಿ ಹೋಗಿ ಗುಂಪು ಕಟ್ಟಿಕೊಂಡು ಕುಳಿತರೇ ಯಾರೂ ಬೇಡ ಅನ್ನಲ್ಲ. ಕಾರ್ಯಕ್ರಮಗಳನ್ನು ಮಾಡಬಾರದು ಅಷ್ಟೇ. ಕೇವಲ ಆರ್ ಎಸ್ ಎಸ್ ಮಾತ್ರ ನೋಂದಣಿ ಮಾಡಬೇಕು ಅಂತಲ್ಲ. ಎಲ್ಲಾ ಖಾಸಗಿ ಸಂಸ್ಥೆಗಳು ನೋಂದಣಿ ಆಗಬೇಕು. ಆರ್ ಎಸ್ ಎಸ್ ಒಂದು ಖಾಸಗಿ ಸಂಸ್ಥೆ ಎಂದು ಗೃಹಸಚಿವರು ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಪರಮೇಶ್ವರ್ ಒಡೆತನದ ಸಿದ್ದಾರ್ಥ ಕಾಲೇಜು ಆವರಣದಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮ ನಡೆದಿದ್ದ ವಿಚಾರದ ಬಗ್ಗೆ ಮಾತನಾಡಿರುವ ಜಿ.ಪರಮೇಶ್ವರ್, ಬಹಳ ಹಿಂದೆ ಅಂದ್ರೆ 20 ವರ್ಷಗಳ ಹಿಂದೆ ನಮ್ಮ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಆರ್ ಎಸ್ ಎಸ್ ಕ್ಯಾಂಪ್ ನಡೆದಿತ್ತು. ಎಸ್ ಎಸ್ ಐ ಟಿ ಹಾಗೂ ಹೆಗ್ಗೆರೆ ಕಾಲೇಜಿನಲ್ಲಿ ಆರ್ ಎಸ್ ಎಸ್ ಕ್ಯಾಂಪ್ ನಡೆದಿತ್ತು. ಆಗ ನಾವು ಅನುಮತಿ ಕೊಟ್ಟಿದ್ವಿ.ನಮ್ಮ ಪ್ರಾಂಶುಪಾಲರು ಅನುಮತಿ ಕೊಟ್ಟಿದ್ದರು ಎಂದಿದ್ದಾರೆ.
ನಾಳೆ ತುಮಕೂರಿನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ವಿಚಾರದ ಬಗ್ಗೆ ಮಾತನಾಡಿರುವ ಜಿ.ಪರಮೇಶ್ವರ್, ಪಥ ಸಂಚಲನ ನಡೆಸೋದಾದರೆ ಪರ್ಮಿಷನ್ ತಗೋಬೇಕು. ಪೊಲೀಸರಿಂದ ಪರ್ಮಿಷನ್ ತಗೋಬೇಕು
ಎಂದು ಗೃಹಸಚಿವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಹಣ ಮಾಡಲು ಆಸ್ತಿ ಪರಿವರ್ತನೆ ಮಾಡ್ತಿದ್ದಾರೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಕುಮಾರಸ್ವಾಮಿ ಅವರು ಸ್ಪೆಸಿಫಿಕ್ ಆಗಿ ಹೆಳಲಿ.
ಅವರು ಮುಖ್ಯಮಂತ್ರಿ ಆಗಿದ್ದವರು. ಅವರು ಹೇಳಿದ ಮೇಲೆ ನಾವು ಸ್ವಲ್ಪ ಗಂಭೀರವಾಗಿ ಪರಿಗಣಿಸ್ತಿವಿ. ಸ್ಪೆಸಿಫಿಕ್ ಆಗಿ ಇಂಥ ಕಡೆ ಹಣ ಮಾಡುತ್ತಿದ್ದಾರೆ ಅಂತ ಕುಮಾರಸ್ವಾಮಿ ಹೇಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

