ಇನ್ನಾದರೂ ಬಿಜೆಪಿಗರಿಗೆ ಜ್ಞಾನೋದಯವಾಗಲಿ, ಸಂವಿಧಾನದ ಆಶಯ ಅರಿವಾಗಲಿ: ಸಚಿವ ಪ್ರಿಯಾಂಕ್ ಖರ್ಗೆ

Political News: ಈ ಬಾರಿ ದಸರಾವನ್ನು ಬಾನು ಮುಷ್ತಾಕ್ ಅವರು ಉದ್ಘಾಟಿಸುತ್ತಿರುವುದರಿಂದ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಕೋರ್ಟ್‌ನಲ್ಲಿಯೂ ಕೇಸ್ ಹಾಕಿ, ಬಾನು ಅವರು ಹಿಂದೂ ಹಬ್ಬವನ್ನು ಉದ್ಘಾಟನೆ ಮಾಡುವುದು ಬೇಡವೆಂದು ವಾದಿಸಿದ್ದರು. ಆದರೆ ಇದೀಗ ಕೋರ್ಟ್‌ನಲ್ಲಿ ಅವರೆಲ್ಲರಿಗೂ ಹಿನ್ನೆಡೆಯಾಗಿ, ಬಾನು ಮುಷ್ತಾಕ್ ಅವರು ದಸರಾವನ್ನು ಉದ್ಘಾಟಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಇದನ್ನು ವಿರೋಧಿಸಿದವರಿಗೆ ಮುಖಭಂಗವಾಗಿದೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ, “ಧರ್ಮ ನಿರಪೇಕ್ಷತೆ“ ನಮ್ಮ ಸಂವಿಧಾನದಲ್ಲಿ ಮೂಲಭೂತವಾಗಿರುವ ತತ್ವ. ಸಂವಿಧಾನದತ್ತವಾಗಿ ಆಯ್ಕೆಯಾದ ಸರ್ಕಾರದ ನಿರ್ಧಾರಗಳು ಹಾಗೂ ಆಚರಣೆಗಳು ಧರ್ಮ ನಿರಪೇಕ್ಷತೆಯಿಂದ ಕೂಡಿರಬೇಕಾಗುತ್ತದೆ ಎಂದಿದ್ದಾರೆ.

ಹೈಕೋರ್ಟಷ್ಟೇ ಅಲ್ಲ ಸುಪ್ರೀಂ ಕೋರ್ಟ್ ಕೂಡ ಕೋಮುವಾದದ ಪ್ರತಿಪಾದಕರಿಗೆ ಮುಖಭಂಗ ಮಾಡಿದೆ. ಶ್ರೀಮತಿ ಬಾನು ಮುಷ್ತಾಕ್ ಅವರು ನಾಡಹಬ್ಬ ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಹಾಕಿದ್ದ ಅರ್ಜಿಯು ವಿಚಾರಣೆಗೂ ಅರ್ಹವಲ್ಲದ್ದು ಎಂದು ವಜಾಗೊಳಿಸಿ ದೇಶದ ಸಮಗ್ರತೆಯ ಆಶಯವನ್ನು ಎತ್ತಿ ಹಿಡಿದಿದೆ.

ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿದ್ದು ಅರ್ಜಿ ವಿಚಾರಣೆಯನ್ನಷ್ಟೇ ಅಲ್ಲ, ಕೋಮುವಾದದ ನಿರಾಕರಣೆ, ದ್ವೇಷದ ನಿರಾಕರಣೆ, ಸಂವಿಧಾನ ವಿರೋಧಿ ನೀತಿಯ ನಿರಾಕರಣೆ, ಮಹಿಳಾ ವಿರೋಧಿತನದ ನಿರಾಕರಣೆ, ಮನುವಾದದ ನಿರಾಕರಣೆ.

ಸುಪ್ರೀಂ ಕೋರ್ಟ್ ಅರ್ಜಿದಾರರ ವಾದವನ್ನೇ ಕೇಳಲು ತಯಾರಿಲ್ಲದೆ, ವಿಚಾರಣೆಗೂ ಮನ್ನಣೆ ನೀಡದೆ ಸ್ಪಷ್ಟವಾಗಿ ಕೋಮು ಪ್ರತಿಪಾದನೆಯನ್ನು ಎತ್ತಿ ಬಿಸಾಡಿದೆ. ಇನ್ನಾದರೂ ಬಿಜೆಪಿಗರಿಗೆ ಜ್ಞಾನೋದಯವಾಗಲಿ, ಸಂವಿಧಾನದ ಆಶಯ ಅರಿವಾಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

About The Author