ಮಾಜಿ ಸಿಎಂ ಎಸ್. ಎಂ ಕೃಷ್ಣ ಅವ್ರ ಸ್ಮರಣಾರ್ಥದಲ್ಲಿ ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಜಿಲ್ಲೆಯ ಸಚಿವ ಹಾಗೂ ಶಾಸಕರು ನಿರ್ಧ ರಿಸಿದ್ದಾರೆ. ಆ ಈ ಮೂಲಕ ಮಂಡ್ಯದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ತಯಾರಿ ಆರಂಭಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ನಿವಾಸದಲ್ಲಿ ಇಂದು ಭೋಜನ ಕೂಟಸಹಿತ ನಡೆದ ಸಭೆ ನಡೆಸಿದ್ರು. ಈ ಸಭೆಯಲ್ಲಿ ಜಿಲ್ಲೆಯ ಶಾಸಕರು, ಮೇಲ್ಮನೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡರು. ಪಕ್ಷದ ಶಕ್ತಿ ಪ್ರದರ್ಶನದ ಮೂಲಕ ರಾಜಕೀಯ ಎದುರಾಳಿಗಳಿಗೆ ಸಂದೇಶ ಕೊಡುವಂತೆ ಬೃಹತ್ ಆಗಿ ಸಂಘಟಿಸಲು ಸಭೆ ನಿರ್ಧರಿಸಿತು.
ಎಸ್.ಎಂ.ಕೃಷ್ಣ ಅವರಿಗೆ ಭಾವ ನಮನ, ಗೀತ ನಮನ, ಚಿತ್ರ ನಮನ, ಪುಷ್ಪ ನಮನ ಹಾಗೂ ದೀಪ ನಮನ ಒಳಗೊಂಡಂತೆ ಐದು ರೂಪದಲ್ಲಿ ನಮನ ಸಲ್ಲಿಸಲು ಸಭೆ ಬಯಸಿತು. ಈ ಸಂಬಂಧ ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆ ರಚಿಸಿ, ಸಂಚಾಲಕರಾಗಿ ಮೇಲ್ಮನೆ ಸದಸ್ಯ ದಿನೇಶ್ ಗೂಳಿಗೌಡ ಅವರನ್ನು ನೇಮಿಸ ಲಾಗಿದೆ. ಸಿಎಂ, ಡಿಸಿಎಂ ಹಾಗೂ ಪಕ್ಷದ ಪ್ರಮುಖರ ಸಮಯಾವಕಾಶ ಪಡೆದುಕೊಂಡು ದಿನಾಂಕ ನಿರ್ಧರಿಸಲು ಸಭೆ ಬಯಸಿತು.
“ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಎಸ್.ಎಂ.ಕೃಷ್ಣ ಅವರು ಜಿಲ್ಲೆಯ ಹೆಮ್ಮೆಯಾಗಿದ್ದು, ಅವರ ಸ್ಮರಣಾರ್ಥ ದೊಡ್ಡ ಮಟ್ಟದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಡಿಸಿಎಂ ಶಿವಕುಮಾರ್ ಅವರು ವಿದೇಶ ಪ್ರವಾಸದಿಂದ ಮರಳಿದ ಬಳಿಕ ಮತ್ತೊಮ್ಮೆ ಸಭೆ ನಡೆಸಿ, ರೂಪುರೇಷೆ ಅಂತಿಮಗೊಳಿಸಲಾಗುವುದು,” ಎಂದು ಚಲುವರಾಯಸ್ವಾಮಿ ಸಭೆ ಬಳಿಕ ತಿಳಿಸಿದರು.
ಶಾಸಕರಾದ ರವಿ ಗಣಿಗ, ಉದಯ್ ಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮರಿತಿಬ್ಬೇಗೌಡ, ಮಂಡ್ಯ ಡಿಸಿಸಿ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ವೆಂಕಟ ರಮಣೇಗೌಡ (ಸ್ಟಾರ್ ಚಂದ್ರು), ಸತ್ಯಾನಂದ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.
ಇನ್ನು ಸಂಕ್ರಾಂತಿ ವೇಳೆಗೆ ಸರಕಾರ ಇರಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿರುದ್ಧ ಚಲುವರಾಯಸ್ವಾಮಿ ಕಿಡಿಕಾರಿದರು. ”ಸರಕಾರದ ಭವಿಷ್ಯವನ್ನು ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರಾ? ಕಳೆದ ಮೂರು ಚುನಾವಣೆಗಳಲ್ಲಿ ರಾಜ್ಯದ ಜನರು ಕೊಟ್ಟಿರುವ ತೀರ್ಪು ಏನು? ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಿದ್ದಾರಾ? ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ” ಎಂದು ಹೇಳಿದರು.