ಕರ್ನಾಟಕ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ತಯಾರಿಸುವಂತೆ, ಸಚಿವರಾದ ಎನ್.ಎಸ್. ಬೋಸರಾಜು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ವಿಕಾಸಸೌಧದ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಸ್ವಿಸ್ನೆಕ್ಸ್ ಇಂಡಿಯಾದ ಸಿಇಓ & ಕೌನ್ಸಲ್ ಜೆನರಲ್ ಡಾ. ಎಂಜೆಲಾ ಹೊನೆಗ್ಗರ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು.
ಸಭೆ ಬಳಿಕ ಮಾತನಾಡಿದ ಎನ್.ಎಸ್. ಭೋಸರಾಜು, ಇತ್ತೀಚೆಗೆ ಸ್ವಿಡ್ಜರ್ಲೆಂಡ್ನಲ್ಲಿ ನಡೆದ ಸ್ವಿಸ್ನೆಕ್ಸ್ ಕ್ವಾಂಟಮ್ ಹಾಗೂ ಜೆಸ್ಡಾ ಸಮ್ಮೇಳನದಲ್ಲಿ ಭಾಗಿಯಾಗಿದ್ವಿ. eth ಜ್ಯೂರಿಕ್, ಸೆರ್ನ್ಗೆ ಭೇಟಿ ನೀಡಿ, ಕ್ವಾಂಟಮ್ ಕ್ಷೇತ್ರದ ಸಂಶೋಧನೆ ಹಾಗೂ ಪಾಲುದಾರಿಕೆಯ ಬಗ್ಗೆ, ಅಲ್ಲಿನ ಮುಖ್ಯಸ್ಥರು ಹಾಗೂ ವಿಜ್ಞಾನಿಗೊಳೊಂದಿಗೆ ಸಭೆ ನಡೆಸಲಾಗಿದೆ. ಈ ಸಭೆಗಳಲ್ಲಿ ನಡೆದ ಚರ್ಚೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಸ್ವಿಸ್ನೆಕ್ಸ್ ಕೌನ್ಸಿಲ್ ಜೆನರಲ್ ಜೊತೆ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಹಾಗೂ ಸ್ವಿಡ್ಜರ್ಲೆಂಡ್ ಮಧ್ಯೆ ಸಂಶೋಧನೆ ಹಾಗೂ ಉದ್ಯಮಗಳ ತಂತ್ರಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯ್ತು. ಈ ಪ್ರಸ್ತಾವಕ್ಕೆ ಸ್ವಿಸ್ನೆಕ್ಸ್ ಸಿಇಓ & ಜೆನರಲ್ ಇನ್ ಇಂಡಿಯಾ ಡಾ ಎಂಜೆಲಾ ಹೊನೆಗ್ಗರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಬೆಂಗಳೂರು ನಗರ ದೇಶದ ಕ್ವಾಂಟಮ್ ಸ್ಟಾರ್ಟ್ಅಪ್ ಕ್ಯಾಪಿಟಲ್ ಆಗಿದೆ. ಹಲವಾರು ಕ್ವಾಂಟಮ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ಟಾರ್ಟ್ಅಪ್ಗಳು, ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲೇ ಅತಿ ಹೆಚ್ಚು ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಾವಿಣ್ಯತೆಯನ್ನು ಹೊಂದಿರುವ ಮಾನವ ಸಂಪನ್ಮೂಲವೂ ಲಭ್ಯವಿದೆ. ದೇಶದಲ್ಲೇ ಮೊದಲ ಕ್ಯೂ-ಸಿಟಿಯನ್ನು ನಿರ್ಮಾಣಕ್ಕೆ ಭೂಮಿಯನ್ನೂ ಮಂಜೂರು ಮಾಡಲಾಗಿದೆ. ಈ ಎಲ್ಲಾ ವಿಷಯಗಳನ್ನು ಉತ್ತಮ ರೀತಿಯಲ್ಲಿ ಪ್ರಚಾರ ಕೈಗೊಳ್ಳಲು, ಮ್ಯಾಪ್ ರಚಿಸುವುದು ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ರಚಿಸುವಂತೆ, ಅಧಿಕಾರಿಗಳಿಗೆ ಸೂಚಿಸಿದ್ದಾರೆ.




